Bengaluru Mysuru expressway: ಪ್ರವೇಶ, ನಿರ್ಗಮನ ಜಾಗಗಳಲ್ಲಿ ದಟ್ಟಣೆ; ಪ್ರಯಾಣದ ಸಮಯ ಹೆಚ್ಚಳ

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ ಪ್ರವೇಶ, ನಿರ್ಗಮನ ಜಾಗಗಳಲ್ಲಿ ದಟ್ಟಣೆ ಹೆಚ್ಚಾಗಿರುವುದರಿಂದ ಪ್ರಯಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಪ್ರಹಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ. ಕೆಂಗೇರಿಯಿಂದ ಬೆಂಗಳೂರು ಮಧ್ಯೆ ಸಂಚಾರ ದಟ್ಟಣೆ ಹೆಚ್ಚಿರುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

Bengaluru Mysuru expressway: ಪ್ರವೇಶ, ನಿರ್ಗಮನ ಜಾಗಗಳಲ್ಲಿ ದಟ್ಟಣೆ; ಪ್ರಯಾಣದ ಸಮಯ ಹೆಚ್ಚಳ
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ
Follow us
|

Updated on:Mar 13, 2023 | 8:07 PM

ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇಯನ್ನು (Bengaluru-Mysuru Expressway) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಲೋಕಾರ್ಪಣೆಗೊಳಿಸಿದ್ದಾರೆ. ಅದಕ್ಕೂ ಎರಡು ದಿನಗಳ ಮೊದಲು ಟ್ವೀಟ್​ ಮಾಡಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ದಶಪಥ ಹೆದ್ದಾರಿಯಿಂದ ಬೆಂಗಳೂರು ಮತ್ತು ಮೈಸೂರು ನಡುವಣ ಪ್ರಯಾಣದ ಅವಧಿ 75 ನಿಮಿಷಗಳಿಗೆ ಇಳಿಕೆಯಾಗಲಿದೆ ಎಂದು ಉಲ್ಲೇಖಿಸಿದ್ದರು. ಇದೀಗ, ಹೆದ್ದಾರಿ ಲೋಕಾರ್ಪಣೆಯಾದ ಮರುದಿನವೇ ಪ್ರವೇಶ, ನಿರ್ಗಮನ ಜಾಗಗಳಲ್ಲಿ ದಟ್ಟಣೆ ಹೆಚ್ಚಾಗಿರುವುದರಿಂದ ಪ್ರಯಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಪ್ರಹಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ. ಕೆಂಗೇರಿಯಿಂದ ಬೆಂಗಳೂರು ಮಧ್ಯೆ ಸಂಚಾರ ದಟ್ಟಣೆ ಹೆಚ್ಚಿರುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಮೈಸೂರಿನಿಂದ ಕೆಂಗೇರಿ ತಲುಪಲು 75 ನಿಮಿಷ ಸಾಕಾಗುತ್ತದೆ. ಆದರೆ ಕೆಂಗೇರಿಯಿಂದ ಬೆಂಗಳೂರಿನ ಹೃದಯಭಾಗ ತಲುಪಲು 1 ಗಂಟೆ ಬೇಕಾಗುತ್ತದೆ. ಸರಾಸರಿ ವೇಗ ಗಂಟೆಗೆ 50 ಕಿಲೋಮೀಟರ್​​ಗೂ ಕಡಿಮೆಯಾಗುತ್ತದೆ ಎಂದು ಚಂದ್ರ ಸ್ವಾಮಿ ಎಂಬವರು ಟ್ವೀಟ್ ಮಾಡಿದ್ದಾರೆ.

ಕೆಂಗೇರಿಯಿಂದ ನೈಸ್ ರಸ್ತೆ ಮೂಲಕ ಮನೆ ತಲುಪಲು 120 ನಿಮಿಷ ಬೇಕಾಯಿತು ಎಂದು ಶ್ರೀರಾಮ್ ಕೆ ಸುಂದರಂ ಎಂಬವರು ತಿಳಿಸಿದ್ದಾರೆ. ಮೈಸೂರಿನಿಂದ ಕೆಂಗೇರಿಗೆ 90 ನಿಮಿಷಗಳಲ್ಲಿ ತಲುಪಿದೆ. ಅಲ್ಲಿಂದ ಮನೆ ತಲುಪಲು 120 ನಿಮಿಷ ಬೇಕಾಯಿತು ಎಂದು ಅವರು ಹೇಳಿರುವುದಾಗಿ ‘ನ್ಯೂಸ್ 9’ ವರದಿ ಮಾಡಿದೆ.

ಬೆಂಗಳೂರಿನಿಂದ ಮೈಸೂರು ತಲುಪಲು 75 ನಿಮಿಷ ಸಾಕು, ಆದರೆ, ಕೆಂಗೇರಿ ದಾಟಿದ ನಂತರವಷ್ಟೇ ಇದು ಸಾಧ್ಯ ಎಂದು ಮತ್ತೊಬ್ಬರು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Bengaluru-Mysuru Expressway:ಕರ್ನಾಟಕದ ಮೊದಲ ಎಕ್ಸ್​ಪ್ರೆಸ್​ವೇ ಲೋಕಾರ್ಪಣೆಗೊಳಿಸಿದ ಮೋದಿ, ಇಲ್ಲಿವೆ ಫೋಟೋಗಳು

ಸಂಜೆ 5.30ರ (ಮಾರ್ಚ್ 13ರ ಸಂಜೆ) ವೇಳೆಗೆ ಗೂಗಲ್​ ಮ್ಯಾಪ್​​ನಲ್ಲಿ ಪರಿಶೀಲಿಸಿದಾಗ ಕೆಂಗೇರಿಯಿಂದ ಮೆಜೆಸ್ಟಿಕ್​ ತಲುಪಲು 39 ನಿಮಿಷ ಬೇಕೆಂದು ತೋರಿಸಿದೆ ಎಂದು ವರದಿ ಉಲ್ಲೇಖಿಸಿದೆ. ಈ ಎರಡು ಸ್ಥಳಗಳ ನಡುವಣ ಅಂತರ ಕೇವಲ 20 ಕಿಲೋಮೀಟರ್ ಇದೆ. ಇದೇ ಹೊತ್ತಲ್ಲಿ ಮೆಜೆಸ್ಟಿಕ್​ನಿಂದ ಕೆಂಗೇರಿ ತಲುಪಲು ಸುಮಾರು 50 ನಿಮಿಷ ಬೇಕಾಗಬಹುದು ಎಂದು ಗೂಗಲ್ ಮ್ಯಾಪ್ ಅಂದಾಜಿಸಿತ್ತು.

ಈ ಸಮಸ್ಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಪ್ಪಿಕೊಂಡಿದ್ದು, ಪರಿಹಾರ ಕಂಡುಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ನಗರ ಪ್ರದೇಶದಲ್ಲಿ ದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಅದಕ್ಕೆ ಪರಿಹಾರ ಒದಗಿಸಲು ಸಿದ್ಧರಿದ್ದೇವೆ. ಆದರೆ, ಈ ಪ್ರದೇಶದ ರಸ್ತೆಯುದ್ದಕ್ಕೂ ನಿರ್ಮಾಣಕ್ಕೆ ಅವಕಾಶವಿಲ್ಲದ ಖಾಲಿ ಜಾಗ ನಮಗೆ ದೊರೆತರೆ ಮಾತ್ರ ಸಮಸ್ಯೆಗೆ ಪರಿಹಾರ ಒದಗಿಸುವುದು ಸಾಧ್ಯವಾಗಲಿದೆ. ಸದ್ಯ ದಟ್ಟಣೆ ಉಂಟಾಗುತ್ತಿರುವ ಪ್ರದೇಶ ನಗರದ ವ್ಯಾಪ್ತಿಯಲ್ಲಿರುವುದರಿಂದ ತಕ್ಷಣಕ್ಕೆ ಪರಿಹಾರ ಒದಗಿಸುವುದು ಕಷ್ಟಸಾಧ್ಯ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ನಾವು ಬಿಬಿಎಂಪಿ, ಬಿಡಿಎ, ಪಿಡಬ್ಲ್ಯುಡಿ ಹಾಗೂ ಎನ್​ಐಸಿಇ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ನಮ್ಮಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಸ್ಯೆಗೆ ಸರಳ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:04 pm, Mon, 13 March 23