ಸರ್ಕಾರಕ್ಕೆ ಮತ್ತೆ ಕಬ್ಬಿನ ಕಂಟಕ: 5,500 ರೂ ನಿಗದಿಗೆ ಪಟ್ಟು; ಬಾಗಲಕೋಟೆಯಲ್ಲಿ ಮತ್ತೆ ಸಿಡಿದೆದ್ದ ರೈತರು

ಕಬ್ಬು ಬೆಳೆಗಾರರು ಪ್ರತಿ ಟನ್‌ಗೆ 5,500 ಬೆಲೆ ನಿಗದಿ, ಎಂಎಸ್‌ಪಿ ಪರಿಷ್ಕರಣೆ ಮತ್ತು ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಕಬ್ಬು ಬೆಳೆಗಾರರು ಮತ್ತೆ ಸಜ್ಜಾಗಿದ್ದಾರೆ. ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ ರೈತರು ಸಂಘಟಿತರಾಗಿದ್ದು, ಕೇಂದ್ರ ಸಚಿವ ಪ್ರಲ್ಹಾಸ್​ ಜೋಶಿ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಸರ್ಕಾರಕ್ಕೆ ಮತ್ತೆ ಕಬ್ಬಿನ ಕಂಟಕ: 5,500 ರೂ ನಿಗದಿಗೆ ಪಟ್ಟು; ಬಾಗಲಕೋಟೆಯಲ್ಲಿ ಮತ್ತೆ ಸಿಡಿದೆದ್ದ ರೈತರು
ಕಬ್ಬು ಬೆಳೆಗಾರರ ಹೋರಾಟ
Image Credit source: tv9 kannada
Edited By:

Updated on: Sep 17, 2026 | 7:19 PM

ಬಾಗಲಕೋಟೆ, ಸೆಪ್ಟೆಂಬರ್​ 17: ಕಬ್ಬು ನುರಿಸುವ ಹಂಗಾಮು ಸಮೀಪಿಸುತ್ತಿದ್ದಂತೆ ಕಬ್ಬು ಬೆಳೆಗಾರರು ಮತ್ತೆ ಹೋರಾಟದ ಹಾದಿ ಹಿಡಿದಿದ್ದಾರೆ. ಕಳೆದ ವರ್ಷ ನಡೆದ ತೀವ್ರ ಪ್ರತಿಭಟನೆಗೆ ಮಣಿದು ಸರ್ಕಾರ ಪ್ರತಿ ಟನ್‌ಗೆ 3,300 ರೂ ನೀಡಲು ಒಪ್ಪಿತ್ತು. ಆದರೆ ಈ ಬಾರಿ ಪ್ರತಿ ಟನ್ ಕಬ್ಬಿಗೆ 5,500 ಬೆಲೆ ನಿಗದಿ ಮಾಡಬೇಕೆಂದು ರೈತರು ಪಟ್ಟು ಹಿಡಿದಿದ್ದು, ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ. ಬೆಲೆ ಘೋಷಣೆ ಮಾಡಿದ ನಂತರವೇ ನವೆಂಬರ್‌ನಲ್ಲಿ ಕಾರ್ಖಾನೆಗಳನ್ನು ಆರಂಭಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ರೈತರ ಸಂಘಟನೆ: ಬೈಕ್ ರ‍್ಯಾಲಿ ಮೂಲಕ ಜಾಗೃತಿ

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಹೋರಾಟಕ್ಕೆ ರೈತರನ್ನು ಈಗಿಂದಲೇ ಬಾಗಲಕೋಟೆ ‌ಜಿಲ್ಲೆಯಲ್ಲಿ ಸಂಘಟನೆ ಮಾಡಲಾಗುತ್ತಿದೆ. ಈಗಾಗಲೇ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಕೆರೂರು ಸೇರಿದಂತೆ ವಿವಿಧೆಡೆ ಜಿಲ್ಲೆಯ ರೈತರ ಸಭೆ ಮಾಡಲಾಗುತ್ತಿದೆ. ಬೈಕ್ ರ‍್ಯಾಲಿ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಈ ವರ್ಷ ಟನ್ ಕಬ್ಬಿಗೆ 5,500 ರೂ ಬೆಲೆಗೆ ರೈತರ ಆಗ್ರಹವಿದ್ದು, ಸರ್ಕಾರದ ಮುಂದೆ ಬಾರಿ ಸವಾಲು ಎದುರಾಗಿದೆ. ನವೆಂಬರ್​ನಲ್ಲಿ ಕಬ್ಬು ನುರಿಸುವ ಕಾರ್ಯ ಶುರುವಾಗಲಿದ್ದು 5,500 ಬೆಲೆ ಘೋಷಣೆ ಮಾಡಿಯೇ ಕಾರ್ಖಾನೆ ಆರಂಭಿಸಬೇಕು, ಇಲ್ಲದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನೆಗೆ ಮುತ್ತಿಗೆ ಹಾಕಲು ಪ್ಲ್ಯಾನ್​​

ಕಳೆದ ವರ್ಷ 3500 ರೂ.ಗೆ ಹೋರಾಟ ತೀವ್ರವಾಗಿತ್ತು. ಬಾಗಲಕೋಟೆಯಲ್ಲಿ ಸಮೀರವಾಡಿ ಸಕ್ಕರೆ ಕಾರ್ಖಾನೆ ಮುಂದೆ ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚಿದ ಪ್ರಸಂಗವೂ ನಡೆದಿತ್ತು. ಈ ವರ್ಷ ಅದಕ್ಕಿಂತ ದೊಡ್ಡ ಹೋರಾಟಕ್ಕೆ ಬಾಗಲಕೋಟೆ ಕಬ್ಬು ಬೆಳೆಗಾರರು ಸಜ್ಜಾಗಿದ್ದಾರೆ. ರೈತರ ಪ್ರಮುಖ ಬೇಡಿಕೆಗಳಾದ ಪ್ರತಿ ಟನ್ ಕಬ್ಬಿಗೆ 5,500 ರೂ ನಿಗದಿ, ಕೇಂದ್ರದಿಂದ MSP ಪರಿಷ್ಕರಣೆ, ಸ್ವಾಮಿನಾಥನ್ ವರದಿ ಜಾರಿ ಪ್ರಮುಖ ಬೇಡಿಕೆಗಳಾಗಿದ್ದು, ಈ ಬೇಡಿಕೆಗಳ ಈಡೇರಿಕೆಗಾಗಿ ಸೆಪ್ಟೆಂಬರ್ 29ಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹುಬ್ಬಳ್ಳಿಯಲ್ಲಿರುವ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ. ಈಗಾಗಲೇ ಬಾಗಲಕೋಟೆ ಜಿಲ್ಲೆಯಾದ್ಯಂತ ಸಂಘಟನೆ ಜೋರಾಗಿದೆ.

ಇದನ್ನೂ ಓದಿ: ‘ಬೆಲ್ಲದ ನಾಡು’ ಮಹಾಲಿಂಗಪುರಕ್ಕೆ ಕಹಿ ಕಾಲ: ಗತವೈಭವ ಕಳೆದುಕೊಂಡ ಏಷ್ಯಾದ ಪ್ರಸಿದ್ಧ ಬೆಲ್ಲದ ಮಾರುಕಟ್ಟೆ!

ಒಟ್ಟಿನಲ್ಲಿ ಕಬ್ಬು ನುರಿಸುವ ಸೀಸನ್ ಆರಂಭಕ್ಕೂ ಮುನ್ನವೇ ರೈತರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಪ್ರತಿ ಟನ್​ಗೆ 5500 ರೂ ಬೇಡಿಕೆ ಸರಕಾರಕ್ಕೆ ಮುಂದೆ ದೊಡ್ಡ ಸವಾಲು ಆಗೋದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us