‘ಲೇ ಕಳಸ್ರಯ್ಯ ಇವಳನ್ನ’; ಸುಕೃತಾ ಮೇಲೆ ರವಿಚಂದ್ರನ್ ಸಿಟ್ಟಾಗಿದ್ದೇಕೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಸುಕೃತಾ ಅವರ ಆಧುನಿಕ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ‘ಪೂಕಿ’ ಎಂಬ ಪದ ಬಳಸಿದ್ದಕ್ಕೆ ರವಿಚಂದ್ರನ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಕೃತಾ ಅವರ ಹೇಳಿಕೆಗಳು ಮತ್ತು ರವಿಚಂದ್ರನ್ ಅವರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಟಿ ಸುಕೃತಾ ನಾಗ್ (Sukrutha Nag) ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವರು. ಅವರಿಗೆ ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಮೊದಲು ನಟಿಸಿದ್ದು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ. ಆ ಬಳಿಕ ಅವರು ‘ಲಕ್ಷಣ’ ಧಾರಾವಾಹಿಯಲ್ಲಿ ನಟಿಸಿದರು. ಈಗ ಸುಕೃತಾ ಅವರು ರವಿಚಂದ್ರನ್, ರಚಿತಾ ರಾಮ್ ಜಡ್ಜ್ ಆಗಿರೋ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಸ್ಪರ್ಧಿಸಿದ್ದಾರೆ. ಅವರ ಮಾತುಗಳನ್ನು ಕೇಳಿ ರವಿಚಂದ್ರನ್ ಅವರು ಹುಸಿಗೋಪ ಮಾಡಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುಕೃತಾ ಅವರು ಜೆನ್-ಜಿ ಅಲ್ಲ. ಆದಾಗ್ಯೂ ಜೆನ್-ಜಿ ಗಳಿಗೆ ಇರೋ ಜ್ಞಾನ ಅವರಲ್ಲಿ ಇದೆ. ಅವರು ಆಧುನಿಕ ರಿಲೇಶನ್ಶಿಪ್ಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದಾರೆ. ಇದನ್ನು ಅವರು ‘ಭರ್ಜರಿ ಬ್ಯಾಚುಲರ್ಸ್ 2’ ವೇದಿಕೆ ಮೇಲೆ ಹೇಳಿಕೊಳ್ಳುತ್ತಿದ್ದಾರೆ. ಈ ಮೊದಲು ಸಿಚ್ಯುವೇಶನ್ಶಿಪ್, ಬೆಂಚಿಂಗ್ ರೀತಿಯ ರಿಲೇಶನ್ಶಿಪ್ಗಳ ಅರ್ಥವನ್ನು ಹೇಳಿ ಸುಕೃತಾ ಅವರು ರವಿಚಂದ್ರನ್ ಅವರ ತಲೆ ತಿಂದಿದ್ದರು. ಈಗ ಪೂಕಿ ಮ್ಯಾನ್ ಎಂದು ಹೇಳಿ ಅದರ ವಿವರಣೆ ನೀಡಿದ್ದಾರೆ.
ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ನ ಪೂಕಿ ಗಯ್ ಎಂದು ಕರೆದಿದ್ದಾರೆ ಸುಕೃತಾ. ಪೂಕಿ ಎಂಬ ಶಬ್ದವನ್ನೇ ಕೇಳದಿದ್ದ ರವಿಚಂದ್ರನ್, ‘ಇದೇನೋ ಪೂಕಿ ಅನ್ನೋ ಶಬ್ದನ ತೆಗೆದುಕೊಂಡು ಬಂದಳು’ ಎಂದು ಹೇಳಿದರು. ‘ಪೂಕಿ ಎಲ್ಲರಿಗೂ ಇಷ್ಟ’ ಎಂದು ಸುಕೃತಾ ವಿವರಿಸಿದರು.
View this post on Instagram
‘ಪೂಕಿ ವರ್ಷನ್ ನನಗೆ ಬೇಡ. ಇರೋ ವರ್ಷನ್ ಸಾಕು. ನಿನ್ನ ವರ್ಷನ್ಗೆ ಬರೋದಿಲ್ಲ. ಲೇ ಕಳಸ್ರಯ್ಯ ಇವಳನ್ನ. ಇಲ್ದಿರೋ ವರ್ಷನ್ ಮಾಡ್ತಾಳೆ. ಜಂಟಲ್ಮೆನ್ ಎಂದು ಹೇಳಬಹುದಲ್ಲ. ಪೂಕಿ ವರ್ಷನ್ ಅಂದ್ರೆ ಏನು’ ಎಂದು ತಲೆಕೆರೆದುಕೊಂಡರು ರವಿಚಂದ್ರನ್ ಅವರು. ಕ್ಯೂಟ್ ಆಗಿರುವ ವಿಚಾರಗಳನ್ನು ವಿವರಿಸಲು ಬಳಕೆ ಮಾಡುವ ಶಬ್ದವೇ ಪೂಕಿ. ಈ ಮೂಲಕ ರಕ್ಷಕ್ ಅವರು ಸುಂದರವಾಗಿದ್ದಾರೆ ಎಂಬುದು ಸುಕೃತಾ ಅಭಿಪ್ರಾಯ.
ಇದನ್ನೂ ಓದಿ: ರಿಯಾಲಿಟಿ ಶೋ ವಿವಾದ: ಚಾಮುಂಡೇಶ್ವರಿ ಭಕ್ತರಿಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್
ಇತ್ತೀಚೆಗೆ ರಕ್ಷಕ್ ಬುಲೆಟ್ ವಿವಾದ ಮಾಡಿಕೊಂಡಿದ್ದರು. ಅವರು ಚಾಮುಂಡೇಶ್ವರಿಗೆ ಅವಮಾನ ಮಾಡಿದ ಆರೋಪವನ್ನು ಎದುರಿಸಿದ್ದರು. ಆ ಬಳಿಕ ಅವರು ಕ್ಷಮೆ ಕೇಳಿ ಈ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







