ಮತ್ತೆ ಕಿರಿಕ್ ಮಾಡಿಕೊಂಡ ರಜತ್ ಕಿಶನ್; ಎಫ್ಐಆರ್ ದಾಖಲು
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರಿಗೆ ಹೊಸ ಸಂಕಷ್ಟ ಶುರುವಾಗಿದೆ. ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ. ಡಾಗ್ ಸತೀಶ್ ಜೊತೆ ಸ್ನೇಹ ಮಾಡಬಾರದು ಎಂದು ರಜತ್ ಕಿಶನ್ ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ (Rajath Kishan) ಅವರು ಪದೇಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಡಾಗ್ ಸತೀಶ್ (Dog Sathish) ವಿಷಯದಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸತೀಶ್ ಜೊತೆ ಸ್ನೇಹ ಮಾಡಿದವರಿಗೆ ಬೆದರಿಕೆ ಸಂದೇಶ ಕಳಿಸಿದ ಆರೋಪ ರಜತ್ ಮೇಲೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಅವರು ರಜತ್ ಕಿಶನ್ ವಿರುದ್ಧ ದೂರು ನೀಡಿದ್ದಾರೆ. ರಜತ್ ಅವರು ಫೋನ್ ಕರೆ ಮುಖಾಂತರ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಡಾಗ್ ಸತೀಶ್ ಜೊತೆಗಿನ ಸ್ನೇಹ ಬಿಡಬೇಕೆಂದು ಬೆದರಿಕೆ ಹಾಕಲಾಗಿದೆ. ದೂರುದಾರರ ಕಾರಿನ ಫೋಟೋ ಕಳಿಸಿ ರಜತ್ ಬೆದರಿಸಿದ್ದಾರೆ. ಇದರಿಂದಾಗಿ ರಜತ್ ಅವರಿಗೆ ಸಂಕಷ್ಟ ಎದರಾಗಿದೆ.
‘ಸರ್ ಇದು ರಜತ್ ಬುಜ್ಜಿ. ಕಾಲ್ ಮಾಡುತ್ತಿದ್ದೇನೆ. ವಾಪಸ್ ಕಾಲ್ ಮಾಡ್ತೀರಾ ಇಲ್ಲ, ನಾವೇ ಒಳಗೆ ನುಗ್ಬೇಕಾ’ ಎಂದು ಗಿರೀಶ್ ಕುಮಾರ್ ಅವರಿಗೆ ರಜತ್ ಕಿಶನ್ ಅವರು ವಾಯ್ಸ್ ನೋಟ್ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದಾರೆ. ಅಲ್ಲದೇ, ಕಾನ್ಫರೆನ್ಸ್ ಕಾಲ್ನಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಕೂಡ ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಕಿಶನ್ ಹಾಗೂ ಕಿರಣ್ ವಿರುದ್ಧ BNS 351(2), 352 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ ರಜತ್ ಕಿಶನ್ ಅವರು ಗಿರೀಶ್ ಕುಮಾರ್ ಅವರಿಗೆ ಸಂದೇಶ ಕಳಿಸಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮಾಜಿ ಸ್ಪರ್ಧಿ ಡಾಗ್ ಸತೀಶ್ ಜೊತೆ ಸ್ನೇಹ ಮಾಡಬಾರದು ಎಂದು ಬೆದರಿಸಿದ್ದಾರೆ. ಅಲ್ಲದೇ ತಮ್ಮ ಕಾರಿನಲ್ಲಿ ಬಂದು ಕುಳಿತುಕೊಂಡು ಡಾಗ್ ಸತೀಶ್ ಮನೆ ಎಲ್ಲಿದೆ ಅಂತ ತೋರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್
ರಜತ್ ಕಿಶನ್ ಅವರಿಗೆ ವಿವಾದಗಳು ಹೊಸದೇನೂ ಅಲ್ಲ. ಈ ಮೊದಲು ಕೂಡ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ಪರಿಣಾಮದಿಂದ ಅವರನ್ನು ಬಂಧಿಸಲಾಗಿತ್ತು. ಅಲ್ಲದೇ ಮೈಸೂರಿನ ಪಾರಂಪರಿಕ ಕಟ್ಟದ ಎದುರು ಸಿಗರೇಟ್ ಸೇದುತ್ತಾ ವಿಡಿಯೋ ಚಿತ್ರೀಕರಣ ಮಾಡಿದ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




