ಪತ್ನಿಯ ಅಕ್ರಮ ಸಂಬಂಧ: “ಪವಿತ್ರಾ ನನಗೇ ಬೇಕು” ಎಂಬ ಹಠಕ್ಕೆ ಕಿರಾತಕ ಪ್ರಿಯತಮ ಮಾಡಿದ್ದೇನು ನೋಡಿ?
ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ದಬ್ಬಗುಂಟನಹಳ್ಳಿಯಲ್ಲಿ ಅನೈತಿಕ ಸಂಬಂಧವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಿಯತಮೆ ಪವಿತ್ರಾಳ ಪತಿಯಾದ ಶಿವಶಂಕರ್ನನ್ನು ಹಂತಕ ಅನಿಲ್ ಕುಮಾರ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪ್ರಿಯಕರನೊಂದಿಗೆ ಸಂಬಂಧ ಮುರಿದುಕೊಳ್ಳಲು ಪವಿತ್ರಾ ಮುಂದಾದಾಗ, ಅನಿಲ್ ಕುಮಾರ್ ಶಿವಶಂಕರ್ನನ್ನು ದಾರಿ ತಪ್ಪೆಂದು ಭಾವಿಸಿ ಕೊಲೆಗೆ ಸಂಚು ರೂಪಿಸಿದ್ದ. ಪೊಲೀಸರು ಸದ್ಯ ಅನಿಲ್ ಕುಮಾರ್ನನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಹೊಸಕೋಟೆ, ಏ.18: ಅನೈತಿಕ ಸಂಬಂಧದ ಹಪಾಹಪಿಗೆ ಬಿದ್ದ ಪ್ರಿಯಕರನೊಬ್ಬ, ತನ್ನ ಪ್ರಿಯತಮೆಯ ಗಂಡನನ್ನೇ ದಾರಿ ತಪ್ಪಿಸಲು ಹೊಂಚು ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆ ತಾಲೂಕಿನ ದಬ್ಬಗುಂಟನಹಳ್ಳಿಯಲ್ಲಿ ನಡೆದಿದೆ. ಮದುವೆಯಾದ ಮಹಿಳೆಯ ಮೇಲಿನ ವ್ಯಾಮೋಹಕ್ಕೆ ಬಿದ್ದ ಕಿರಾತಕ, ಈಗ ಕಂಬಿ ಎಣಿಸುತ್ತಿದ್ದಾನೆ.
ದಬ್ಬಗುಂಟನಹಳ್ಳಿ ಗ್ರಾಮದ ಶಿವಶಂಕರ್ ಎಂಬ ಯುವಕ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಿಕೊಂಡು ತಾಯಿ, ಪತ್ನಿ ಪವಿತ್ರಾ ಮತ್ತು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ. ಕಳೆದ ಏಪ್ರಿಲ್ 13ರ ಸೋಮವಾರ ರಾತ್ರಿ, ಕೆಲಸ ಮುಗಿಸಿ ಬಂದಿದ್ದ ಶಿವಶಂಕರ್ ಸೆಕೆಯಿಂದಾಗಿ ಗಾಳಿ ಸೇವಿಸಲು ಮತ್ತು ಫೋನ್ನಲ್ಲಿ ಮಾತನಾಡಲು ಮನೆಯಿಂದ ಹೊರಗೆ ಬಂದಿದ್ದ. ಇದನ್ನೇ ಕಾಯುತ್ತಿದ್ದ ಹಂತಕ ಅನಿಲ್ ಕುಮಾರ್, ಕತ್ತಲಲ್ಲಿ ಶಿವಶಂಕರ್ ಮೇಲೆ ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದ. ಮುಂಜಾನೆ ಶೌಚಾಲಯಕ್ಕೆ ಬಂದ ತಾಯಿ ಗೌರಮ್ಮನಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನ ಶವ ಕಂಡು ಎದೆ ಒಡೆದಂತಾಗಿದೆ.
ಕೊಲೆಯಾದ ಶಿವಶಂಕರ್ ಯಾರ ತಂಟೆಗೂ ಹೋಗದ ವ್ಯಕ್ತಿಯಾಗಿದ್ದ ಕಾರಣ ಪೊಲೀಸರಿಗೆ ಆರಂಭದಲ್ಲಿ ಕೊಲೆಯ ಕಾರಣ ನಿಗೂಢವಾಗಿತ್ತು. ಆದರೆ ತನಿಖೆ ತೀವ್ರಗೊಳಿಸಿದಾಗ ಶಿವಶಂಕರ್ ಪತ್ನಿ ಪವಿತ್ರಾ ಮತ್ತು ಆರೋಪಿ ಅನಿಲ್ ಕುಮಾರ್ ನಡುವಿನ ಅನೈತಿಕ ಸಂಬಂಧ ಬಯಲಿಗೆ ಬಂದಿದೆ. ಕಳೆದ 4 ವರ್ಷಗಳಿಂದ ಇವರಿಬ್ಬರ ನಡುವೆ ಸ್ನೇಹವಿತ್ತು. ಆದರೆ ಇತ್ತೀಚೆಗೆ ಕುಟುಂಬದವರ ಬುದ್ಧಿವಾದದಿಂದ ಪವಿತ್ರಾ ಈ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದರು. “ನಿನ್ನ ಪಾಡಿಗೆ ನೀನಿರು, ಮದುವೆಯಾಗು” ಎಂದು ಅನಿಲ್ನಿಗೆ ತಿಳಿಸಿದ್ದರು.
ಪವಿತ್ರಾಳನ್ನು ಹೇಗಾದರೂ ಮಾಡಿ ತನ್ನವಳನ್ನಾಗಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದ ಅನಿಲ್, ಆಕೆಯ ಗಂಡ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ. ಶಿವಶಂಕರ್ನನ್ನು ಮುಗಿಸಿದರೆ ಪವಿತ್ರಾ ತನ್ನ ಬಳಿ ಬರುತ್ತಾಳೆ ಎಂದು ಸಂಚು ರೂಪಿಸಿ, ರಾತ್ರಿ ವೇಳೆಯಲ್ಲಿ ಹೊಂಚು ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಯಾವುದೂ ಅರಿಯದವನಂತೆ ತನ್ನ ಊರಿನಲ್ಲಿ ಓಡಾಡಿಕೊಂಡಿದ್ದ ಅನಿಲ್ನನ್ನು ಪೊಲೀಸರು ಎಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ: ಗೊಂಬೆಯಂತಿದ್ದ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಜತೆಗೆ ಸಂಬಂಧ: ಪೆನ್ ಡ್ರೈವ್ನಲ್ಲಿತ್ತು ಗಂಡನ ರಾಸಲೀಲೆ, ಕಿರುಕುಳದ ಸಾಕ್ಷಿ!
ಹೊಸಕೋಟೆ ಪೊಲೀಸರು ಮೃತ ಶಿವಶಂಕರ್ ಪತ್ನಿ ಪವಿತ್ರಾಳನ್ನೂ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಕೊಲೆ ಸಂಚಿನಲ್ಲಿ ಆಕೆಯ ಪಾತ್ರವಿಲ್ಲದಿರುವುದು ಕಾಲ್ ಲಿಸ್ಟ್ ಮತ್ತು ಸಂದೇಶಗಳ ಪರಿಶೀಲನೆಯಿಂದ ದೃಢಪಟ್ಟಿದೆ. ಸದ್ಯಕ್ಕೆ ಪ್ರಮುಖ ಆರೋಪಿ ಅನಿಲ್ ಕುಮಾರ್ನನ್ನು ಜೈಲಿಗಟ್ಟಲಾಗಿದ್ದು, ಹೊಸಕೋಟೆ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



