
ನಾವು ಆರೋಗ್ಯದ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ, ಒಳ್ಳೆಯ ಆಹಾರಗಳನ್ನು ಸೇವನೆ ಮಾಡಿದರೂ, ದೇಹದಲ್ಲಿ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ರೀತಿಯ ಸಮಸ್ಯೆಗೆ ಮುಖ್ಯ ಕಾರಣ ಕೊಲೆಸ್ಟ್ರಾಲ್ (Cholesterol). ನಮ್ಮ ಜೀವನಶೈಲಿಯಿಂದ ಹಿಡಿದು ನಾವು ಸೇವಿಸುವ ಆಹಾರ, ಪಾನೀಯಗಳ ವರೆಗೆ, ಹಲವು ಅಂಶಗಳು ಕೆಟ್ಟ ಕೊಲೆಸ್ಟ್ರಾಲ್ (Bad cholesterol) ಹೆಚ್ಚಳಕ್ಕೆ ಕಾರಣವಾಗಿರುತ್ತದೆ. ಪರಿಣಾಮವಾಗಿ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತಿದ್ದು, ಇತರ ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇವೆಲ್ಲವನ್ನೂ ಎದುರಿಸಲು ಹಾಗೂ ನಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ನಮ್ಮ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಈ ಬಗ್ಗೆ ಪೌಷ್ಟಿಕ ತಜ್ಞೆ ದೀಪ್ ಶಿಖಾ ಜೈನ್ (Deepsikha Jain Nutritionist) ಅವರು ಕೆಲವು ಮಾಹಿತಿಯನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ (fries.to.fit) ಹಂಚಿಕೊಂಡಿದ್ದು ಅವರು ತಿಳಿಸಿರುವ ಪ್ರಕಾರ ಕೇವಲ ಒಂದು ಹಣ್ಣು ನಮ್ಮ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. ಅದು ದಾಳಿಂಬೆ ಹಣ್ಣು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಾವು ಆರೋಗ್ಯವಾಗಿರಬಹುದು ಎಂದಿದ್ದಾರೆ. ಹಾಗಾದರೆ ಇದರಿಂದ ನಮ್ಮ ದೇಹಕ್ಕೆ ಯಾವ ರೀತಿಯ ಪ್ರಯೋಜನವಿದೆ ಅವರು ನೀಡಿರುವ ಮಾಹಿತಿಯಿಂದ ತಿಳಿದುಕೊಳ್ಳಿ.
ಪೌಷ್ಟಿಕ ತಜ್ಞೆ ದೀಪ್ ಶಿಖಾ ಜೈನ್, ದಾಳಿಂಬೆ ಹಣ್ಣು ಮತ್ತು ಅದರೊಳಗಿನ ಬೀಜ ಇವೆರಡನ್ನೂ ನಿಯಮಿತವಾಗಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಹೇಳುವ ವೀಡಿಯೊ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ, ದಾಳಿಂಬೆ ತಿನ್ನುವುದರಿಂದ ಅಪಧಮನಿಗಳಿಂದ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ಕರಗುತ್ತದೆ ಎಂದಿದ್ದಾರೆ. ಹಾಗಾದರೆ ಇದರ ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಕೆಂಪು ಕೆಂಪಾದ ದಾಳಿಂಬೆಯಲ್ಲಿ ಪಾಲಿಫಿನಾಲ್ಗಳು ಮತ್ತು ಎಲಾಜಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್, ಅಂದರೆ ಎಲ್ಡಿಎಲ್ನ ಆಕ್ಸಿಡೀಕರಣವನ್ನು ತಡೆಯುತ್ತವೆ. ವಾಸ್ತವವಾಗಿ, ಎಲ್ಡಿಎಲ್ನ ಆಕ್ಸಿಡೀಕರಣವು ಕ್ರಮೇಣ ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಪ್ಲೇಕ್ ರೂಪಕ್ಕೆ ರೂಪಾಂತರಗೊಳ್ಳುತ್ತದೆ. ಇದು ಅಪಧಮನಿಗಳ ಕಿರಿದಾಗುವಿಕೆಗೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ದಾಳಿಂಬೆ ತಿನ್ನುವುದು ಅಪಧಮನಿಗಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಪೌಷ್ಟಿಕ ತಜ್ಞೆ ದೀಪ್ ಶಿಖಾ ಜೈನ್ ಮಾತ್ರವಲ್ಲದೆ, ಹಲವಾರು ಸಂಶೋಧನಾ ವರದಿಗಳು ಸಹ ಇದು ಕೊಲೆಸ್ಟ್ರಾಲ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸುತ್ತವೆ. ಇದರ ನಿಯಮಿತ ಸೇವನೆಯು ಹೃದಯ ಕಾಯಿಲೆಗಳನ್ನು ತಡೆಯುತ್ತದೆ. ಜೊತೆಗೆ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಸಮತೋಲನಗೊಳಿಸುತ್ತದೆ.
ದಾಳಿಂಬೆ ರಸಕ್ಕಿಂತ ಅವುಗಳ ಬೀಜಗಳು ಬಹಳಷ್ಟು ಫೈಬರ್ ಅಂಶವನ್ನು ಹೊಂದಿರುತ್ತವೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಪರಿಣಾಮವಾಗಿ, ತಿಂದ ನಂತರ ಅಜೀರ್ಣ, ಮಲಬದ್ಧತೆ, ಉಬ್ಬುವುದು ಮತ್ತು ಗ್ಯಾಸ್ ನಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ಹಾಗಾಗಿ ಇಂತಹ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು. ಇದರಿಂದ ಜೀರ್ಣಶಕ್ತಿ ಮತ್ತು ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ. ಮಾತ್ರವಲ್ಲ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ನಿಮಗೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ
ಈ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಇದರಲ್ಲಿರುವ ಪೋಷಕಾಂಶಗಲು ನಮ್ಮ ದೇಹಕ್ಕೆ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಜೀವಸತ್ವಗಳು ಸಿಗುತ್ತದೆ. ಇದಲ್ಲದೆ, ಇದರಲ್ಲಿರುವ ನೈಸರ್ಗಿಕ ಸಿಹಿಯು ನಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆಯಾಸದ ಭಾವನೆ ಬಂದಾಗ ಇವುಗಳನ್ನು ತಿನ್ನುವುದರಿಂದ ತಕ್ಷಣದ ಶಕ್ತಿ ದೊರೆಯುತ್ತದೆ. ಅದರಲ್ಲೊಯು ಬೆಳಗ್ಗಿನ ಸಮಯದಲ್ಲಿ ಈ ಹಣ್ಣುಗಳನ್ನು ಬೀಜದ ಸಮೇತ ಸೇವನೆ ಮಾಡುವುದರಿಂದ ಮಧುಮೇಹ ಮತ್ತು ಆಸ್ತಮಾದಂತಹ ಅನೇಕ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ, ಜೊತೆಗೆ ಮೂಳೆಗಳಿಗೂ ಒಳ್ಳೆಯದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ