‘ಜನ ನಾಯಗನ್’ ಸಿನಿಮಾ ತಡ ಆಗಿದ್ದಕ್ಕೆ ನನಗೆ ನ್ಯಾಯ ಬೇಕು: ಗುಡುಗಿದ ವಿಜಯ್
ನಟ ವಿಜಯ್ ಅವರು ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಪ್ರಚಾರ ಭಾಷಣದಲ್ಲಿ ‘ಜನ ನಾಯಕನ್’ ಸಿನಿಮಾದ ವಿಳಂಬ ಹಾಗೂ ಕರೂರು ಕಾಲ್ತುಳಿತ ದುರಂತದ ಬಗ್ಗೆ ಆಕ್ರೋಶ ಹೊರಹಾಕಿದರು. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ದಳಪತಿ ವಿಜಯ್ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ತಿರುಚನಾಪಳ್ಳಿಯಲ್ಲಿ (ತಿರುಚಿ) ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ನಂತರ ಅಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ದಳಪತಿ ವಿಜಯ್ (Thalapathy Vijay) ಅವರು, ತಮ್ಮ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಬಿಡುಗಡೆಯ ವಿಳಂಬದ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
‘ನನ್ನನ್ನು ವಿರೋಧಿಸಲು ಎಲ್ಲಾ ಪಕ್ಷಗಳೂ ಹೇಗೆ ಒಂದಾಗಿವೆ ಎಂಬುದನ್ನು ನಾನು ನಿಮಗೆ ಹೇಳಬೇಕಾಗಿಲ್ಲ. 40ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಕರೂರ್ ಕಾಲ್ತುಳಿತದ ಘಟನೆ ಮತ್ತು ನನ್ನ ಕೊನೆಯ ಸಿನಿಮಾ ಜನ ನಾಯಗನ್ ಬಿಡುಗಡೆಯಾಗದಂತೆ ತಡೆದಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಚುನಾವಣೆಯಲ್ಲಿ ಆ ಸಿನಿಮಾ ಪ್ರಬಲ ಅಸ್ತ್ರವಾಗುತ್ತದೆ ಎಂಬ ಭಯ ಅವರಿಗಿದೆ. ಒಬ್ಬ ಸಹೋದರನಾಗಿ, ಮಗನಾಗಿ ನಿಮ್ಮ ವಿಜಯ್ಗೆ ನ್ಯಾಯ ಬೇಕು’ ಎಂದು ಅವರು ಭಾವುಕರಾಗಿ ನುಡಿದರು.
‘ನಾನು ಬೇಕಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ನಿಮ್ಮ ಸೇವೆ ಮಾಡಲು, ನಿಮ್ಮ ಪ್ರೀತಿಯ ಕೃತಜ್ಞತೆ ತೀರಿಸಲು ಮತ್ತು ನೋವುಗಳನ್ನು ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ನಿಮಗೆ ಎಂದಿಗೂ ಸುಳ್ಳು ಹೇಳುವುದಿಲ್ಲ ಅಥವಾ ಮೋಸ ಮಾಡುವುದಿಲ್ಲ’ ಎಂದು ವಿಜಯ್ ಅವರು ಅಭಿಮಾನಿಗಳಿಗೆ ಭರವಸೆ ನೀಡಿದರು.
“From the Karur incident scheme to my last film #JanaNayagan, what if it made our close-to-heart relationship even stronger? And what if that film became a powerful weapon in this election? So they deceived me… I need justice too..”
– #ThalapathyVijaypic.twitter.com/tMWACIScOO
— Laxmi Kanth (@iammoviebuff007) April 2, 2026
ಇದೇ ವೇಳೆ ಡಿಎಂಕೆ ವಿರುದ್ಧ ಅವರು ನೇರ ವಾಗ್ದಾಳಿ ಮಾಡಿದರು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜನರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವಿಜಯ್, ಪ್ರಸ್ತುತ ಡಿಎಂಕೆ ಸರ್ಕಾರವನ್ನು ‘ದುಷ್ಟ ಶಕ್ತಿ’ ಎಂದು ಕರೆದರು. ಅಲ್ಲದೆ, ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಅನಾರೋಗ್ಯದ ಕಾರಣ ಕೊಟ್ಟು ‘ಜನ ನಾಯಗನ್’ ನೋಡೋದನ್ನು ಮುಂದಕ್ಕೆ ಹಾಕಿದ ರಿವಿಶನ್ ಸಮಿತಿ
ಎಚ್. ವಿನೋದ್ ನಿರ್ದೇಶನದ ‘ಜನ ನಾಯಕನ್’ ಸಿನಿಮಾ ಜನವರಿ 9ರಂದೇ ಬಿಡುಗಡೆ ಆಗಬೇಕಿತ್ತು. ಚಿತ್ರದ ವಿಳಂಬದಿಂದಾಗಿ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗುತ್ತದೆ ಎಂದು ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ ನ್ಯಾಯಾಲಯದಲ್ಲಿ ವಾದಿಸಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ಪಡೆಯುವಲ್ಲಿನ ವಿಳಂಬದಿಂದಾಗಿ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
