Weekly numerology: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 14ರಿಂದ 20ರ ತನಕ ವಾರಭವಿಷ್ಯ
ಸಂಖ್ಯಾಶಾಸ್ತ್ರ ಮನುಷ್ಯನ ಭವಿಷ್ಯವನ್ನು ನಿರ್ಧಾರಿಸುತ್ತದೆ. ಸೆಪ್ಟೆಂಬರ್ 14ರಿಂದ 20ರ ತನಕ ಸಂಖ್ಯಾಶಾಸ್ತ್ರದ ಪ್ರಕಾರ ವಾರಭವಿಷ್ಯ ಹೇಗಿರಲಿದೆ. ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಇಲ್ಲಿ ನಿಮ್ಮ ಜನ್ಮಸಂಖ್ಯೆಯನ್ನು ನೋಡಿ, ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ, ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡಬೇಕು, ಯಾವ ಜನ್ಮಸಂಖ್ಯೆಗೆ ಫಲ ಇದೆ, ಶುಭ-ಅಶುಭಗಳನ್ನು ಕೂಡ ಈ ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ಬಗ್ಗೆ ಇಲ್ಲಿದೆ ನೋಡಿ

ನಿಮ್ಮ ಜನ್ಮಸಂಖ್ಯೆಗೆ (numerology) ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 14ರಿಂದ 20ರ ತನಕ ವಾರಭವಿಷ್ಯ (Weekly prediction) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಸ್ನೇಹಿತರ ಜತೆಗಿನ ಹಣಕಾಸಿನ ಸಂಗತಿಯೋ ಅಥವಾ ಸಂಬಂಧಗಳ ವಿಚಾರವಾಗಿಯೋ ಒಟ್ಟಿನಲ್ಲಿ ಯಾವುದೋ ಹಳೆಯ ವಿಚಾರವೊಂದು ನಿಮ್ಮನ್ನು ಈ ವಾರ ವಿಪರೀತ ಕಾಡಲಿದೆ. ದಾಕ್ಷಿಣ್ಯಕ್ಕೆ ಸಿಲುಕಿ ಯಾರಿಗಾದರೂ ಜಾಮೀನು ನೀಡುವುದಾಗಿ ಮಾತು ನೀಡಬೇಡಿ. ಈ ಕಾರಣವು ನಿಮ್ಮ ಸ್ನೇಹಕ್ಕೆ ಅಥವಾ ಸಂಬಂಧಕ್ಕೆ ತಡೆಯಾಗಿ ಪರಿಣಮಿಸಬಹುದು. ವಾಸ್ತವದಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಅಭಿಪ್ರಾಯ ಭೇದಗಳು- ಮನಸ್ತಾಪ ಎದುರಾಗಬಹುದು. ಕೆಲಸ- ಉದ್ಯೋಗದ ಕಾರಣಕ್ಕೋ ಅಥವಾ ಹಣಕಾಸಿನ ವಿಚಾರಕ್ಕೋ ಈ ಹಿಂದೆ ಆದ ಕೆಲವು ಒಪ್ಪಂದಗಳನ್ನು ಮುರಿಯಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಈಗಾಗಲೇ ಮದುವೆ ನಿಶ್ಚಯ ಆಗಿರುವವರಿಗೆ ಅಸಮಾಧಾನ ಮೂಡುವಂಥ ಬೆಳವಣಿಗೆಗಳು ಆಗಲಿವೆ. ಇನ್ನು ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಜ್ಯೋತಿಷಿಗಳು, ಪುರೋಹಿತರಿಗೆ ದೂರ ಪ್ರಯಾಣದ ಯೋಗ ಇದ್ದು, ದಿಢೀರನೆ ಹೊರಡಬೇಕಾಗಿ ಬರುವುದರಿಂದ ಕೆಲವು ಕೆಲಸ- ಕಾರ್ಯಗಳು ಅರ್ಧಕ್ಕೆ ನಿಲ್ಲಲಿವೆ. ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದಕ್ಕೆ ವಿಚಾರಣೆ ನಡೆಸಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ಹಿಡಿತ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೃಷಿಕರಿಗೆ ಒಂದು ವೇಳೆ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ ಅಂತಾದಲ್ಲಿ ಆ ಬಗ್ಗೆ ಮಾತನಾಡಬೇಡಿ. ಸಹಕಾರ ಸಂಘಗಳಲ್ಲಿ ಯಾವುದಾದರೂ ಹುದ್ದೆಗಳಿಗೆ ಸ್ಪರ್ಧೆ ಮಾಡುವಂತೆ ಕೇಳಿಕೊಂಡಲ್ಲಿ ಈ ಬಗ್ಗೆ ಕುಟುಂಬ ಸದಸ್ಯರ ಜತೆಗೂ ಚರ್ಚೆ ಮಾಡಿದ ನಂತರ ನಿರ್ಧಾರ ಕೈಗೊಳ್ಳುವುದು ಉತ್ತಮ. ದೊಡ್ಡ ಮೊತ್ತದ ಹೂಡಿಕೆ ಭೂಮಿಯ ಮೇಲೆ ಅಥವಾ ಡೇರಿ ವ್ಯವಹಾರದ ಮೇಲೆ ಮಾಡುವುದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದಲ್ಲಿ ಅನುಭವಿಗಳಿಂದ ಮಾರ್ಗದರ್ಶನವನ್ನು ಪಡೆಯಿರಿ. ಇದಕ್ಕೆ ಯಾವುದೇ ಹಿಂಜರಿಕೆ ಬೇಡ. ವೃತ್ತಿರನಿರತರಾಗಿದ್ದಲ್ಲಿ ಆದಾಯ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಿದ್ದೀರಿ. ಅನಿರೀಕ್ಷಿತವಾಗಿ ಹೊಸ ಜನರ ಪರಿಚಯ ಆಗಲಿದೆ. ಇದು ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಅದು ಅರ್ಧಂಬರ್ಧ ಆಗಿ ನಿಂತಿದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ಇದೆ. ಈಗ ನೀವು ನೀಡುತ್ತಿರುವ ಸೇವೆಗಳ ಶುಲ್ಕವನ್ನು ಹೆಚ್ಚು ಮಾಡುವುದಕ್ಕೆ ಆಲೋಚನೆ ಮಾಡುತ್ತಿದ್ದಲ್ಲಿ ಅದು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಈ ವಾರ ಹಳೇ ಸ್ನೇಹಿತರು- ಗೆಳತಿಯರನ್ನು ಈ ದಿನ ಭೇಟಿ ಆಗುವ ಯೋಗ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಮನೆಯ ಹೊರಗಿನ ಆಹಾರ ಪದಾರ್ಥ- ನೀರಿನ ಸೇವನೆ ಮಾಡದಿರುವುದು ಉತ್ತಮ. ಏಕೆಂದರೆ ಜ್ವರ, ಹೊಟ್ಟೆನೋವು ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮಹಿಳೆಯರು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಲುವಾಗಿ ಹಣವನ್ನು ಖರ್ಚು ಮಾಡುವಂಥ ಯೋಗ ಇದೆ. ದೇವತಾ ಕಾರ್ಯಗಳಿಗೆ ನಿಮಗೆ ಆಹ್ವಾನ ಬರಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ತುಂಬ ಪರಿಚಿತರು ಅಥವಾ ಸ್ನೇಹಿತರು ಎಂಬ ಕಾರಣಕ್ಕೆ ಚೀಟಿ ವ್ಯವಹಾರ ಅಥವಾ ಯಾವುದೇ ಹಣಕಾಸು ವ್ಯವಹಾರವನ್ನು ಮಾಡಿದಲ್ಲಿ ಆ ನಂತರ ಪರಿತಪಿಸಬೇಕಾಗುತ್ತದೆ. ಇನ್ನು ಚಿನ್ನ ಅಡ ಇಡುವಂಥ ಅಥವಾ ಮನೆ- ಆಸ್ತಿ ಪತ್ರವನ್ನು ಅಡ ಇಟ್ಟು ಸಾಲ ಮಾಡುವುದಕ್ಕೆ ಮುಂದಾಗಲಿದ್ದೀರಿ. ಮನೆ ನಿರ್ಮಾಣ ಅಥವಾ ಕಟ್ಟಡ ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಹಣ ಹೊಂದಿಸುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಭವಿಷ್ಯದಲ್ಲಿ ಅಗತ್ಯ ಬೀಳುವ ಹಣಕಾಸು ಹಾಗೂ ಈಗ ಸಾಲ ಮಾಡಿದರೆ ಮುಂದೆ ಏನಾಗಬಹುದು ಎಂಬ ಸಂಗತಿಯು ಒತ್ತಡವನ್ನು ತರಲಿದೆ. ನಿಮ್ಮ ಮನಸ್ಸು ಗೊಂದಲದಲ್ಲಿ ಬೀಳದಂತೆ ನೋಡಿಕೊಳ್ಳುವುದು ಈ ವಾರ ಬಹಳ ಮುಖ್ಯವಾಗುತ್ತದೆ. ದೊಡ್ಡ ಮೊತ್ತದ ಹಣ ನಿಮ್ಮ ಕೈ ಸೇರುತ್ತದೆ ಅಂದಾಗ ಯಾವುದೋ ದುಡ್ಡು ಬಂದಿತು, ಅದನ್ನು ಯಾವುದಕ್ಕೋ ಬಳಸಿದೆ ಎಂದು ಆಲೋಚಿಸಬೇಡಿ. ತಮ್ಮ ಬಳಿ ಇರುವ ಚಿನ್ನವನ್ನು ಮಾರುತ್ತಿರುವುದಾಗಿ ನಿಮಗೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಲೆಕ್ಕಾಚಾರ ಮಾಡದಂತೆ ಜೀವನ ನಡೆಸುವುದು ಸಮಸ್ಯೆಗೆ ಕಾರಣ ಆಗಲಿದೆ. ಒಂದು ವೇಳೆ ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂದಾದರೆ ಹಿರಿಯರು ಅಥವಾ ಅನುಭವಿಗಳಿಂದ ಮಾರ್ಗದರ್ಶನ ಪಡೆದುಕೊಳ್ಳಿ. ಒಂದು ವೇಳೆ ಸೈಟು, ಮನೆ ಖರೀದಿ ಮಾಡಬೇಕು ಎಂದು ಬಹಳ ಸಮಯದಿಂದ ಪ್ರಯತ್ನ ಮಾಡುತ್ತಿರುವವರಿಗೆ ಈಗ ಮನಸ್ಸಿಗೆ ಹಿಡಿಸುವಂಥ ಸ್ಥಳ ಅಥವಾ ಮನೆ ಕಂಡುಬರಲಿದೆ. ನಿರ್ಧಾರಗಳನ್ನು ಮುಂದಕ್ಕೆ ಹಾಕುತ್ತಾ ಹೋಗಬೇಡಿ. ನಿಮ್ಮ ಕೈ ಅಳತೆಯಲ್ಲೇ ಇದ್ದು, ಮನಸ್ಸಿಗೂ ಮೆಚ್ಚಿದಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಿ. ಕೃಷಿಕರಿಗೆ ದೈಹಿಕ ಆಯಾಸ ಹೆಚ್ಚಾಗಲಿದೆ, ಆರೋಗ್ಯದ ಬಗ್ಗೆ ಜಾಗ್ರತೆಯನ್ನು ವಹಿಸಿ. ವೈದ್ಯರು ಸೂಚಿಸುವಂಥ ವೈದ್ಯಕೀಯ ಪರೀಕ್ಷೆಗಳನ್ನು ಮಾಡುವಂತೆ ಸೂಚಿಸಿದಲ್ಲಿ ಅದನ್ನು ಕಡ್ಡಾಯವಾಗಿ ಮಾಡಿಸಿ. ನಿಮ್ಮಲ್ಲಿ ಯಾರು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೀರಿ ಅಂಥವರಿಗೆ ಲಾಭದ ಪ್ರಮಾಣದಲ್ಲೂ ಕಡಿಮೆ ಆಗುವ ಸಾಧ್ಯತೆಗಳಿವೆ. ಇನ್ನು ವೃತ್ತಿನಿರತರ ಬಗ್ಗೆ ಹೇಳುವುದಾದರೆ, ಚಾರ್ಟರ್ಡ್ ಅಕೌಂಟೆಂಟ್, ವೈದ್ಯರು ಇಂಥ ವೃತ್ತಿಯಲ್ಲಿ ಇರುವವರಿಗೆ ಹೆಚ್ಚುವರಿ ಆದಾಯ ಮೂಲಗಳು ದೊರೆಯಲಿವೆ. ನೀವು ಆಪತ್ಕಾಲಕ್ಕೆ ಎಂದು ಇರಿಸಿಕೊಂಡಿದ್ದ ಹಣವನ್ನು ಅಥವಾ ಹೂಡಿಕೆಯನ್ನು ತೆಗೆಯಬೇಕೆಂದು ನಿರ್ಧಾರವನ್ನು ತೆಗೆದುಕೊಳ್ಳುಬ ಸಾಧ್ಯತೆಗಳು ಹೆಚ್ಚಿವೆ. ಹೊಸದಾಗಿ ಕಚೇರಿಯನ್ನು ಅಥವಾ ಕ್ಲಿನಿಕ್ ಅನ್ನು ಶುರು ಮಾಡುವುದಕ್ಕೆ ಅಡ್ವಾನ್ಸ್ ನೀಡಲಿದ್ದೀರಿ. ಇನ್ನು ಈಗಾಗಲೇ ನಿಮಗಿರುವಂಥ ಸಾಲಗಳನ್ನು ತೀರಿಸುವುದಕ್ಕೆ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಲ್ಲಿ ಅದು ಆಗಲಿದೆ. ವಿದ್ಯಾರ್ಥಿಗಳಿಗೆ ಪ್ರಯಾಣ ಮಾಡುವಂಥ ಯೋಗ ಇದೆ. ಹೋಗಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರವನ್ನು ಮಾಡಲಿದ್ದೀರಿ. ಆದರೆ ಕೊನೆ ಕ್ಷಣದಲ್ಲಿ ಸ್ನೇಹಿತರ ಜತೆಗೂಡಿ ಬೆಟ್ಟ- ಗುಡ್ಡಗಾಡು ಪ್ರದೇಶಗಳಿಗೆ ತೆರಳಲಿದ್ದೀರಿ. ಅಥವಾ ರೆಸಾರ್ಟ್ ಇಂಥ ಕಡೆಗೆ ಮನರಂಜನೆಯ ಸಲುವಾಗಿ ಹೋಗುವಂಥ ಯೋಗ ಇದೆ. ಮಹಿಳೆಯರಿಗೆ ಕೆಲಸದಲ್ಲಿ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ಅವಕಾಶಗಳು ದೊರೆಯಲಿವೆ. ಈ ವಾರದಲ್ಲಿ ಒಮ್ಮೆ ಸಾಯಿಬಾಬ ಅಥವಾ ರಾಘವೇಂದ್ರ ಸ್ವಾಮಿ ದೇವಸ್ಥಾನ ಅಥವಾ ಗುರುದ್ವಾರಕ್ಕೆ ಭೇಟಿ ನೀಡಿ. ಇನ್ನು ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಪಿಎಫ್ ವಿಥ್ ಡ್ರಾ, ಮ್ಯೂಚುವಲ್ ಫಂಡ್ ಅಥವಾ ಡಿಬೆಂಚರ್ ಅಥವಾ ಸವರನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಿದ್ದು, ಅದನ್ನು ವಾಪಸ್ ಪಡೆಯಬೇಕು ಎಂದುಕೊಳ್ಳುತ್ತಿರುವವರಿಗೆ ಅದು ಸಾಧ್ಯವಾಗಲಿದೆ. ಮುಖ್ಯವಾಗಿ ಏನೆಂದರೆ, ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳುತ್ತಾ ಇರುವವರಿಗೆ ಇನ್ನು ಹೆಚ್ಚಿನ ಒತ್ತಡ ಇರುವುದಿಲ್ಲ ಎಂಬುದು ಸಮಾಧಾನದ ಸಂಗತಿ ಆಗಿರಲಿದೆ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಆಕ್ಷೇಪದ ಧ್ವನಿ ಕೇಳಿಸಿಕೊಳ್ಳಬೇಕಾಗುತ್ತದೆ. ಮನೆಯಲ್ಲಿನ ಕಿರಿಯ ಸದಸ್ಯರ ಆರೋಗ್ಯ ವಿಚಾರ, ಶಿಕ್ಷಣ ಹಾಗೂ ನಡವಳಿಕೆ ಈ ಸಂಗತಿಗಳು ನಿಮಗೆ ಮುಖ್ಯವಾಗಲಿವೆ. ಅಂದುಕೊಂಡಂತೆ ಆಗುತ್ತಿಲ್ಲ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿದ್ದೀರಿ. ಆದರೆ ಎಲ್ಲ ಪ್ರಯತ್ನಗಳ ನಂತರವೂ ಏನೂ ಫಲಿತವನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಮನೆ ನಿರ್ಮಾಣದಲ್ಲಿ ತೊಡಗಿರುವವರು ಅಥವಾ ಅಪಾರ್ಟ್ ಮೆಂಟ್ ಅಥವಾ ಕಟ್ಟಿರುವ ಮನೆಯನ್ನು ಖರೀದಿ ಮಾಡಬೇಕು ಎಂದು ಆಲೋಚಿಸುತ್ತಿರುವವರಿಗೆ ಸಕಾರಾತ್ಮಕವಾದ ಬೆಳವಣಿಗೆಗಳು ಆಗಲಿವೆ. ಕೃಷಿಕರಿಗೆ ದೇಹಾಲಸ್ಯ ಹೆಚ್ಚಾಗಲಿದೆ. ಈಗಾಗಲೇ ಯಾರು ಬೆನ್ನು ನೋವನ್ನು ಅನುಭವಿಸುತ್ತಿದ್ದೀರಿ ಅಂಥವರಿಗೆ ನೋವಿನ ಪ್ರಮಾಣ ಹೆಚ್ಚಾಗಲಿದೆ. ಅಥವಾ ಈ ವಾರದಲ್ಲಿ ಬೆನ್ನು ನೋವು ಕಾಣಿಸಿಕೊಂಡಲ್ಲಿ ಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಕಡೆಗೆ ಗಮನವನ್ನು ಹರಿಸಿ. ಇನ್ನು ನಿಮ್ಮಲ್ಲಿ ಕೆಲವರು ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ಸಾಲ ಪಡೆಯುವಂಥ ಸಾಧ್ಯತೆಗಳಿವೆ. ಈಗಾಗಲೇ ಅಪ್ಲೈ ಮಾಡಿಯಾಗಿದೆ ಅಂತಾದಲ್ಲಿ ಸಾಲ ಮಂಜೂರು ಮಾಡುವುದಕ್ಕೆ ಬೇಕಾದ ನಿಯಮಾವಳಿಗಳು ಪೂರ್ಣಗೊಳ್ಳಲಿವೆ. ಸಂಬಂಧಿಗಳ ಜೊತೆಗೆ ಮಾತನಾಡುವಾಗ ನಿಮ್ಮನ್ನು ಛೇಡಿಸುವುದಕ್ಕೆ ಅಂತಲೇ ಇಂಥ ಮಾತನಾಡುತ್ತಿದ್ದಾರೆ ಎಂದೆನಿಸಲಿದೆ. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ವೃತ್ತಿನಿರತರು ಬೇರೆಯವರು ಮಾಡುವಂಥ ಕೆಲವು ಗೊಂದಲದಿಂದಾಗಿ ವಿಪರೀತ ಶ್ರಮ ಹಾಕಿ ಮಾಡಿದಂಥ ಕೆಲಸವನ್ನು ಮತ್ತೆ ಮಾಡುವಂಥ ಸನ್ನಿವೇಶ ಎದುರಾಗಲಿದೆ. ಈ ಹಿಂದೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇರಿಸಿದಂಥ ಕ್ಲೈಂಟ್ ಗಳ ವರ್ತನೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳಲಿದೆ. ಪ್ರತಿ ವಿಚಾರಕ್ಕೂ ವಿವರಣೆ ಕೇಳುವುದು, ಅದು ಯಾಕೆ ಮಾಡಬೇಕು, ಇದು ಯಾಕೆ ಮಾಡಬೇಕು ಎಂದು ಪ್ರಶ್ನೆ ಮಾಡುವುದು ಹೀಗೆಲ್ಲ ಆಗಿ ನಿಮಗೆ ವಿಪರೀತ ಮುಜುಗರ ಆಗಲಿದೆ. ವಿದ್ಯಾರ್ಥಿಗಳು ತುಂಬ ಉತ್ಸಾಹದಿಂದ ಇರುತ್ತೀರಿ. ಶೈಕ್ಷಣಿಕ ವಿಚಾರಗಳಲ್ಲಿ ಯಾವುದು ಬಹಳ ಕಷ್ಟವಾಗಬಹುದು ಅಂದುಕೊಂಡಿರುತ್ತೀರೋ ಅದು ನಿರೀಕ್ಷೆಗಿಂತ ಸುಲಭವಾಗಿ ಹಾಗೂ ಯಶಸ್ವಿಯಾಗಿ ಮಾಡಿ ಮುಗಿಸಲಿಕ್ಕೆ ಸಾಧ್ಯವಾಗಲಿದೆ. ಸಮಯಕ್ಕೆ ಸರಿಯಾಗಿ ತಲುಪಬೇಕಾದ ಜಾಗಕ್ಕೆ ಹೋಗುವ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಯಾವುದೇ ಪರೀಕ್ಷೆ, ಕೆಲಸ, ಜವಾಬ್ದಾರಿಯನ್ನು ನಿಮಗೆ ನೀವೇ ಬಹಳ ಕಷ್ಟವಾದದ್ದು ಎಂದು ಗಾಬರಿಯಾಗಬೇಡಿ. ಮಹಿಳೆಯರಿಗೆ ಕಾಲು ನೋವು ವಿಪರೀತ ಕಾಡುವ ಸಾಧ್ಯತೆ ಇದೆ. ಬೊಜ್ಜಿನ ಸಮಸ್ಯೆ ಇರುವಂಥವರಿಗೆ ವೈದ್ಯಕೀಯ ನೆರವು ತೆಗೆದುಕೊಳ್ಳುವುದು ಅನಿವಾರ್ಯ ಎಂಬ ಸನ್ನಿವೇಶ ಸೃಷ್ಟಿಯಾಗಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ತೀರಾ ಅಗತ್ಯ ಕೆಲಸ ಇದ್ದಾಗಲೂ ರಜಾ ದೊರೆಯದೆ ಭಾರೀ ಒತ್ತಡಕ್ಕೆ ಸಿಲುಕಿ ಹಾಕಿಕೊಂಡಂತೆ ಆಗಲಿದೆ. ಉದ್ಯೋಗದಲ್ಲಿ ಆಸಕ್ತಿ ಕಡಿಮೆಯಾಗಿ, ಬೈಗುಳ- ನಿಂದನೆ ಕೇಳಿಸಿಕೊಳ್ಳುವಂತಾಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಏಕಾಏಕಿ ನಿಮ್ಮಲ್ಲಿ ಬದಲಾಗುವಂಥ ವರ್ತನೆಯು ಹಲವರಿಗೆ ಅಚ್ಚರಿಯನ್ನು ಉಂಟು ಮಾಡಲಿದೆ. ಮನೆಯಲ್ಲಿ ದೇವರ ಪೂಜೆ- ಶುಭ ಕಾರ್ಯಗಳನ್ನು ಆಯೋಜನೆ ಮಾಡುವುದಕ್ಕೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಚಿನ್ನದಲ್ಲಿ ಈಗಾಗಲೇ ಹೂಡಿಕೆ ಮಾಡಿರುವವರು ಅದನ್ನು ಹೆಚ್ಚು ಮಾಡುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಬಂದದ್ದೆಲ್ಲ ಬರಲಿ ಎಂಬ ಆಕ್ರಮಣಕಾರಿ ಧೋರಣೆ- ಯೋಚನೆ ನಿಮ್ಮದಾಗಿರಲಿದೆ. ಇಷ್ಟು ಸಮಯ ಯಾರ ಜತೆಗೆ ವ್ಯವಹರಿಸುವಾಗ ನಯವಾಗಿ- ನಾಜೂಕಾಗಿ ಹಾಗೂ ಬೇಸರ ಆಗದಂತೆ ಮಾತನಾಡುತ್ತಿದ್ದಿರೋ ಈ ವಾರ ಹಾಗೆ ನಿಮ್ಮ ವರ್ತನೆ ಇರುವುದಿಲ್ಲ. ಕಡ್ಡಿ ತುಂಡು ಮಾಡಿದಂತೆ ವ್ಯವಹಾರ ನಡೆಸಲಿದ್ದೀರಿ. ದುಡ್ಡು-ಕಾಸಿನ ವಿಚಾರಗಳಲ್ಲಿಯೂ ಈ ಹಿಂದೆ ಇದ್ದಂಥ ಆಲೋಚನೆ ನಿಮ್ಮದಾಗಿರುವುದಿಲ್ಲ. ಹೇಳಿದ ಸಮಯದೊಳಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂಬ ಸಂಗತಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಿದ್ದೀರಿ. ಇದೇ ಕಾರಣಕ್ಕೆ ಕೆಲವು ಒಪ್ಪಂದಗಳನ್ನು ಹಾಗೂ ಈಗಾಗಲೇ ಆರಂಭವಾಗಿರುವಂತಹ ಕೆಲಸವನ್ನು ನಿಲ್ಲಿಸಿಬಿಡುವಂತೆ ಹೇಳಿಬಿಡುವ ಸಾಧ್ಯತೆಗಳು ಸಹ ಇವೆ. ಕೃಷಿಕರು ಕುಟುಂಬದ ಒಳಗಿನ ಸಮಸ್ಯೆಗಳನ್ನು ನಿವಾರಿಸುವ ಕಡೆಗೆ ಹೆಚ್ಚಿನ ಗಮನವನ್ನು ನೀಡಲಿದ್ದೀರಿ. ನಿಮ್ಮಲ್ಲಿ ಯಾರು ಕೃಷಿ ಬೆಳೆಗೆ ಪ್ರಾಣಿಗಳ ದಾಳಿಯನ್ನು ಎದುರಿಸುತ್ತಿದ್ದೀರಿ ಅಂಥವರು ಮುಖ್ಯವಾದ ತೀರ್ಮಾನವನ್ನು ಮಾಡಲಿದ್ದೀರಿ, ಇನ್ನು ಜಮೀನಿನಲ್ಲಿ ಬೆಳೆ ರಕ್ಷಣೆಗೆ ಅಗತ್ಯವಾದ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಹಣವನ್ನು ವೆಚ್ಚ ಮಾಡಲಿದ್ದೀರಿ. ಆದರೆ ಈ ವಿಚಾರದಲ್ಲಿ ಕುಟುಂಬದ ಇತರ ಸದಸ್ಯರು ಆಕ್ಷೇಪವನ್ನು ವ್ಯಕ್ತ ಪಡಿಸಬಹುದು. ಇದು ಅಂತಲ್ಲ, ಯಾವುದೇ ವಿಷಯದಲ್ಲಿ ನಿಮ್ಮ ನಿರ್ಧಾರಕ್ಕೆ ಅಭಿಪ್ರಾಯ ಭೇದ ಅಥವಾ ಆಕ್ಷೇಪ ವ್ಯಕ್ತವಾದಲ್ಲಿ “ನಾನು ಹೇಳಿದ್ದೇ ಆಗಬೇಕು” ಎಂದು ಹಠ ಮಾಡುವುದಕ್ಕೆ ಹೋಗಬೇಡಿ. ವೃತ್ತಿನಿರತರು ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅಥವಾ ಹೊಸದಾಗಿ ಪರಿಚಯ ಆದವರೊಂದಿಗೆ ಪಾರ್ಟನರ್ ಷಿಪ್ ನಲ್ಲಿ ವೃತ್ತಿಯನ್ನು ಮುಂದುವರಿಸಬೇಕು ಎಂದು ಯೋಚಿಸುತ್ತಿದ್ದಲ್ಲಿ ಆ ತೀರ್ಮಾನವನ್ನು ಕೈ ಬಿಡುವ ಅಥವಾ ತಕ್ಷಣಕ್ಕೆ ಕೈ ಬಿಡುವುದು ಉತ್ತಮ. ಒಂದು ವೇಳೆ ಕೆಲಸದ ಒತ್ತಡ ನಿಮ್ಮನ್ನು ಕಾಡುತ್ತಿರುವವರು ಈಗ ಇರುವ ಕೆಲವು ಕ್ಲೈಂಟ್ಸ್ ಬಳಿ ತಮ್ಮಿಂದ ಇನ್ನು ಸೇವೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಬಿಡೋಣ ಎಂದುಕೊಳ್ಳಲಿದ್ದೀರಿ. ನಿಮ್ಮ ಬಳಿ ಎಷ್ಟು ಮೊತ್ತ ಇದೆಯೋ ಆ ಬಜೆಟ್ ಒಳಗಾಗಿಯೇ ಯೋಜನೆಯನ್ನು ರೂಪಿಸುವುದು ಉತ್ತಮ. ಒಂದು ವೇಳೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯವನ್ನು ಮೀರಿ ಅಥವಾ ನಿಮ್ಮದೇ ಆಲೋಚನೆಯನ್ನು ಮೀರಿ ವಿಸ್ತರಣೆಗೆ ಮುಂದಾಗದಿರುವುದು ಕ್ಷೇಮ. ವಿದ್ಯಾರ್ಥಿಗಳು ಸ್ನೇಹಿತರ ಮಾತನ್ನು ಕೇಳಿಕೊಂಡು ಅಥವಾ ಅವರು ಅನುಸರಿಸುತ್ತಿರುವ ಮಾರ್ಗವನ್ನೇ ಅನುಸರಿಸುವುದಕ್ಕೆ ಮುಂದಾಗಿ ಆ ನಂತರ ಪರಿತಪಿಸುವಂತೆ ಆಗುತ್ತದೆ. ಕೆಲವು ಮುಖ್ಯವಾದ ಪತ್ರ ಅಥವಾ ವಸ್ತುಗಳನ್ನು ಮರೆತು ಹೋಗುವುದರಿಂದ ಕೊನೆ ಕ್ಷಣದಲ್ಲಿ ಆತಂಕಕ್ಕೆ ಗುರಿಯಾಗಲಿದ್ದೀರಿ. ಆದ್ದರಿಂದ ಪರೀಕ್ಷೆ ಸೇರಿದಂತೆ ಯಾವುದೇ ಮುಖ್ಯ ಕಾರ್ಯದ ಮೇಲೆ ತೆರಳುವಾಗ ಅಗತ್ಯವಾದದ್ದು ಎಲ್ಲವೂ ಇದೆಯೇ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿಕೊಳ್ಳಿ. ಮಹಿಳೆಯರು ವಿಲಾಸಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಅದರಲ್ಲೂ ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದ ಬ್ತ್ಯಾಂಡೆಡ್ ವಸ್ತುಗಳನ್ನು ಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ನಿಮ್ಮಲ್ಲಿ ಯಾರು ಮಕ್ಕಳ ಮದುವೆ ಸಲುವಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರು ಅಂಥವರಿಗೆ ಸಮಾಧಾನ ತರುವಂಥ ಬೆಳವಣಿಗೆಗೆಳು ಆಗಲಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಉದ್ಯೋಗ ಸ್ಥಳದಲ್ಲಿ ನೀವು ಅಂದುಕೊಂಡದಕ್ಕಿಂತ ಹೆಚ್ಚು ನೆಮ್ಮದಿ, ಯಶಸ್ಸು ದೊರೆಯಲಿದೆ. ಸೇಲ್ಸ್- ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಗುರಿಯನ್ನು ತಲುಪುವುದಕ್ಕೆ ಬೇಕಾದ ಮಾರ್ಗೋಪಾಯಗಳು ತೆರೆದುಕೊಳ್ಳಲಿವೆ. ಇನ್ನು ಯಾರು ವ್ಯಾಪಾರ- ಉದ್ಯಮಗಳನ್ನು ಮಾಡುತ್ತಿರುವಿರೋ ಅಂಥವರು ಸ್ವಲ್ಪ ಭಾಗವನ್ನು ಮಾರಾಟ ಮಾಡುವುದಕ್ಕೆ ಅಥವಾ ಲಾಭದ ಆಧಾರದಲ್ಲಿ ಮತ್ತೊಬ್ಬರಿಗೆ ವಹಿಸಿಕೊಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ ಅಥವಾ ಕೆಲವರು ತಾವಾಗಿಯೇ ನಿಮ್ಮ ಬಳಿ ಈ ಕುರಿತು ಪ್ರಸ್ತಾವವನ್ನು ತರುವ ಸಾಧ್ಯತೆ ಇದೆ.ಆಸೆಯನ್ನು ಮಿತಿಯಲ್ಲಿಟ್ಟು ಕೊಳ್ಳುವುದು ಮುಖ್ಯವಾಗುತ್ತದೆ. ಖರ್ಚು- ವೆಚ್ಚ ಹೆಚ್ಚಾಗುತ್ತದೆ, ಸಾಲ ಮಾಡಬೇಕಾಗುತ್ತದೆ ಅಥವಾ ನಿಮ್ಮ ಯೋಜನೆಗೆ ಮೀರಿದಂಥ ಸಂಗತಿಗಳು ಮುಂದಕ್ಕೆ ಬರುತ್ತವೆ ಎಂಬ ಕಾರಣಕ್ಕೆ ಕೆಲವು ಹಣಕಾಸು ನಿರ್ಧಾರಗಳನ್ನು ಮುಂದಕ್ಕೆ ಹಾಕಿಕೊಳ್ಳುತ್ತಾ ಬಂದಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಈಗ ಗಟ್ಟಿ ಮನಸ್ಸಿನಲ್ಲಿ ಅಂತಿಮವಾಗಿ ಏನು ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತೀರಿ. ಅನಿರೀಕ್ಷಿತವಾಗಿ ಕುಟುಂಬ ಸದಸ್ಯರ ಸಹಾಯ ಕೂಡ ನಿಮಗೆ ಒದಗಿಬರಬಹುದು. ಕೃಷಿಕರಿಗೆ ಮದುವೆಗಾಗಿ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯುವ ಅವಕಾಶ ಬಹಳ ಹೆಚ್ಚಾಗಿದೆ. ಅದರಲ್ಲೂ ದೂರ ಸಂಬಂಧದವರ ಮನೆಯಿಂದಲೇ ನೀವು ನಿರೀಕ್ಷೆ ಮಾಡಿದಂತೆ ವಧು/ವರ ಸಿಗುವ ಸಾಧ್ಯತೆಗಳು ಇವೆ. ಕೃಷಿ ಉತ್ಪನ್ನಗಳ ನೇರ ಮಾರಾಟ ಮಾಡುತ್ತಿರುವವರು ವಿಸ್ತರಣೆಗಾಗಿ ಶ್ರಮವನ್ನು ಜಾಸ್ತಿ ಹಾಕಲಿದ್ದೀರಿ. ಜಮೀನಿನಲ್ಲಿ ವಿದ್ಯುತ್- ನೀರಿನ ವ್ಯವಸ್ಥೆಗಾಗಿ ಖರ್ಚು ಮಾಡಲಿದ್ದೀರಿ. ಇನ್ನು ಕೃಷಿಗಾಗಿ ಸಲಕರಣೆಗಳನ್ನು ಖರೀದಿಸಬೇಕು ಎಂದು ಅಂದುಕೊಳ್ಳುತ್ತಿರುವವರು ಸ್ವಲ್ಪ ಸಮಯ ನಿರ್ಧಾರವನ್ನು ಮುಂದಕ್ಕೆ ಹಾಕುವ ಸಾಧ್ಯತೆಗಳು ಹೆಚ್ಚಿವೆ. ಈ ಹಿಂದೆ ಯಾವಾಗಲೋ ಸಹಾಯ ಕೇಳಿದ್ದಲ್ಲಿ ಅಂಥವರು ಈಗ ನಿಮ್ಮ ನೆರವಿಗೆ ಬರಲಿದ್ದಾರೆ. ವೃತ್ತಿನಿರತರು ಕಣ್ಣು ಅಥವಾ ಕಿವಿ- ಮೂಗಿನ ಅನಾರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ದೂರ ಪ್ರಯಾಣ ಮಾಡುವುದು ಅನಿವಾರ್ಯ ಅಲ್ಲ ಅಂತಾದಲ್ಲಿ ಪ್ರಯಾಣ ಮಾಡದೇ ಇರುವುದು ಕ್ಷೇಮ. ನಿಮ್ಮ ಕೆಲಸಗಳನ್ನು ಮಾಡುವ ವಿಚಾರದಲ್ಲಿ ಯಾರ ಜೊತೆಗೆ ಪ್ರತಿಷ್ಠೆಗೆ ಬೀಳಬೇಡಿ. ಏಕೆಂದರೆ, ನೀವು ತುಂಬ ಸಣ್ಣ ಕೆಲಸ ಅಂತ ಮಾಡಲು ಶುರು ಮಾಡಿದರೂ ಅದು ಬಹಳ ಸಮಯ ಎಳೆದುಕೊಂಡು ಹೋಗುವಂಥ ಯೋಗ ಇದೆ. ವಿದ್ಯಾರ್ಥಿಗಳು ವಾಹನಗಳನ್ನು ಬಳಸುತ್ತಿದ್ದೀರಿ ಅಂತಾದಲ್ಲಿ ಈ ವಾರ ಸಾಮಾನ್ಯಕ್ಕಿಂತ ಬಹಳ ಎಚ್ಚರಿಕೆಯನ್ನು ವಹಿಸುವುದು ಉತ್ತಮ. ಒಂದು ವೇಳೆ ಬೇರೆಯವರ ವಾಹನದಲ್ಲಿ ತೆರಳುತ್ತಿದ್ದೀರಿ ಅಂತಾದರೂ ಹೆಲ್ಮೆಟ್ ಕಡ್ಡಾಯವಾಗಿ ಬಳಸಿ. ಏಕೆಂದರೆ ಸಣ್ಣ- ಪುಟ್ಟದಾದರೂ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ವೇಗದ ಚಾಲನೆಯಂತೂ ಯಾವುದೇ ಕಾರಣಕ್ಕೂ ಬೇಡ, ನೆನಪಿರಲಿ. ಮಹಿಳೆಯರು ಮಾತಿನಿಂದ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ನಿಮ್ಮ ಅಭಿಪ್ರಾಯ ಹೇಳುವ ಅಗತ್ಯವೇ ಇಲ್ಲದಿದ್ದರೂ ನಾಲಗೆಯನ್ನು ಹರಿಬಿಟ್ಟು ಸಮಸ್ಯೆಗಳು ನೀವಾಗಿಯೇ ಮಾಡಿಕೊಳ್ಳುತ್ತೀರಿ. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಅಂತಾದರೆ ತುಸು ಹೆಚ್ಚಾಗಿಯೇ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ನಿಮ್ಮ ಜವಾಬ್ದಾರಿಯನ್ನು ಬೇರೆಯವರು ಮೇಲೆ ವರ್ಗಾಯಿಸುವುದಕ್ಕೆ ಹೋಗಬೇಡಿ, ನೆನಪಿನಲ್ಲಿರಲಿ.
ಇದನ್ನೂ ಓದಿ: ಸೆ.15ರಿಂದ 21ರವರೆಗೆ ಈ ರಾಶಿಗಳಲ್ಲಿ ಮಹತ್ವದ ಬದಲಾವಣೆ
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಈ ಹಿಂದೆ ನೀವು ಆಡಿದ್ದ ಮಾತುಗಳೇ ಸಮಸ್ಯೆಗಳಾಗಿ ಎದ್ದು ನಿಲ್ಲುತ್ತವೆ. ಆದ್ದರಿಂದ ಅಂಥ ಸನ್ನಿವೇಶವನ್ನು ಸರಿಯಾಗಿ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಮುಂಚೆಯೇ ಆಲೋಚನೆಯನ್ನು ಮಾಡಿಕೊಳ್ಳಿ. ಈಗಲಾದರೂ ಅಷ್ಟೇ, ಯಾವುದೇ ಮಾತನಾಡುವ ಮುನ್ನ ಈ ಹಿಂದೆ ಅದಕ್ಕೆ ಸಂಬಂಧಿಸಿದಂತೆ ಏನು ಹೇಳಿದ್ದಿರಿ ಎಂಬುದನ್ನು ಒಮ್ಮೆ ನೆನಪಿಸಿಕೊಂಡು ಬಿಡಿ. ಒಂದೇ ಸಲಕ್ಕೆ ನಾಲ್ಕಾರು ಕಡೆ ಪ್ರಯಾಣ ಮಾಡಬೇಕಾದ ಸನ್ನಿವೇಶ ಬರುತ್ತದೆ. ಮುಖ್ಯವಾದ ಕೆಲಸ- ಕಾರ್ಯಗಳನ್ನು ಬೇರೆಯವರಿಗೆ ಒಪ್ಪಿಸುವುದಕ್ಕೆ ಹೋಗಬೇಡಿ. ಅದರಲ್ಲೂ ಕಾನೂನಿಗೆ ಸಂಬಂಧಿಸಿದ ವಿಚಾರಗಳು, ಸರ್ಕಾರದ ಜತೆಗೆ ನಡೆಸಬೇಕಾದಂಥ ಮಾತುಕತೆಗಳು ಇವುಗಳನ್ನು ನೀವೇ ಮುಂದೆ ನಿಂತು ಮಾಡಿಕೊಳ್ಳುವುದು ಒಳ್ಳೆಯದು. ಏಜೆನ್ಸಿಗಳು ಅಥವಾ ಕಮಿಷನ್ ಆಧಾರದಲ್ಲಿ ಕೆಲಸ ಮಾಡುವವರಿದ್ದು, ಅವರಿಂದ ಕೆಲಸ ಮಾಡಿಸುವುದಕ್ಕೆ ಮುಂದಾಗಬೇಡಿ. ಅದೇ ರೀತಿ ಹಣ ಕೊಟ್ಟರೆ ಅಥವಾ ನೀವು ಒಂದು ಮಾತು ಹೇಳಿದರೆ ಕೆಲಸ ಮಾಡಿಕೊಡುವವರು ಇದ್ದಾರೆ ಅಂದುಕೊಂಡು ಏನಾದರೂ ಮೈ ಮರೆತಲ್ಲಿ ಯಾರದೋ ತಪ್ಪಿಗೆ ನೀವು ಬೆಲೆ ತೆರಬೇಕಾದಂಥ ಸನ್ನಿವೇಶ ಎದುರಾಗಲಿದೆ. ನಿಮ್ಮಲ್ಲಿ ಯಾರು ರಾಜಕಾರಣವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದೀರಿ, ಅಂಥ ರಾಜಕಾರಣಿಗಳಿಗೆ ಬಹಳ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ. ಕೆಲ ಕಾಲ ಸಾರ್ವಜನಿಕ ಜೀವನದಿಂದಲೇ ದೂರ ಇರಬೇಕಾದಂಥ ಅನಿವಾರ್ಯ ಸೃಷ್ಟಿ ಆಗಬಹುದು. ನಿಮಗೆ ಸಂಬಂಧಿಸಿದ ಆಕ್ಷೇಪಾರ್ಹ ಆಡಿಯೋ- ವಿಡಿಯೋ ಹೊರಬಂದು ಮುಜುಗುರದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ದುರ್ಗಾದೇವಿಯ ಆರಾಧನೆಯನ್ನು ಮಾಡಿ, ಮಾನಸಿಕ ಸ್ಥೈರ್ಯಕ್ಕಾಗಿ ಪ್ರತಿ ದಿನ ಕೆಲ ಸಮಯವಾದರೂ ಧ್ಯಾನ ಮಾಡುವುದಕ್ಕೆ ಸಮಯವನ್ನು ಮೀಸಲಿಡುವುದು ಉತ್ತಮ. ಕೃಷಿಕರು ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂಥ ಯೋಗ ಇದೆ. ನಿಮ್ಮಲ್ಲಿ ಯಾರು ಕೃಷಿ ಉತ್ಪನ್ನಗಳನ್ನು ಈಗಾಗಲೇ ಮಾರಾಟವನ್ನು ಮಾಡುತ್ತಿದ್ದೀರಿ, ಅಂಥವರು ಮಾರುಕಟ್ಟೆಯ ವಿಭಾಗವನ್ನು ಸಹ ಆರಂಭಿಸುವ ಬಗ್ಗೆ ಅಥವಾ ಕೆಲವು ಮುಖ್ಯ ಸ್ಥಳಗಳಲ್ಲಿ ಮಳಿಗೆ ತೆರೆಯುವ ಬಗ್ಗೆ ಕೂಡ ಆಲೋಚಿಸುವ ಸಾಧ್ಯತೆ ಇದೆ. ಇದನ್ನು ಒಬ್ಬ ವ್ಯಕ್ತಿಯೇ ಮಾಡಬೇಕು ಎಂದಿಲ್ಲ. ಒಂದು ಗುಂಪಾಗಿ ಮಾಡಬಹುದು, ಇದರ ಮುಂದಾಳತ್ವವನ್ನು ನೀವು ವಹಿಸಿಕೊಳ್ಳುವಂಥ ಸಾಧ್ಯತೆ ಇದೆ. ವೃತ್ತಿನಿರತರಿಗೆ ಡೆಡ್ ಲೈನ್ ನೊಳಗೆ ಕೆಲಸ ಮಾಡಿ ಮುಗಿಸುವುದಕ್ಕೆ ನಾನಾ ಬಗೆಯಲ್ಲಿ ಸವಾಲುಗಳು ಎದುರಾಗಲಿವೆ. ಕೆಲವರಿಗೆ ಇದರಿಂದ ಆರ್ಥಿಕ ನಷ್ಟಗಳು ಸಹ ಎದುರಾಗಬಹುದು. ಯೋಜನೆಗೆ ಹಾಗೂ ಅದರ ಅನುಷ್ಠಾನಕ್ಕೆ ಅಂತ ನೀವು ಪಟ್ಟ ಶ್ರಮ, ಹಣವು ಅಂದುಕೊಂಡಂಥ ಫಲಿತಾಂಶ ತರದ ಕಾರಣಕ್ಕೆ ಬೇಸರ ಉಂಟು ಮಾಡಲಿದೆ. ಇನ್ನು ವಿದ್ಯಾರ್ಥಿಗಳಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜಂಕ್ ಫುಡ್ ಸೇವನೆಯಿಂದ ದೂರ ಇರುವುದು ಬಹಳ ಮುಖ್ಯವಾಗುತ್ತದೆ. ಮಹಿಳೆಯರಿಗೆ ಪರಿಚಯಸ್ಥರು, ಆತ್ಮೀಯರಿಂದಲೇ ಬಹಳ ವಿರೋಧದ ಮಾತುಗಳನ್ನು ಕೇಳಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮದೇ ತಪ್ಪು ನಿರ್ಧಾರದ ಕಾರಣಕ್ಕೆ ಸಜ್ಜನರ ಜತೆಗೆ ಜಗಳ- ಕದನ, ಮನಸ್ತಾಪಗಳು ಆಗಲಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಮನೆಗೆ ರೆಫ್ರಿಜರೇಟರ್, ಏಸಿ, ವಾಷಿಂಗ್ ಮಷೀನ್, ಮೈಕ್ರೋ ವೇವ್ ಓವನ್ ಇಂಥವುಗಳನ್ನು ಖರೀದಿ ಮಾಡಬೇಕು ಎಂದಿದ್ದಲ್ಲಿ ಬಜೆಟ್ ಬಗ್ಗೆ ಸ್ಪಷ್ಟತೆ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಆಫರ್ ಇದೆ ಅಂತಲೋ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದಲ್ಲಿ ಎಂಥದ್ದಾದರೂ ಉಳಿತಾಯ ಆಗುತ್ತದೆ ಎಂಬು ಮುನ್ನೆಲೆಗೆ ಬಂದು, ನೀವು ಅಂದುಕೊಳ್ಳದ ಬ್ರ್ಯಾಂಡ್ ನ, ಬೆಲೆಯದ್ದನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ.ನಿಮ್ಮದು ತಪ್ಪು ಇಲ್ಲದಿದ್ದರೆ ಕ್ಷಮೆ ಕೇಳಬೇಕಾಗಬಹುದು. ಕೆಲವು ಸಂದರ್ಭಗಳಲ್ಲಿ ತಮಾಷೆಗೆ ಆಡಿದ ಮಾತುಗಳು ಸಂಬಂಧಗಳನ್ನೇ ಹಾಳು ಮಾಡುವ ಮಟ್ಟಕ್ಕೆ ಹೋಗುತ್ತದೆ. ನಿಮ್ಮ ಪರಿಸ್ಥಿತಿ ಅದೇ ರೀತಿಯಲ್ಲಿ ಆಗಲಿದೆ. ಆದ್ದರಿಂದ ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕ್ಷೇಮ. ಇನ್ನು ಮನೆಯಲ್ಲಿ ಮಕ್ಕಳಿದ್ದಲ್ಲಿ ಅವರ ಆರೋಗ್ಯದಲ್ಲಿನ ಏರುಪೇರುಗಳು ನಿಮ್ಮನ್ನು ಒತ್ತಡ- ಆತಂಕಕ್ಕೆ ಗುರಿ ಮಾಡಲಿವೆ. ಸಮಾರಂಭ- ಕಾರ್ಯಕ್ರಮಕ್ಕೆ ತೆರಳುವುದು ಅನಿವಾರ್ಯ ಎಂಬ ಸಂದರ್ಭದಲ್ಲಿ ಆಹಾರ- ನೀರು ಸೇವನೆ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಕೃಷಿಕರು ಯಾರು ಹೈನುಗಾರಿಕೆ ಮಾಡುತ್ತಿರುವಿರೋ ಅಂಥವರು ಹೆಚ್ಚಿನ ಹೂಡಿಕೆ ಮಾಡಲಿದ್ದೀರಿ. ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಖರೀದಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ ಹಾಗೂ ಈಗಿರುವಂಥ ವ್ಯವಸ್ಥೆಯ ಜೊತೆಗೆ ತಂತ್ರಜ್ಞಾನದ ನೆರವಿನಿಂದ ಕೆಲವು ಉಪಕರಣಗಳನ್ನು ಅಳವಡಿಸಿಕೊಳ್ಳಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಈಗ ಮಾಡಿರುವಂಥ ಸಾಲದ ಪೈಕಿ ಸ್ವಲ್ಪ ಪ್ರಮಾಣದ ಮೊತ್ತವನ್ನಾದರೂ ಹಿಂತಿರುಗಿಸಬೇಕು ಎಂದುಕೊಳ್ಳಲಿದ್ದೀರಿ. ಅದೇ ರೀತಿ ಅಧ್ಯಯನ ಪ್ರವಾಸಕ್ಕಾಗಿ ತೆರಳುವ ಅಥವಾ ನಿಮಗೆ ಇರುವಂಥ ಜ್ಞಾನದ ಬಗ್ಗೆ ಇತರರಿಗೆ ತಿಳಿಸುವುದಕ್ಕೆ ಉಪನ್ಯಾಸ ನೀಡುವುದಕ್ಕೆ ಆಹ್ವಾನ ಬರಲಿದೆ. ಕೃಷಿ ಕೂಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುವವರಿಗೆ ಅಲ್ಲಿಂದ ಸ್ಥಳ ಬದಲಾವಣೆ ಮಾಡುವ ಬಗ್ಗೆ ನಿರ್ಧಾರವನ್ನು ಮಾಡುವ ಸಾಧ್ಯತೆ ಇದೆ. ಇಲ್ಲದಿದ್ದಲ್ಲಿ ಈಗ ನೀಡುತ್ತಿರುವುದಕ್ಕಿಂತ ಹೆಚ್ಚಿನ ಅನುಕೂಲ- ಹಣವನ್ನು ನೀಡುವಂತೆ ಕೇಳಲಿದ್ದೀರಿ. ವೃತ್ತಿನಿರತರಿಗೆ ತಮ್ಮ ವಾಕ್ಚಾತುರ್ಯ ಹಾಗೂ ಪ್ರಾಮಾಣಿಕತೆ- ನಿಷ್ಠೆಯ ವಿಚಾರಕ್ಕೆ ಇರುವ ಬದ್ಧತೆ ಕಾರಣಕ್ಕೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ನೀವು ಈ ಹಿಂದೆ ವಹಿಸಿದಂಥ ಶ್ರಮ ಹಾಗೂ ತೆಗೆದುಕೊಂಡಂಥ ದಿಟ್ಟ ನಿರ್ಧಾರಗಳು ಫಲ ನೀಡುವುದಕ್ಕೆ ಶುರುವಾಗುತ್ತದೆ. ಆದಾಯದಲ್ಲಿನ ಹೆಚ್ಚಳವು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮಲ್ಲಿ ಕೆಲವರಿಗೆ ಅಲ್ಪ ಅವಧಿಗಾದರೂ ವಿದೇಶಕ್ಕೆ ತೆರಳುವಂಥ ಯೋಗ ಕಂಡುಬರುತ್ತದೆ. ಅದರಲ್ಲೂ ಕುಟುಂಬ ಸಮೇತರಾಗಿ ತೆರಳುವಂಥ ಸಾಧ್ಯತೆಗಳು ಬಹಳ ಹೆಚ್ಚಿವೆ. ಈಗಾಗಲೇ ಕಾರಿದ್ದು, ಅದನ್ನು ವಿನಿಮಯ ಮಾಡಿಕೊಂಡು, ಹೊಸ ಕಾರು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರು ಅದನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಇಷ್ಟು ಸಮಯ ಕಾಡುತ್ತಿದ್ದ ವಿಚಾರವನ್ನು ಸಂಬಂಧಪಟ್ಟವರ ಎದುರು ನೇರಾನೇರ ಹೇಳುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಯಾರು ಇಷ್ಟು ಸಮಯ ನಿಮ್ಮಿಂದ ಸಹಾಯ ಮಾತ್ರ ಪಡೆದುಕೊಂಡು, ಒಂದು ದಿನಕ್ಕೂ ನಿಮಗೆ ಪ್ರತ್ಯುಪಕಾರ ಮಾಡುವ ಕುರಿತು ಆಲೋಚನೆಯೇ ಮಾಡುತ್ತಿಲ್ಲ ಎಂದೆನಿಸುತ್ತದೋ ಅಂಥವರಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳುತ್ತೀರಿ. ಮಹಿಳೆಯರು ಮಾನಸಿಕವಾಗಿ ಬಹಳ ಗಟ್ಟಿಯಾಗಿರುತ್ತೀರಿ. ಭಾವನಾತ್ಕಕವಾಗಿ ಮಾತನಾಡುತ್ತಾ ನಿಮಗೆ ಮಾನಸಿಕ ಕಿರಿಕಿರಿ ಮಾಡುತ್ತಿದ್ದ ವ್ಯಕ್ತಿಗಳಿಗೆ ಎಲ್ಲರೆದುರು ತೀಕ್ಷ್ಣವಾದ ಉತ್ತರವನ್ನು ನೀಡುತ್ತೀರಿ. ಮನೆಗೆ ಕೆಲವು ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ನಿರ್ಧಾರವನ್ನು ಮಾಡುತ್ತೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಎಷ್ಟೇ ಆತುರದಲ್ಲಿ ಇದ್ದರೂ ಈ ವಾರ ಯಾವ ಕಾರಣಕ್ಕೂ ವೇಗದ ಚಾಲನೆಯನ್ನು ಮಾಡದಿರಿ. ನಿಮಗೆ ಸರಿ ಎಂದು ಗೊತ್ತಿರುವ ಸಂಗತಿಯನ್ನು ಸಹ ಗಟ್ಟಿ ಧ್ವನಿಯಲ್ಲಿ ಹೇಳಲಾಗದ ಸ್ಥಿತಿ ಬರುತ್ತದೆ. ಸನ್ನಿವೇಶದ ಒತ್ತಡಕ್ಕೆ ಮಣಿಯದೆ ಗಟ್ಟಿಯಾಗಿ ನಿಲ್ಲುವುದರಲ್ಲಿ ನಿಜವಾದ ಸವಾಲನ್ನು ಎದುರುಗೊಳ್ಳುವಿರಿ. ಈ ವಿಚಾರವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸದಂತೆ ನೋಡಿಕೊಳ್ಳಿ. ಹಣ ಮಾಡುವವರು ತಮಗೆ ಬೇಕಾದ ಯಾವ ದಾರಿಯಲ್ಲಾದರೂ ಮಾಡಿಕೊಳ್ಳಲಿ. ಅವರ ಆದಾಯದಿಂದ ನೀವು ಉತ್ತೇಜಿತರಾಗಬೇಡಿ. ಸ್ನೇಹಿತರು- ಸಂಬಂಧಿಕರು ತಮ್ಮ ಆದಾಯದ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ವಿಪರೀತ ಆಸಕ್ತಿಯನ್ನು ತೋರಿಸಬೇಡಿ. ಯಾಕೆಂದರೆ ನೀವು ಇತರರ ಮಾತಿನಿಂದ ಪ್ರಭಾವಕ್ಕೆ ಒಳಗಾಗಿ ಬೆಟ್ಟಿಂಗ್ ಮೇಲೆ ಅಥವಾ ಅಪಾಯವು ಹೆಚ್ಚಿರುವಂಥ ಕೆಲವು ಕಡೆಗೆ ಹೆಚ್ಚಿನ ಹಣ ಹಾಕುವಂಥ ಸಾಧ್ಯತೆ ಇದೆ. ಆದ್ದರಿಂದ ರೊಚ್ಚಿಗೆದ್ದು ಜೂಜಿಗಾಗಿ ಅಥವಾ ಷೇರು ಮಾರುಕಟ್ಟೆ, ಅದರಲ್ಲೂ ಫ್ಯೂಚರ್ ಅಂಡ್ ಆಪ್ಷನ್ ಟ್ರೇಡಿಂಗ್ ಮೇಲೆ ಹಣವನ್ನು ಹಾಕದಿರಿ. ಇನ್ನು ಬಾಡಿಗೆ ಆದಾಯದ ಮೂಲಕ ಹಣ ಗಳಿಸುವವರಿಗೆ ಅದರಲ್ಲಿ ಇಳಿಕೆ ಕಾಣಿಸಲಿದೆ. ನಿಮ್ಮ ಮೂಲ ಸ್ವಭಾವದಿಂದ ಬದಲಾವಣೆ ಮಾಡಿಕೊಳ್ಳದಿರಿ. ಸಂಬಂಧಿಕರ ಕಡೆಯಿಂದ ನಿಮ್ಮ ಸಹಾಯವನ್ನು ಕೇಳಿಕೊಂಡು ಬರಬಹುದು. ಕೃಷಿಕರಾಗಿದ್ದಲ್ಲಿ ಏಕಾಂಗಿತನ ನಿಮ್ಮನ್ನು ಕಾಡಬಹುದು. ಸಂಬಂಧ- ಸ್ನೇಹದಲ್ಲಿ ಈ ಹಿಂದೆ ಆದ ಘಟನೆಯನ್ನು ಈಗ ಎತ್ತಾಡಿ, ಬೇಸರ ಹೊರಹಾಕಲಿದ್ದಾರೆ. ಈ ಹಿಂದೆ ನೀವು ತೆಗೆದುಕೊಂಡ ಹಣಕಾಸಿನ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಇನ್ನು ಮನೆಯಿಂದ ದೂರದಲ್ಲಿ ಇದ್ದು, ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಸಾಲವನ್ನಾದರೂ ಪಡೆದು ಕುಟುಂಬದ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಆಸ್ತಮಾ, ಮೈಗ್ರೇನ್ ಈ ರೀತಿ ಆರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳಿಂದ ದೂರವಿರಿ. ವೃತ್ತಿಪರರಾಗಿದ್ದಲ್ಲಿ ಬಿಡುವಿಲ್ಲದಷ್ಟು ಕೆಲಸಗಳು ನಿಮ್ಮ ಮೈ ಮೇಲೆ ಬರಲಿವೆ. ನೀವು ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದಿದ್ದ ವೃತ್ತಿಪರತೆಗೆ ಅಗತ್ಯ ಇರುವಂಥ ಸಲಕರಣೆ, ವಸ್ತುಗಳನ್ನು ಕೊಳ್ಳುವಂಥ ಸಾಧ್ಯತೆಗಳಿವೆ. ಪ್ರಭಾವಿಗಳ ಪರಿಚಯ ಆಗಲಿದೆ. ಈ ಹಿಂದೆ ನೀವು ಕಷ್ಟಪಟ್ಟು ಬೆಳೆಸಿಕೊಂಡಿದ್ದ ಸಾಮರ್ಥ್ಯ, ಪರಿಚಯ ಈಗ ನಿಮಗೆ ಉಪಯೋಗಕ್ಕೆ ಆಗಲಿದೆ. ಸಣ್ಣ ಪ್ರಮಾಣದಲ್ಲಿಯಾದರೂ ಸಾಲ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಾಗಿದ್ದಲ್ಲಿ ಉಳಿತಾಯ ಮಾಡಿದ್ದ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಿಂತೆಗೆಯಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಆದರೆ ಅದನ್ನು ಯಾವ ಕಾರಣಕ್ಕೆ ಹಣ ತೆಗೆದುಕೊಳ್ಳುತ್ತೀರೋ ಅದಕ್ಕಾಗಿಯೇ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಬ್ಲ್ಯಾಕ್ ಮೇಲ್ ಗೆ ಗುರಿ ಆಗುವ ಸಾಧ್ಯತೆಗಳಿವೆ. ಪೊಲೀಸ್ ಠಾಣೆ ಕೆಲಸಗಳು, ಕೋರ್ಟ್- ಕಚೇರಿ ವ್ಯವಹಾರಗಳಿಗೆ ಅಲೆದಾಡುವಂಥ ಯೋಗವಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈಗ ನೀವು ಮಾಡುತ್ತಿರುವ ಕೆಲಸದ ಜತೆಗೆ ಹೊಸದಾಗಿ ಕೆಲವು ಕೆಲಸಗಳನ್ನು ಆರಂಭಿಸುವ ಸಾಧ್ಯತೆಗಳಿವೆ. ಇದರ ಅರ್ಥ ಏನೆಂದರೆ, ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಶತಾಯಗತಾಯ ಪ್ರಯತ್ನವನ್ನು ಮಾಡಲಿದ್ದೀರಿ. ನಿಮ್ಮ ಭಾವನೆಗೆ ಬೆಲೆ ಕೊಟ್ಟು ತೆಗೆದುಕೊಂಡ ನಿರ್ಧಾರ ಏನು ಫಲ ನೀಡಿದೆ ಎಂಬುದನ್ನು ಯೋಚಿಸಲು ಆರಂಭಿಸುತ್ತೀರಿ. ಅನಿಸಿದ್ದನ್ನೆಲ್ಲ ಮಾಡಬೇಕು ಎಂದುಕೊಳ್ಳುವವರು ಸ್ವಲ್ಪ ಆಲೋಚಿಸಿ ತೀರ್ಮಾನ ಮಾಡಬೇಕು ಅಂದುಕೊಳ್ಳಲಿದ್ದೀರಿ. ಇನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೊಬ್ಬರ ಬಳಿ ಕೈ ಚಾಚಬಾರದು ಎಂದು ಗಟ್ಟಿಯಾಗಿ ತೀರ್ಮಾನವನ್ನು ಮಾಡಲಿದ್ದೀರಿ. ಏಕೆಂದರೆ ಇದೇ ವಿಚಾರಕ್ಕೆ ಕೆಲವು ಅವಮಾನಗಳನ್ನು ನೀವು ಎದುರಿಸಲಿದ್ದೀರಿ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ಇದು ಉತ್ತಮ ಸಮಯವಾಗಿರಲಿದೆ. ನಿಮ್ಮ ವೈಯಕ್ತಿಕ ನಿಲವು, ಸಿದ್ಧಾಂತಗಳು ಏನೇ ಇರಲಿ, ಹೊಸಬರು ಪರಿಚಯ ಆದಾಗ ದೀರ್ಘ ಕಾಲದ ಒಡನಾಟವನ್ನು ಅವರ ಜತೆಗೆ ಮುಂದುವರಿಸುವ ಬಗ್ಗೆ ಪ್ರಯತ್ನವನ್ನು ಮಾಡಿ. ಸಿನಿಮಾ ರಂಗದಲ್ಲಿ ಇರುವವರು ಕೆಲವು ಟೀಕೆ- ಟಿಪ್ಪಣಿಗಳನ್ನು ಕೇಳಬೇಕಾಗುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗದಿರಿ. ಹೊಸ ಪ್ರಾಜೆಕ್ಟ್ ಗಳು ಬಂದಾಗ ಮುಕ್ತ ಮನಸ್ಸಿನಿಂದ ಕೇಳಿಸಿಕೊಳ್ಳಿ. ಆ ನಂತರ ಸಾಧಕ- ಬಾಧಕಗಳ ಬಗ್ಗೆ ಆಲೋಚನೆಯನ್ನು ಮಾಡಿ. ಕೃಷಿಕರಿಗೆ ಆಪ್ತ ಸ್ನೇಹಿತರು, ತುಂಬ ನಂಬಿರುವಂಥ ವ್ಯಕ್ತಿಗಳ ಜತೆಗೆ ಅಭಿಪ್ರಾಯ ಭೇದಗಳು, ಮನಸ್ತಾಪಗಳು ಆಗುವಂಥ ಯೋಗ ಇದೆ. ಮದ್ಯಪಾನದ ಅಭ್ಯಾಸ ಇರುವಂಥವರು ಸಾಧ್ಯವಾದಷ್ಟೂ ಅದರಿಂದ ದೂರ ಇರುವುದು ಒಳ್ಳೆಯದು. ಹತ್ತಾರು ಜನರು ಇರುವಂಥ ಸ್ಥಳದಲ್ಲಿ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮೌನವಾಗಿರುವುದಕ್ಕೆ ಪ್ರಯತ್ನಿಸಿ. ವೃತ್ತಿನಿರತರ ಬಗ್ಗೆ ಹೇಳುವುದಾದರೆ, ವಿದೇಶ ಪ್ರಯಾಣಗಳನ್ನು ಮಾಡುತ್ತಿರುವವರು ಅಥವಾ ಮಾಡಬೇಕೆಂದು ಇರುವವರು ಹಣಕಾಸು ಅಗತ್ಯವನ್ನು ಸರಿಯಾಗಿ ಲೆಕ್ಕ ಹಾಕಿಕೊಂಡು, ಆ ನಂತರ ಯೋಜನೆಯನ್ನು ರೂಪಿಸಿ. ನಿಮ್ಮಲ್ಲಿ ಯಾರು ಕಟ್ಟಡ ನಿರ್ಮಾಣವನ್ನು ಮಾಡುತ್ತಿದ್ದೀರಿ, ಅಂಥ ಕಾಂಟ್ರಾಕ್ಟರ್ ಗಳಿಗೆ ಹೊಸ ಪ್ರಾಜೆಕ್ಟ್ ಗಳು ಬರಲಿವೆ. ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡ ನಂತರವಷ್ಟೇ ಒಪ್ಪಿಕೊಳ್ಳಿ. ಇಲ್ಲದಿದ್ದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನೀಡುವಂಥ ಸಲಹೆ- ಸೂಚನೆ, ಎಚ್ಚರಿಕೆಯನ್ನು ಗಂಭೀರವಾಗಿ ಸ್ವೀಕರಿಸುವುದು ಹಾಗೂ ಸದ್ವಿಚಾರಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ನಿಂದೆಯನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮದೇ ತಪ್ಪು ಎಂದು ಖಾತ್ರಿ ಆದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕ್ಷಮೆಯನ್ನು ಕೇಳುವುದು ಉತ್ತಮ. ವಿತಂಡವಾದವನ್ನು ಹೂಡಿ, ನಾನು ಮಾಡಿದ್ದೇ ಸರಿ ಎಂದು ಸಾಬೀತು ಮಾಡುವುದಕ್ಕೆ ಅಂತೇನಾದರೂ ನಿಂತುಕೊಂಡಲ್ಲಿ ಈ ಹಿಂದೆ ನಿಮ್ಮಿಂದ ಏನೇನು ತಪ್ಪುಗಳಾಗಿದ್ದವೋ ಅವು ಸಹ ಹೊರಗೆ ಬಂದು, ಅವಮಾನಕ್ಕೆ ಈಡಾಗುತ್ತೀರಿ. ಮಹಿಳೆಯರು ಕುಟುಂಬದೊಳಗೆ ಪ್ರಾಮುಖ್ಯವನ್ನು ಪಡೆಯಲಿದ್ದೀರಿ. ನಿಮ್ಮ ಸಂಗಾತಿಗೆ ಅಥವಾ ಸ್ನೇಹಿತರಿಗೆ ನೀಡಿದಂಥ ಸಲಹೆಗಳಿಂದ ಅವರಿಗೆ ಬಹಳ ಅನುಕೂಲಗಳು ಒದಗಿಬರಲಿವೆ. ನಿಮಗೆ ಆಪ್ತರಾದವರು ಉಡುಗೊರೆಗಳನ್ನು ನೀಡುವಂಥ ಯೋಗವಿದೆ. ನಿಮಗೆ ಆಪ್ತರು- ಸ್ನೇಹಿತರು ಆದವರ ಜತೆಗೆ ಅಭಿಪ್ರಾಯ ಭೇದಗಳು ಏರ್ಪಟ್ಟಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳಲು ಅವಕಾಶ ದೊರೆಯಲಿದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯಲಿದೆ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Fri, 12 September 25




