ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರಿಗೆ ಸಂಕಷ್ಟ

ಬಾಗಲಕೋಟೆ ಉಪಚುನಾವಣೆ ಪ್ರಚಾರದಲ್ಲಿ ರಾಜಕಾರಣಿಗಳ ವಿವಾದಾತ್ಮಕ ಮಾತುಗಳು ಆಕ್ರೋಶಕ್ಕೆ ಕಾರಣವಾಗಿವೆ. ಮಾಜಿ ಸಚಿವ ಸಿಸಿ ಪಾಟೀಲ್ ಕುರುಬ ಸಮಾಜದ ಬಗ್ಗೆ ಬಳಸಿದ ಅದೊಂದು ಪದ ತೀವ್ರ ವಿರೋಧಕ್ಕೆ ಗುರಿಯಾಗಿದೆ. ಪ್ರತಾಪ ಸಿಂಹ ಅವರ ಹೇಳಿಕೆ ವಿರುದ್ಧವೂ ದೂರು ದಾಖಲಾಗಿದೆ. ಮತದಾರರನ್ನು ಸೆಳೆಯುವ ಭರದಲ್ಲಿ ನಾಯಕರು ನಾಲಿಗೆ ಹಿಡಿತ ಕಳೆದುಕೊಂಡು ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರಿಗೆ ಸಂಕಷ್ಟ
bjp
Image Credit source: news18.com english
Edited By:

Updated on: Apr 14, 2026 | 7:00 PM

ಬಾಗಲಕೋಟೆ, ಏಪ್ರಿಲ್​ 14: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ (By-election) ಎಲ್ಲರ ಗಮನ ಸೆಳೆದಿವೆ. ಉಪಚುನಾವಣೆ ಪ್ರಯುಕ್ತ ಘಟಾನುಘಟಿ ನಾಯಕರು ಬಂದು ಮತಯಾಚನೆ ಮಾಡಿ ಹೋಗಿದ್ದಾರೆ. ಆದರೆ ಪ್ರಚಾರದ ಭರಾಟೆಯಲ್ಲಿ ನಾಯಕರು ಆಡಿದ ಮಾತುಗಳು ಇದೀಗ ವಿವಾದಕ್ಕೆ ಈಡಾಗಿವೆ. ಮಾಜಿ ಸಚಿವ ಸಿಸಿ ಪಾಟಿಲ್ ಕುರುಬ ಸಮಾಜದ ಬಗ್ಗೆ ಟುರ್ ಎಂದು ಬಳಸಿದ ಪದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಹೆಚ್​ವೈ ಮೇಟಿ ಅಕಾಲಿಕ ನಿಧನದಿಂದ ಬಾಗಲಕೋಟೆಗೆ ಉಪಚುನಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಎರಡು ಪ್ರಮುಖ ಪಕ್ಷದ ಘಟಾನುಘಟಿ ನಾಯಕರು ಪ್ರಚಾರ ಮಾಡಿ ಹೋಗಿದ್ದಾರೆ. ಆದರೆ ಪ್ರಚಾರದ ಭರಾಟೆಯಲ್ಲಿ ಕೆಲ ನಾಯಕರು ನಾಲಿಗೆ ಹರಿಬಿಟ್ಟು ಸುದ್ದಿಯಾಗಿದ್ದರು.

ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ದೂರು 

ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ದ ನಾಲಿಗೆ ಹರಿಬಿಟ್ಟಿದ್ದರು. ಮಾಂಸನಾದ್ರೂ ತಿನ್ನು, ಸುನ್ನತ್​​ ಆದರೂ ಮಾಡಿಕೋ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಕಾಂಗ್ರೆಸ್ ಮುಖಂ ವಕೀಲ ರಮೇಶ್ ಬದ್ನೂರು ನವನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಸಿಸಿ ಪಾಟೀಲ್ ಕ್ಷಮೆ ಕೇಳಬೇಕು: ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಆಗ್ರಹ

ಇದೊಂದು ಕಡೆ ಆದರೆ ಪಂಚಮಸಾಲಿ ಸಮಾಜದ ಪ್ರಚಾರ ಸಭೆ ವೇಳೆ ಮಾಜಿ ಸಚಿವ ಸಿಸಿ ಪಾಟೀಲ್​ ಆಡಿದ ಮಾತಿಗೆ ಕುರುಬ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟುರ್‌ ಎಂಬ ಪದ ಬಳಕೆ ಮಾಡಿರುವುದು ಕುರುಬ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಡಿಬಿ ಸಿದ್ದಾಪುರ ಸಿಸಿ ಪಾಟೀಲ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ 

ಸಿಸಿ ಪಾಟೀಲ್​ ಆಡಿದ ಮಾತಿಗೆ ಬಿಜೆಪಿ ಕುರುಬ ಸಮಾಜದ‌ ನಾಯಕರೂ ಕಿಡಿ ಕಾರುತ್ತಿದ್ದಾರೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ತಾಯಿ‌ ಮಗನ ರೀತಿ ಸಂಬಂಧ ಹೊಂದಿದವರು. ಆದರೆ ಸಿಸಿ ಪಾಟೀಲ್​ ಇಂತಹ ಮಾತುಗಳನ್ನಾಡಿ ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಒಂದು ವಾರದೊಳಗೆ ಸಿಸಿ ಪಾಟೀಲ್​ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನರಗುಂದದಲ್ಲಿರುವ ಅವರ ಮನೆಗೆ ಕುರಿ ಸಮೇತ​ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ

ಇನ್ನು ಪ್ರಚಾರದ ವೇಳೆ ಮತದಾರರನ್ನು ಸೆಳೆಯೋದಕ್ಕೆ ನಾಯಕರು ವಿವಿಧ ಟ್ರಿಕ್ ಬಳಸಿದ್ದರು. ಸಮಾಜದ ಸಭೆಗಳ ಮೂಲಕ ಆಯಾ ಸಮಾಜದ ಮತ ಸೆಳೆಯುವಲ್ಲಿ ಪ್ರಯತ್ನಿಸಿದ್ದರು. ಆದರೆ ಮಾತಿನ ಭರದಲ್ಲಿ‌ ನಾಲಿಗೆ ಹಿಡಿತ‌ ಕಳೆದುಕೊಂಡು ಆಕ್ರೋಶಕ್ಕೆ‌ ಕಾರಣರಾಗಿದ್ದಾರೆ. ಒಟ್ಟಿನಲ್ಲಿ ಪ್ರಚಾರದ ವೇಳೆ ಆಡಿದ ಮಾತುಗಳು ನಾಯಕರಿಗೆ ಮುಳುವಾಗುತ್ತಿವೆ. ಆಡಿದ‌ ಮಾತಿಗೆ ಸ್ವಪಕ್ಷದಿಂದಲೇ ಇದೀಗ ವಿರೋಧ ಎದುರಿಸುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us