‘ಜನ ನಾಯಗನ್’ ಚಿತ್ರಕ್ಕಾಗಿ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಮುಂದಾದ ಕೆವಿಎನ್?
ದಳಪತಿ ವಿಜಯ್ ಅವರ ಬಹುನಿರೀಕ್ಷಿತ 'ಜನನಾಯಗನ್' ಚಿತ್ರದ ಬಿಡುಗಡೆ ಸೆನ್ಸಾರ್ ವಿಳಂಬದಿಂದ ಅನಿಶ್ಚಿತವಾಗಿದೆ. ವಿತರಕರ ಹಿತಾಸಕ್ತಿ ರಕ್ಷಿಸಲು, ಕೆವಿಎನ್ ಪ್ರೊಡಕ್ಷನ್ಸ್ ಹಣ ಮರುಪಾವತಿಗೆ ಮುಂದಾಗಿದ್ದು, ನಿರ್ಮಾಪಕರ ಆರ್ಥಿಕ ಹೊರೆ ಹೆಚ್ಚಿಸಿದೆ. ರಿಮೇಕ್ ಚರ್ಚೆ, ಪೈರಸಿ ಭೀತಿ ಮತ್ತು ರಾಜಕೀಯ ಎಂಟ್ರಿ ನಡುವೆ ಚಿತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ.

ದಳಪತಿ ವಿಜಯ್ (Vijay) ನಟನೆಯ ಬಹುನಿರೀಕ್ಷಿತ ‘ಜನನಾಯಗನ್’ ಚಿತ್ರದ ಬಿಡುಗಡೆಗೆ ಎದುರಾಗಿರುವ ಅನಿಶ್ಚಿತತೆ ಮುಂದುವರಿದಿದೆ. ಸತತ ಪ್ರಯತ್ನಗಳ ಹೊರತಾಗಿಯೂ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಈ ಅನಿರೀಕ್ಷಿತ ವಿಳಂಬವು ಚಿತ್ರದ ಮೇಲೆ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡಿರುವ ವಿತರಕರು ಹಾಗೂ ಇತರ ಪಾಲುದಾರರಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ.
ಚಿತ್ರರಂಗದ ಮೂಲಗಳ ಪ್ರಕಾರ, ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ವಿತರಕರ ಹಿತರಕ್ಷಣೆಗಾಗಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಬಗೆಹರಿದು ಸಿನಿಮಾ ಬಿಡುಗಡೆಗೆ ಹಸಿರು ನಿಶಾನೆ ಸಿಗುವವರೆಗೆ, ವಿತರಕರಿಗೆ ಹಣವನ್ನು ಮರುಪಾವತಿ ಮಾಡಲು ನಿರ್ಮಾಪಕರು ಆಲೋಚಿಸುತ್ತಿದ್ದಾರೆ ಎಂದು ವರದಿ ಆಗಿದೆ. ನಂತರ ಚಿತ್ರ ಬಿಡುಗಡೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಿರ್ಧಾರದಿಂದ ನಿರ್ಮಾಪಕರ ಮೇಲಿನ ಆರ್ಥಿಕ ಹೊರೆ ಹಾಗೂ ರಿಸ್ಕ್ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.
ನಟ ವಿಜಯ್ ಅವರ ಅಪಾರ ಜನಪ್ರಿಯತೆ ಮತ್ತು ಅವರ ರಾಜಕೀಯ ಎಂಟ್ರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿರುವುದು ನಿಜವಾದರೂ, ‘ಜನನಾಯಗನ್’ ಚಿತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇದು ರಿಮೇಕ್ ಸಿನಿಮಾ ಎಂಬ ಚರ್ಚೆಗಳು ಈಗಾಗಲೇ ಜೋರಾಗಿದ್ದು, ಇದರ ಬೆನ್ನಲ್ಲೇ ಪೈರಸಿ ಕಾಟ ಕೂಡ ಚಿತ್ರದ ಬಿಸಿನೆಸ್ಗೆ ಹೊಡೆತ ನೀಡುವ ಭೀತಿ ಇದೆ. ಅಲ್ಲದೆ, ಬಿಡುಗಡೆ ತಡವಾದಷ್ಟೂ ಪ್ರೇಕ್ಷಕರಲ್ಲಿರುವ ಉತ್ಸಾಹ ಮತ್ತು ಚಿತ್ರದ ಮಾರುಕಟ್ಟೆ ಮೌಲ್ಯ ಕಡಿಮೆಯಾಗುವ ಅಪಾಯವಿರುತ್ತದೆ.
ಈ ಎಲ್ಲಾ ಆರ್ಥಿಕ ಒತ್ತಡಗಳಿಂದ ಹೊರಬರಲು ಮತ್ತು ಚಿತ್ರದ ಹವಾ ಹಾಗೇ ಉಳಿಸಿಕೊಳ್ಳಲು ಸೆನ್ಸಾರ್ ಮಂಡಳಿಯಿಂದ ಆದಷ್ಟು ಬೇಗ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ವಿಜಯ್ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ‘ಜನ ನಾಯಗನ್’ ಅಲ್ಲ, ಮತ್ಯಾವುದು?
‘ಜನ ನಾಯಗನ್’ ಚಿತ್ರವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ಚಿತ್ರದಲ್ಲಿ ಮಮಿತಾ ಬೈಜು ಮುಖ್ಯ ಪಾತ್ರದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




