ಸತೀಶ್ ಜಾರಕಿಹೊಳಿ ವಿರುದ್ಧ ಫೇಸ್ಬುಕ್ನಲ್ಲಿ ಸುಳ್ಳು ಪೋಸ್ಟ್; ಇಬ್ಬರು ಅಡ್ಮಿನ್ಗಳ ವಿರುದ್ಧ ಎಫ್ಐಆರ್ ದಾಖಲು
ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ವಿರುದ್ಧ ಫೇಸ್ಬುಕ್ನಲ್ಲಿ ಸುಳ್ಳು ಪೋಸ್ಟ್ ಹಾಕಿದ ಇಬ್ಬರು ಅಡ್ಮಿನ್ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿದ್ದರಾಮಯ್ಯಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ, ಕುರುಬ-ವಾಲ್ಮೀಕಿ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ದುರುದ್ದೇಶದಿಂದ ಈ ಪೋಸ್ಟ್ ಹಾಕಲಾಗಿದೆ ಎಂದು ಸತೀಶ್ ಬೆಂಬಲಿಗರು ದೂರು ಬೆನ್ನ ಬೆಳಗಾವಿ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೆಳಗಾವಿ, ಮೇ 31: ರಾಜ್ಯ ರಾಜಕೀಯ ವಲಯದಲ್ಲಿ ಪ್ರಭಾವಿ ನಾಯಕರಾಗಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ವಿರುದ್ಧ ಫೇಸ್ಬುಕ್ನಲ್ಲಿ ಸುಳ್ಳು ವದಂತಿ ಹರಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎರಡು ಫೇಸ್ಬುಕ್ ಪೇಜ್ಗಳ ಅಡ್ಮಿನ್ಗಳ ವಿರುದ್ಧ ಬೆಳಗಾವಿ (belagavi) ಜಿಲ್ಲಾ ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮುಖ್ಯಾಂಶಗಳು
- ಸತೀಶ್ ಜಾರಕಿಹೊಳಿ ವಿರುದ್ಧ ಫೇಸ್ಬುಕ್ ಪೋಸ್ಟ್ ಹರಿಬಿಟ್ಟ ಕಿಡಿಗೇಡಿಗಳು
- ಬೆಳಗಾವಿ ಸೈಬರ್ ಕ್ರೈಂ ಪೊಲೀಸರಿಂದ FIR
- ಸತೀಶ್ ಜಾರಕಿಹೊಳಿ ಬೆಂಗಲಿಗರಿಂದ ದೂರು
ಸಿದ್ದರಾಮಯ್ಯಗೆ ದ್ರೋಹ ಬಗೆದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಹರಿಬಿಡಲಾಗಿತ್ತು. ಸುಳ್ಳು ಸುದ್ದಿ ವೈರಲ್ ಆಗುತ್ತಿದ್ದಂತೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಬೆಳಗಾವಿಯ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಇನ್ನು ಈ ಬಗ್ಗೆ ರಾಜಶೇಖರ್ ತಳವಾರ ಎಂಬುವವರು ದೂರು ನೀಡಿದ್ದಾರೆ. ‘ಕರುನಾಡು ಕುರುಬಗೌಡ್ರು’ ಮತ್ತು ‘ಬಂಡಾಯದ ಧ್ವನಿ’ ಎಂಬ ಎರಡು ನಕಲಿ ಫೇಸ್ಬುಕ್ ಖಾತೆಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದ್ರೋಹ ಮಾಡಿದ್ದಾರೆ. ಸಿದ್ದರಾಮಯ್ಯನವರ ಜೊತೆಯಲ್ಲೇ ಇದ್ದುಕೊಂಡು ಅವರ ವಿರುದ್ಧವೇ ಸುಮಾರು 32-37 ಶಾಸಕರ ಸಹಿ ಸಂಗ್ರಹಿಸಿ, ಆ ಪಟ್ಟಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಕೊಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಒಟ್ಟಿಗೆ ಕುಳಿತಿರುವ ಫೋಟೋವನ್ನು ಎಡಿಟ್ ಮಾಡಿ ಅಪಪ್ರಚಾರ ಮಾಡಲಾಗಿದೆ.
ಇದನ್ನೂ ಓದಿ: ದಯಾಮರಣ ಕೊಡಿಸಿ ಎಂದು ಸಚಿವರಿಗೆ ಕೈಮುಗಿದು ವ್ಯಾಪಾರಿಯ ಮನವಿ: ಕಾರಣ ಇಲ್ಲಿದೆ
ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಹಾಳುಮಾಡುವುದು ಇದರ ಒಂದು ಉದ್ದೇಶ. ಜೊತೆಗೆ, ಈ ಪೋಸ್ಟ್ಗಳ ಮೂಲಕ ಕುರುಬ ಮತ್ತು ವಾಲ್ಮೀಕಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸಿ, ಸಾರ್ವಜನಿಕ ಶಾಂತಿ ಕದಡಿ ಗಲಭೆ (ದೊಂಬಿ) ಸೃಷ್ಟಿಸುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ. ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಈ ಎರಡು ನಕಲಿ ಫೇಸ್ಬುಕ್ ಖಾತೆಗಳ ಹಿಂದಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜಶೇಖರ್ ತಳವಾರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:08 pm, Sun, 31 May 26




