ರಂಗೋಲಿ ಹಾಕ್ತಿದ್ದ ಮಹಿಳೆಯರ ಸರ ಎಗರಿಸಿದ ಖದೀಮರು: ಕದ್ದ ಬೈಕ್ನಲ್ಲೇ ಬಂದು ಕೃತ್ಯ
ಕದ್ದ ಬೈಕ್ನಲ್ಲಿ ಮಹಿಳೆಯ ಸರಗಳ್ಳತನ ಮಾಡಿ ಖದೀಮರು ಪರಾರಿ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ತಾಂಬಿಕ ಬಡಾವಣೆಯಲ್ಲಿ ನಡೆದಿದೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಖದೀಮರಿಗಾಗಿ ಬಲೆ ಬೀಸಿದ್ದಾರೆ. ಘಟನೆಯಿಂದ ಜನರು ಆತಂಕಗೊಂಡಿದ್ದಾರೆ.

ದೇವನಹಳ್ಳಿ, ಫೆಬ್ರವರಿ 15: ಇಂದು ಶಿವರಾತ್ರಿ ಹಬ್ಬ. ಹೀಗಾಗಿ ಮಹಿಳೆಯರು ಮನೆ ಮುಂದೆ ನೀರು ಹಾಕಿ ರಂಗೋಲಿ ಹಾಕುವುದರಲ್ಲಿ ನಿರತರಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಳ್ಳಲು ಬಂದ ಇಬ್ಬರು ಖದೀಮರು ಖತರ್ನಾಕ್ ಪ್ಲಾನ್ ಮಾಡಿ ಖದ್ದ ಬೈಕ್ನಲ್ಲಿ ಬಂದು ಚಿನ್ನದ ಸರ ಎಗರಿಸಿ ಎಸ್ಕೇಪ್ (chain snatching) ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ತಾಂಬಿಕ ಬಡಾವಣೆಯಲ್ಲಿ ಘಟನೆ ನಡೆದಿದೆ.
ಸರಗಳ್ಳತನ ಮಾಡಿ ಪರಾರಿ
ಸಮಯ ರಾತ್ರಿ 09:30. ಮನೆಯಲ್ಲಿ ಕುಟುಂಬಸ್ಥರು ಟಿವಿ ಮುಂದೆ ಕುಳಿತಿರುವಾಗಲೇ ಏರಿಯಾಗೆ ಬೈಕ್ನಲ್ಲಿ ಇಬ್ಬರು ಎಂಟ್ರಿಕೊಟ್ಟಿದ್ದಾರೆ. ಫುಲ್ ಹೆಲ್ಮೆಟ್ ಹಾಕಿಕೊಂಡು ಬಂದವರು ಏರಿಯಾದಲ್ಲಿ ಒಂದೆರೆಡು ರೌಂಡ್ಸ್ ಹಾಕಿದ್ದಾರೆ. ಬೈಕಿನಿಂದ ಇಳಿದು ಹೋದ ಓರ್ವ ಸ್ವಲ್ಪ ಸಮಯದಲ್ಲೇ ವಾಪಸ್ ಬಂದು ಎಸ್ಕೇಪ್ ಆಗಿದ್ದಾರೆ. ಈ ರೀತಿ ರಾತ್ರಿ ಬಂದ ಈ ಇಬ್ಬರು ಮಾಡಿದ್ದೇನು ಅಂದರೆ ಸರಗಳ್ಳತನ.
ಇದನ್ನೂ ಓದಿ: ಕಾಫಿ ಬಿಲ್ ಕೇಳಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮೂವರು ಕಾನ್ಸ್ಟೇಬಲ್ಸ್
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ತಾಂಬಿಕ ಬಡಾವಣೆಯ ಗಿರಿಜಮ್ಮ ಎಂಬುವವರು ಇಂದು ಶಿವರಾತ್ರಿ ಹಬ್ಬ ಅಂತ ನಿನ್ನೆ ರಾತ್ರಿ ಮನೆ ಮುಂದೆ ನೀರು ಹಾಕಿ ರಂಗೋಲಿ ಹಾಕ್ತಿದ್ದರು. ಈ ವೇಳೆ ಒಂಟಿಯಾಗಿದ್ದ ಮಹಿಳೆಯನ್ನ ಕಂಡ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ಕಿರಾತಕರು ಮಹಿಳೆ ಬಳಿ ರಸ್ತೆ ಮುಂದಕ್ಕೆ ದಾರಿ ಇದಿಯಾ ಅಂತ ಕೇಳಿದ್ದು ಮಹಿಳೆ ಇಲ್ಲ ಅಂತ ಹೇಳಿ ಮನೆ ಒಳಗಡೆ ಹೋಗಲು ಯತ್ನಿಸಿದ್ದಾರೆ.
ಈ ವೇಳೆ ಹಿಂದಿನಿಂದ ಮಹಿಳೆಯ ಕುತ್ತಿಗೆಗೆ ಕೈಹಾಕಿದ ಸರಗಳ್ಳರು ಮಹಿಳೆಯರ ಕುತ್ತಿಗೆಯಲ್ಲಿದ್ದ 40 ರಿಂದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನ ಕಿತ್ತುಕೊಂಡಿದ್ದಾರೆ. ಮಹಿಳೆ ಸಹಾಯಕ್ಕಾಗಿ ಕಿರುಚಾಡುತ್ತಿದ್ದಂತೆ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಬೈಕ್ ಕಾಣೆಯಾಗಿದೆ ಅಂತ ದೂರು ನೀಡಿದ ಯುವಕ
ಸರಗಳ್ಳತನ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸಹ ಅಲರ್ಟ್ ಆಗಿದ್ದು, ಆರೋಪಿಗಳ ಜಾಡು ಹಿಡಿದು ಹೊರಟಾಗ ಇದೇ ಕಳ್ಳರು ದೊಡ್ಡಬಳ್ಳಾಫುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲೂ ಲಕ್ಷ್ಮಮ್ಮ ಎಂಬುವವರ ಕುತ್ತಿಗೆಯಲ್ಲಿದ್ದ 60 ಗ್ರಾಂ ಚಿನ್ನದ ಸರ ಕದ್ದಿರುವುದು ಗೊತ್ತಾಗಿದೆ. ಹೀಗಾಗಿ ಸರಗಳ್ಳರ ಪತ್ತೆ ಹಚ್ಚಲು ಪೊಲೀಸರು ಮುಂದಾಗ್ತಿದ್ದಂತೆ ನನ್ನ ಪಲ್ಸರ್ ಬೈಕ್ ಕಾಣೆಯಾಗಿದೆ ಅಂತ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ದೊಡ್ಡಬಳ್ಳಾಪುರ ಕೈಗಾರಕಾ ಪ್ರದೇಶದಲ್ಲಿ ನಿಲ್ಲಿಸಿ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ವೇಳೆ ಬೈಕ್ ಕದ್ದಿರುವುದಾಗಿ ಯುವಕ ಠಾಣೆಗೆ ಆಗಮಿಸಿದ್ದು, ಸರಗಳ್ಳರು ಯುವಕನ ಬೈಕ್ ಕದ್ದು ಎರಡು ಕಡೆ ಸರಗಳ್ಳತನ ಮಾಡಿರುವುದು ಗೊತ್ತಾಗಿದೆ. ಇನ್ನು ಹಬ್ಬದ ಸಂಭ್ರಮದಲ್ಲಿದ್ದ ಏರಿಯಾದ ಜನರಿಗೆ ಖದೀಮರು ಎರೆಡೆರಡು ಕಡೆ ಸರಗಳ್ಳತನ ಮಾಡಿರುವುದು ಆತಂಕ ಮೂಡಿಸಿದ್ದು, ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಟೀ, ಸಿಗರೇಟ್ ನೆಪದಲ್ಲಿ ಅಂಗಡಿಗೆ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದು ಎಸ್ಕೇಪ್!
ಸರಗಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಖದೀಮರು ದೊಡ್ಡಬಳ್ಳಾಪುರದಲ್ಲೇ ಬೈಕ್ ಕದ್ದು ಅಲ್ಲಿಯೇ ಸರಗಳ್ಳತನ ಮಾಡಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಮತ್ತು ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.