ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ಮದ್ಯ ಕುಡಿಸಿ ಸ್ನೇಹಿತನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಯುವಕ
ಸ್ನೇಹಿತನ ಪತ್ನಿ ಜತೆ ಅತಿಯಾದ ಸಲುಗೆ, ನಿರಂತರ ಫೋನ್ ಸಂಪರ್ಕದಲ್ಲಿದ್ದುದೇ ವ್ಯಕ್ತಿಯೊಬ್ಬನ ಪಾಲಿಗೆ ಮುಳುವಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖಾನಾಪುರ ಎಸ್ಕೆ ಗ್ರಾಮದಲ್ಲಿ ನಡೆದಿದೆ. ಹೆಂಡತಿ ಜತೆ ಸ್ನೇಹಿತನಿಗೆ ಅನೈತಿಕ ಸಂಬಂಧ ಇದೆ ಎಂಬ ಶಂಕೆಯಲ್ಲಿ ಗೆಳೆಯನೇ ಆತನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಬಾಗಲಕೋಟೆ, ಫೆಬ್ರವರಿ 3: ಬಾಗಲಕೋಟೆ (Bagalkot) ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖಾನಾಪುರ ಎಸ್ಕೆ ಗ್ರಾಮದ ಸಮೀಪದ ಮಾವಿನ ತೋಟದಲ್ಲಿ ಯುವಕನೊಬ್ಬ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪತ್ನಿಯೊಂದಿಗೆ ಸ್ನೇಹಿತನಿಗೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯೇ ಈ ಭೀಕರ ಕೊಲೆಗೆ ಕಾರಣ ಎನ್ನಲಾಗಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಖಾನಾಪುರ ಎಸ್ಕೆ ಗ್ರಾಮದ ನಿವಾಸಿ ಸೋಮಶೇಖರ್ ಕಿಳ್ಳಿಕೇತರ (45) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಸ್ನೇಹಿತ ಸಂಜೀವ್ ಕಿಳ್ಳಿಕೇತರ (28) ಕೂಡ ಬಾದಾಮಿ ತಾಲ್ಲೂಕಿನ ಕಾಕನೂರು ಗ್ರಾಮದ ನಿವಾಸಿಯಾಗಿದ್ದಾನೆ.
ಸಂಜೀವ್ ಪತ್ನಿಯೊಂದಿಗೆ ಸೋಮಶೇಖರ್ ಅತಿಯಾದ ಸಲುಗೆಯಿಂದ ವರ್ತಿಸುತ್ತಿದ್ದು, ಫೋನ್ನಲ್ಲಿ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಇದು ಸಂಜೀವ್ಗೆ ಅನುಮಾನ ಹುಟ್ಟಿಸಿತ್ತು. ಈ ವಿಷಯವಾಗಿ ಸ್ನೇಹಿತನಿಗೆ ದೂರ ಇರಲು ಎಚ್ಚರಿಕೆ ನೀಡಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ತಿಳಿದುಬಂದಿದೆ.
ಆದರೂ ಇಬ್ಬರೂ ಮದ್ಯಪಾನಕ್ಕೆ ಜೊತೆಯಾಗಿ ಸೇರುವ ಸ್ನೇಹಿತರಾಗಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಇಬ್ಬರೂ ಖಾನಾಪುರ ಎಸ್ಕೆ ಗ್ರಾಮದ ಸಮೀಪದ ಮಾವಿನ ತೋಟದಲ್ಲಿ ಮದ್ಯಪಾನ ಮಾಡಿದ್ದರು. ಆ ಸಂದರ್ಭ ಸೋಮಶೇಖರ್ಗೆ ಕಂಠಪೂರ್ತಿ ಮದ್ಯ ಕುಡಿಸಿದ್ದ ಸಂಜೀವ್, ಆತ ಪೂರ್ತಿ ನಶೆಯಲ್ಲಿದ್ದಾಗ ಕಲ್ಲಿನಿಂದ ತಲೆ ಮತ್ತು ಮುಖವನ್ನು ಜಜ್ಜಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರದಿಂದ ಸೋಮಶೇಖರ್ ಕಾಣೆಯಾಗಿದ್ದ ಹಿನ್ನೆಲೆ ಶೋಧ ನಡೆಸಲಾಗಿತ್ತು. ಬಳಿಕ ಮಾವಿನ ತೋಟದಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಪ್ರಕರಣ ಎಂಬುದು ದೃಢಪಟ್ಟಿದೆ.
ಇದನ್ನೂ ಓದಿ: ಸಿಜೆ ರಾಯ್ ಸಾವಿನ ಹಿಂದಿತ್ತಾ ಬೇರೆಯದೇ ಕಾರಣ? ಆತ್ಮಹತ್ಯೆಯ ಹಿಂದಿನ ದಿನ ನಡೆದಿದ್ದೇನು?
ಘಟನಾ ಸ್ಥಳಕ್ಕೆ ಬಾದಾಮಿ ಪೊಲೀಸರು ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಪತ್ತೆಯಾದ ಬಳಿಕ ಮೃತನ ಕುಟುಂಬಸ್ಥರು ಎಸ್ಪಿ ಎದುರು ಕಣ್ಣೀರಿಟ್ಟಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.
