ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶೇ 7ರಷ್ಟು ಮೀಸಲಾತಿ: ಸಿಎಂ ಡಿಕೆ ಶಿವಕುಮಾರ್ ಘೋಷಣೆ

ಸಿಎಂ ಡಿಕೆ ಶಿವಕುಮಾರ್​ ಇಂದು ವಿಜಯನಗರದ ಕೂಡ್ಲಿಗಿಯಲ್ಲಿ 'ಪ್ರಜಾಸೇವಾ ಅಭಿಯಾನ'ಕ್ಕೆ ಚಾಲನೆ ನೀಡಿದರು. ‘ಮನೆಬಾಗಿಲಿಗೆ ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಘೋಷವಾಕ್ಯದಡಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಶೇ. 7ರಷ್ಟು ಆಂತರಿಕ ಮೀಸಲಾತಿ, ಶಿಕ್ಷಕರಿಗೆ 'TR' ಬಿರುದು ಮತ್ತು ಹಕ್ಕು ಪತ್ರ ವಿತರಣೆ ಸೇರಿ ಹಲವು ಜನಪರ ಯೋಜನೆಗಳನ್ನು ಸಿಎಂ ಘೋಷಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶೇ 7ರಷ್ಟು ಮೀಸಲಾತಿ: ಸಿಎಂ ಡಿಕೆ ಶಿವಕುಮಾರ್ ಘೋಷಣೆ
ಪ್ರಜಾಸೇವಾ ಅಭಿಯಾನಕ್ಕೆ ಸಿಎಂ ಚಾಲನೆ
Image Credit source: x/CMofKarnataka

Updated on: Sep 05, 2026 | 3:28 PM

ವಿಜಯನಗರ, ಸೆಪ್ಟೆಂಬರ್​ 05: ‘ಅಕ್ಷರ ಸೇವೆಯೇ ಪರಮಾತ್ಮನ ಸೇವೆ. ಸಮಾಜವನ್ನು ತಿದ್ದಿ ತೀಡುವ ಶಿಕ್ಷಕರಿಗೆ ಅರ್ಹ ಗೌರವ ಸಿಗಬೇಕು. ವೈದ್ಯರ ಹೆಸರಿನ ಮುಂದೆ ‘Dr’ ಎಂದು ಬಳಸುವಂತೆ, ಇನ್ಮುಂದೆ ಪ್ರತಿಯೊಬ್ಬ ಶಿಕ್ಷಕರ ಹೆಸರಿನ ಮುಂದೆಯೂ ಗೌರವಾರ್ಥವಾಗಿ ‘Tr’ ಎಂದು ಸಂಬೋಧಿಸಲು ಸರ್ಕಾರ ತೀರ್ಮಾನಿಸಿದೆ. ಬಡ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಶಕ್ತಿ ತುಂಬಲು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7ರಷ್ಟು ಆಂತರಿಕ ಮೀಸಲಾತಿ ನೀಡಲು ಕ್ಯಾಬಿನೆಟ್‌ನಲ್ಲಿ ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಇದರ ಜಾರಿಯ ರೂಪುರೇಷೆ ಪ್ರಕಟಿಸುವುದಾಗಿ ಸಿಎಂ ಡಿಕೆ ಶಿವಕುಮಾರ್​  ಘೋಷಿಸಿದರು.

ಮನೆಬಾಗಿಲಿಗೆ ಬಂತು ಸರ್ಕಾರ: ತಿಂಗಳಿಗೆ ಎರಡು ದಿನ ಜನರ ಬಳಿಗೆ ಅಧಿಕಾರಿಗಳು

‘ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ’ ಎಂಬ ಧ್ಯೇಯವಾಕ್ಯದೊಂದಿಗೆ  ಆರಂಭವಾಗಿರುವ ‘ಪ್ರಜಾಸೇವಾ ಅಭಿಯಾನ’ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಿಎಂ ಡಿಕೆ ಶಿವಕುಮಾರ್​ ಶನಿವಾರ ಚಾಲನೆ ನೀಡಿದರು. ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲಾ ಮಂತ್ರಿಗಳು, ಶಾಸಕರು ಮತ್ತು ಅಧಿಕಾರಿಗಳು ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ತಾಲೂಕು ಮಟ್ಟಕ್ಕೆ ಖುದ್ದು ತೆರಳಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ವಿಧಾನಸೌಧಕ್ಕಾಗಲಿ, ಜಿಲ್ಲಾಧಿಕಾರಿ ಕಚೇರಿಗಳಿಗಾಗಲಿ ಅಲೆಯಲು ಸಾಧ್ಯವಾಗದ ದುರ್ಬಲ ವರ್ಗದವರಿಗೆ ಸ್ಥಳದಲ್ಲೇ ನ್ಯಾಯ ಒದಗಿಸುವುದು ಇದರ ಮೂಲ ಉದ್ದೇಶ. ಈಗಾಗಲೇ 50 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಅರ್ಜಿ ಸ್ವೀಕಾರಕ್ಕೆ ಸೀಮಿತವಾಗದೆ ಪರಿಹಾರ ಸಿಗುವವರೆಗೂ ಸರ್ಕಾರ ಬೆನ್ನಿಗೆ ನಿಲ್ಲಲಿದೆ’ ಎಂದು ಸಿಎಂ ಅಭಯ ನೀಡಿದರು.

ನಾನು ನಾಡದೊರೆಯಲ್ಲ, ನಿಮ್ಮ ಪ್ರಜಾಸೇವಕ ಎಂದ ಡಿಕೆ ಶಿವಕುಮಾರ್​

‘ಪ್ರಜಾಪ್ರಭುತ್ವದಲ್ಲಿ 136 ಸ್ಥಾನಗಳನ್ನು ನೀಡಿ ಅಧಿಕಾರ ಕೊಟ್ಟಿರುವ ನೀವೇ ನಿಜವಾದ ಮಾಲೀಕರು. ನನ್ನನ್ನು ನಾಡದೊರೆ ಎಂದು ಕರೆಯಬೇಡಿ, ನಾನು ನಿಮ್ಮ ಪ್ರಜಾಸೇವಕ. ಜನರ ಯಶಸ್ಸೇ ಸರ್ಕಾರದ ನಿಜವಾದ ಮಾನದಂಡ. ಕಂದಾಯ ಇಲಾಖೆ ಮೂಲಕ ಹಕ್ಕುಪತ್ರ ವಿತರಣೆ ಮತ್ತು ಭೂಮಿ ಗ್ಯಾರಂಟಿ ಒದಗಿಸುವ ಕಾರ್ಯ ಮುಂದುವರಿಯಲಿದ್ದು, ಕಾನೂನು ಹೋರಾಟ ನಡೆಸಲು ಶಕ್ತಿಯಿಲ್ಲದ ಬಡ ನಾಗರಿಕರಿಗೆ ಸರ್ಕಾರದ ವತಿಯಿಂದಲೇ ಉಚಿತವಾಗಿ ವಕೀಲರನ್ನು ಒದಗಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದರು.’

ಟೀಕೆಗಳು ಸಾಯುತ್ತವೆ; ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ

ಇನ್ನು ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿರುವ ಸಿಎಂ, ‘ಬಾಗಲಕೋಟೆ ಸೇರಿದಂತೆ ನೆರೆ-ಬರ ಪರಿಸ್ಥಿತಿಯನ್ನು ಹೆಲಿಕಾಪ್ಟರ್​ನಲ್ಲಿ ಸಮೀಕ್ಷೆ ನಡೆಸಿದ್ದಕ್ಕೆ ಟೀಕೆ ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಾಗಲೂ ಹೀಗೆಯೇ ಟೀಕಿಸಿದ್ದರು, ಆದರೆ ಇಂದು ಆ ಯೋಜನೆಗಳು ಯಶಸ್ವಿಯಾಗಿ ಜನರ ಮನೆ ತಲುಪಿವೆ. ಟೀಕೆಗಳು ಸಾಯುತ್ತವೆ, ನಾವು ಮಾಡಿದ ಜನಪರ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ’ ಎಂದರು.

ಸಿಎಂ ಡಿಕೆ ಶಿವಕುಮಾರ್​ ಟ್ವೀಟ್​


ಇದನ್ನೂ ಓದಿ: ಲೈವ್ ವಿಡಿಯೋ: ಕೂಡ್ಲಿಗಿಯಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ ಸಿಎಂ ಡಿಕೆ ಶಿವಕುಮಾರ್ ಚಾಲನೆ

ಬರಪೀಡಿತ ತಾಲೂಕುಗಳ ಪಟ್ಟಿ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್​​, ‘ಶೀಘ್ರದಲ್ಲೇ ಎರಡನೇ ಬರಪಟ್ಟಿಯಲ್ಲಿ 50ಕ್ಕೂ ಹೆಚ್ಚು ತಾಲೂಕುಗಳನ್ನು ಘೋಷಣೆ ಮಾಡುತ್ತೇವೆ. ಈಗಾಗಲೇ 102 ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದ್ದೇವೆ. ಎಲ್ಲರೂ ತಾಳ್ಮೆಯಿಂದ ಇರಿ ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

CM DK Shivakumar Launches Praja Seva Department; Addresses The Gathering At Kudligi In Vijayanagara

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:24 pm, Sat, 5 September 26

Loading...
Unable to load recommendations.
Follow Us