AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ಸ್ನಾಪ್‌ಚಾಟಲ್ಲಿ ಪ್ರೀತಿಸಿ ಮದುವೆ, ಎರಡೇ ತಿಂಗಳಿಗೆ ಬ್ರೇಕ್‌ಅಪ್! ಗಂಡ ಬೇಕೆಂದು ಠಾಣೆ ಮೆಟ್ಟಿಲೇರಿದ ಯುವತಿ

ಸ್ನಾಪ್‌ಚಾಟ್‌ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ತಬ್ಬಲಿ ನರ್ಸಿಂಗ್ ಯುವತಿಯನ್ನು, ಮನೆಯಲ್ಲಿ ಪೋಷಕರಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿ ಮದುವೆಯಾದ ಎರಡೇ ತಿಂಗಳಿಗೆ ಪತಿ ಕೈಬಿಟ್ಟ ಘಟನೆ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಇದೀಗ ಸಂತ್ರಸ್ತೆ, ಪತಿ ಬೇಕೆಂದು ಮಾದನಾಯಕನಹಳ್ಳಿ ಠಾಣೆ ಮೆಟ್ಟಿಲೇರಿದ್ದಾಳೆ.

ನೆಲಮಂಗಲ: ಸ್ನಾಪ್‌ಚಾಟಲ್ಲಿ ಪ್ರೀತಿಸಿ ಮದುವೆ, ಎರಡೇ ತಿಂಗಳಿಗೆ ಬ್ರೇಕ್‌ಅಪ್! ಗಂಡ ಬೇಕೆಂದು ಠಾಣೆ ಮೆಟ್ಟಿಲೇರಿದ ಯುವತಿ
ಸಾಂದರ್ಭಿಕ ಚಿತ್ರImage Credit source: TV9 Network
ಗಣಪತಿ ಶರ್ಮಾ
|

Updated on: May 27, 2026 | 1:54 PM

Share

ನೆಲಮಂಗಲ, ಮೇ 27: ಸಾಮಾಜಿಕ ಜಾಲತಾಣಗಳ ಪರಿಚಯ ಮತ್ತು ಪ್ರೀತಿ ಎಷ್ಟೊಂದು ಬೇಗ ಹಳಿತಪ್ಪಬಹುದು ಎಂಬುದಕ್ಕೆ ನೆಲಮಂಗಲ (Nelamangala) ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸ್ನಾಪ್‌ಚಾಟ್ (Snapchat) ಆ್ಯಪ್‌ನಲ್ಲಿ ಪರಿಚಯವಾಗಿ, ಒಂದೂವರೆ ವರ್ಷಗಳ ಕಾಲ ಪ್ರೀತಿಸಿ, ಕೇವಲ ಎರಡು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು ಈಗ ಎರಡೇ ತಿಂಗಳಲ್ಲಿ ವಿಚ್ಛೇದನದ ಹಂತಕ್ಕೆ ಬಂದು ನಿಂತಿದೆ. ಮದುವೆಯಾದ ಎರಡೇ ತಿಂಗಳಿಗೆ ಪತಿರಾಯ ‘ನೀನು ನನಗೆ ಬೇಡ’ ಎಂದು ಹೆಂಡತಿಯನ್ನು ಕೈಬಿಟ್ಟಿದ್ದು, ಹತಾಶಳಾದ ನೊಂದ ಯುವತಿ ತನಗೆ ನ್ಯಾಯ ಬೇಕು, ಗಂಡನೇ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ.

ಮುಖ್ಯಾಂಶಗಳು

  • ಸ್ನಾಪ್‌ಚಾಟ್‌ನಲ್ಲಿ ಶುರುವಾದ ಪರಿಚಯ ಪ್ರೀತಿಗೆ ತಿರುಗಿ, ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಚೇತನ್ ಮತ್ತು ನರ್ಸಿಂಗ್ ಯುವತಿ.
  • ತಂದೆ-ತಾಯಿ ಇಲ್ಲದ ತಬ್ಬಲಿ ಯುವತಿಯನ್ನು ಪ್ರೀತಿಸಿ ವರಿಸಿದ್ದ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿ ಚೇತನ್.
  • ‘ಮನೆಯಲ್ಲಿ ತಂದೆ-ತಾಯಿಗೆ ಗೌರವ ನೀಡುತ್ತಿಲ್ಲ’ ಎಂಬ ಸಣ್ಣ ಕಾರಣಕ್ಕೆ ಜಗಳವಾಗಿ ಹೆಂಡತಿಯನ್ನು ತೊರೆದ ಪತಿ; ಮಾದನಾಯಕನಹಳ್ಳಿ ಠಾಣೆಗೆ ದೂರು.

ತಬ್ಬಲಿ ಯುವತಿಗೆ ಕೈಕೊಟ್ಟ ಪತಿರಾಯ

ನೊಂದ ಸಂತ್ರಸ್ತ ಯುವತಿ ನರ್ಸಿಂಗ್ ಮುಗಿಸಿಕೊಂಡಿದ್ದು, ಆಕೆಗೆ ತಂದೆ-ತಾಯಿ ಯಾರೂ ಇಲ್ಲದ ತಬ್ಬಲಿಯಾಗಿದ್ದಳು. ಸುಮಾರು ಒಂದೂವರೆ ವರ್ಷದ ಹಿಂದೆ ಈಕೆಗೆ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿಯ ನಿವಾಸಿಯಾದ ಚೇತನ್ ಎಂಬಾತನ ಪರಿಚಯ ಸ್ನಾಪ್‌ಚಾಟ್‌ನಲ್ಲಿ ಆಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಮತ್ತು ಯುವತಿಯ ಪರಿಚಯ ದಿನ ಕಳೆದಂತೆ ಗಾಢ ಪ್ರೀತಿಗೆ ತಿರುಗಿತ್ತು. ಆಕೆಯ ಅನಾಥ ಸ್ಥಿತಿಯನ್ನು ಅರಿತೂ ಚೇತನ್ ಪ್ರೀತಿಯಿಂದ ಎರಡು ತಿಂಗಳ ಹಿಂದೆ ಸಪ್ತಪದಿ ತುಳಿದು ತನ್ನ ಮನೆಗೆ ಕರೆತಂದಿದ್ದ.

ಆದರೆ, ಇವರ ಸಂಸಾರ ಸುಖವಾಗಿ ಸಾಗಿದ್ದು ಕೇವಲ ಕೆಲವೇ ದಿನಗಳು ಮಾತ್ರ. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಕೌಟುಂಬಿಕ ಕಲಹಗಳು ಆರಂಭವಾಗಿದ್ದವು. ‘ನನ್ನ ತಂದೆ-ತಾಯಿಗೆ ನೀನು ಮನೆಯಲ್ಲಿ ಸರಿಯಾಗಿ ಗೌರವ ಕೊಡುತ್ತಿಲ್ಲ’ ಎಂದು ಚೇತನ್ ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದ ಎನ್ನಲಾಗಿದೆ. ದಿನಕಳೆದಂತೆ ಈ ಕೌಟುಂಬಿಕ ಜಗಳ ತಾರಕಕ್ಕೇರಿದ್ದು, ಚೇತನ್ ತನ್ನ ಹೆಂಡತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ‘ನೀನು ನನಗೆ ಬೇಡವೇ ಬೇಡ’ ಎಂದು ದೂರ ತಳ್ಳಿದ್ದಾನೆ.

ಇದನ್ನೂ ಓದಿ: ದಿನಕ್ಕೆ 400 ರೂ. ಆಸೆ ತೋರಿಸಿ 13 ಸಾವಿರ ಜನರನ್ನು ಲೂಟಿ ಮಾಡಿದ ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್

ತಬ್ಬಲಿಯಾಗಿದ್ದ ತನಗೆ ಈಗ ಗಂಡನೂ ಇಲ್ಲದೆ ಆಸರೆಯೇ ಇಲ್ಲದಂತಾಗಿದೆ ಎಂದು ಕಣ್ಣೀರಿಟ್ಟಿರುವ ಯುವತಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ಕರೆಸಿ ಕೌನ್ಸೆಲಿಂಗ್ ನಡೆಸಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More