
‘ಟಾಕ್ಸಿಕ್’ (Toxic) ಸಿನಿಮಾ ನಾಳೆ (ಆಗಸ್ಟ್ 26) ಬಿಡುಗಡೆ ಆಗಲಿದೆ. ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗುತ್ತಲೇ ಆ ಸಿನಿಮಾವನ್ನು ಕೆಳಗೆ ಬೀಳಿಸಲು, ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯ ಬಿತ್ತುವ ಕೆಲಸ ಮಾಡುವ ವರ್ಗವೇ ಒಂದಿದೆ. ಯಶ್ ಅವರಿಗಂತೂ ಈ ‘ಉರ್ಕೊಳ್ಳೋರ’ ಸಂಖ್ಯೆ ಬಹಳ ಹೆಚ್ಚಿಗೆ ಇದೆ. ಬುಕ್ ಮೈ ಶೋಗಳಲ್ಲಿ ರೇಟಿಂಗ್ ಕಡಿಮೆ ಮಾಡಿಸುವುದು, ನೆಗೆಟಿವ್ ವಿಮರ್ಶೆಗಳನ್ನು ಹಾಕುವುದು ಈ ‘ಉರ್ಕೊಳ್ಳೋರ’ ಸಾಮಾನ್ಯ ಕೆಲಸ. ಆದರೀತ ‘ಟಾಕ್ಸಿಕ್’ ಚಿತ್ರತಂಡ ಇಂಥಹಾ ದುಷ್ಟರ ವಿರುದ್ಧ ಬ್ರಹ್ಮಾಸ್ತ್ರ ಬೀಸಿದೆ. ರಿಲೀಸ್ಗೆ ಮುನ್ನವೇ ಸಿನಿಮಾ ತಂಡವು ನ್ಯಾಯಾಲಯದಿಂದ ಇಂಥಹಾ ಪ್ರಯತ್ನಗಳ ವಿರುದ್ಧ ತಡೆಯಾಜ್ಞೆಯನ್ನು ತಂದಿದೆ.
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದ ನಿರ್ಮಾಪಕರು ಬೆಂಗಳೂರು ಸಿವಿಲ್ ಕೋರ್ಟ್ನಿಂದ ಮಧ್ಯಂತರ ನ್ಯಾಯಾಲಯದ ತಡೆಯಾಜ್ಞೆಯನ್ನು ಪಡೆದುಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಗ್ಗೆ ಸುಳ್ಳು, ದುರುದ್ದೇಶಪೂರಿತ ಅಥವಾ ಮಾನನಷ್ಟಕರವಾದ ವಿಷಯಗಳನ್ನು ಯೂಟ್ಯೂಬ್, ಸೋಶಿಯಲ್ ಮೀಡಿಯಾ ಅಥವಾ ಇತರೆಡೆ ಪ್ರಕಟಿಸುವುದನ್ನು, ಪ್ರಸಾರ ಮಾಡುವುದನ್ನು ಅಥವಾ ಹಂಚಿಕೊಳ್ಳುವುದನ್ನು ಈ ತಡೆಯಾಜ್ಞೆಯು ನಿರ್ಬಂಧಿಸಿದೆ. ಆಗಸ್ಟ್ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಉದ್ದೇಶಪೂರ್ವಕ ನೆಗೆಟಿವಿಟಿಯನ್ನು ತಡೆಯಲು ಕೆವಿಎನ್ ಪ್ರೊಡಕ್ಷನ್ಸ್ ಈ ಕಾನೂನು ಕ್ರಮವನ್ನು ಕೋರಿತ್ತು.
ಈ ತಡೆಯಾಜ್ಞೆಯು ನೈಜ ಚಲನಚಿತ್ರ ವಿಮರ್ಶೆಗಳನ್ನು ಅಥವಾ ನಿಜವಾದ ಪ್ರೇಕ್ಷಕರ ಟೀಕೆಗಳನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ವಿಮರ್ಶಕರು ಮತ್ತು ವೀಕ್ಷಕರು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದ ನಂತರ ತಮ್ಮ ಪ್ರಾಮಾಣಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಹಕ್ಕನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸುತ್ತದೆ. ಸ್ವಾಭಾವಿಕ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಮೌನಗೊಳಿಸುವ ಬದಲು, ವ್ಯವಸ್ಥಿತವಾದ ಡಿಜಿಟಲ್ ದಾಳಿಗಳನ್ನು ತಡೆಯುವುದು ಈ ಆದೇಶದ ಉದ್ದೇಶ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ:ಹಿಂದಿ ರಾಜ್ಯಗಳಲ್ಲಿ ‘ಟಾಕ್ಸಿಕ್’ ಬುಕಿಂಗ್ ಜೋರು, ಭರ್ಜರಿ ಓಪನಿಂಗ್ ಖಾತ್ರಿ
ಈ ಹಿಂದೆಯೂ ಕೆಲ ಸಿನಿಮಾ ತಂಡಗಳು, ತಮ್ಮ ಸಿನಿಮಾದ ವಿರುದ್ಧ ನೆಗೆಟಿವ್ ವಿಮರ್ಶೆಗಳನ್ನು ತಡೆಯಲು ಈ ರೀತಿಯ ತಡೆಯಾಜ್ಞೆಗಳನ್ನು ತಂದಿದ್ದವು. ಇತ್ತೀಚೆಗಿನ ಪರಿಸ್ಥಿತಿ ಗಮನಿಸಿದರೆ ಅದು ಅವಶ್ಯಕ ಎನಿಸುತ್ತದೆ. ಕೆಲ ನಟರ ಅಭಿಮಾನಿಗಳು, ಕೆಲ ನೆಗೆಟಿವ್ ವ್ಯಕ್ತಿಗಳು ದೊಡ್ಡ ಸಿನಿಮಾಗಳನ್ನು ಗುರಿ ಮಾಡಿಕೊಂಡು ಸಿನಿಮಾಕ್ಕೆ ಆನ್ಲೈನ್ನಲ್ಲಿ ಹಾನಿ ಮಾಡಲು ಪ್ರಯತ್ನಿಸುತ್ತವೆ. ಈ ಹಿಂದೆ ಕೆಲವು ಸಿನಿಮಾಗಳಿಗೆ ಈ ರೀತಿಯ ಸಮಸ್ಯೆಗಳು ಉಂಟಾಗಿವೆ. ಇತ್ತೀಚೆಗಷ್ಟೆ ಬಿಡುಗಡೆ ಆದ ಡಾಲಿ ನಿರ್ಮಾಣದ ‘ಮದರ್ ಪ್ರಾಮಿಸ್’, ಸುದೀಪ್ ಅವರ ಸಿನಿಮಾಕ್ಕೂ ಈ ಸಮಸ್ಯೆ ಎದುರಾಗಿತ್ತು. ಹಾಗಾಗಿ ಇದೀಗ ‘ಟಾಕ್ಸಿಕ್’ ತಂಡ ಈ ನಿರ್ಣಯವನ್ನು ಕೈಗೊಂಡಿದೆ.
‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ಕೆವಿಎನ್ ಮತ್ತು ಯಶ್ ಅವರು ಒಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಅನ್ನು ಗೀತೂ ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಕಿಯಾರಾ, ರುಕ್ಮಿಣಿ ವಸಂತ್, ನಯನತಾರಾ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಒಟ್ಟಿಗೆ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ