Oxygen Shortage| ಚಂದಾಪುರದಲ್ಲಿ ವೈದ್ಯರಿಂದಲೇ SoS: ನಾಲ್ವರ ಜೀವ ಉಳಿಸಲು ಇನ್ನರ್ಧ ಗಂಟೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿ

ಈ ದುರ್ಭರ ಪರಿಸ್ಥಿತಿ ಬಗ್ಗೆ ಟಿವಿ9 ಡಿಜಿಟಲ್​ ತಂಡವು ಅಪಾರ ಕಾಳಜಿಯೊಂದಿಗೆ ವೈದ್ಯ ನಾರಾಯಣ ಸ್ವಾಮಿ ಅವರನ್ನು ಸಂಪರ್ಕಿಸಲು ಯತ್ನಿಸಿತು. ಕೇಲವೇ ಕ್ಷಣಗಳ ಕಾಲ ಮಾತನಾಡಿದ ಡಾ. ನಾರಾಯಣ ಸ್ವಾಮಿ ಪರಿಸ್ಥಿತಿ ಗಂಭೀರವಾಗಿದೆ. ಈ ಮಧ್ಯೆ ಆಸ್ಪತ್ರೆಯು ಆರೋಗ್ಯ ಸಚಿವ ಸುಧಾಕರ್​ ಅವರನ್ನು ಸಂಪರ್ಕಿಸಿದೆ ಎಂದು ತಿಳಿಸಿದ್ದಾರೆ.

  • TV9 Web Team
  • Published On - 12:53 PM, 20 Apr 2021
Oxygen Shortage| ಚಂದಾಪುರದಲ್ಲಿ ವೈದ್ಯರಿಂದಲೇ SoS: ನಾಲ್ವರ ಜೀವ ಉಳಿಸಲು ಇನ್ನರ್ಧ ಗಂಟೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿ
Oxygen Shortage.. ಚಂದಾಪುರದಲ್ಲಿ ವೈದ್ಯರಿಂದಲೇ SoS

ಬೆಂಗಳೂರು:ನಗರದ ಹೊರವಲಯದಲ್ಲಿರುವ ಆಸ್ಪತ್ರೆಯಿಂದ ಅತಂಕಕಾರಿ ಸುದ್ದಿಯೊಂದು ಕೇಳಿಬಂದಿದೆ. ಇದುವರೆಗೂ ಕೊರೊನಾ ಸೋಂಕಿತರು ಅತಂತ್ರ ಸ್ಥಿತಿಯಲ್ಲಿ ಸಿಲುಕಿ ತಮಗೆ ಐಸಿಯು ವ್ಯವಸ್ಥೆ ಮಾಡಿ, ಆಕ್ಸಿಜನ್ ವ್ಯವಸ್ಥೆ ಮಾಡಿ ಎಂದು ಬೊಬ್ಬಿಡುತ್ತಿದ್ದರು. ಆದರೆ ಈಗ ಸ್ವತಃ ವೈದ್ಯರೇ ರೋಗಿಗಳ ಪ್ರಾಣ ಉಳಿಸಲು SoS ಸಂದೇಶ ರವಾನಿಸಿದ್ದಾರೆ. ನಾಲ್ವರ ಜೀವ ಉಳಿಸಲು ಆಕ್ಸಿಜನ್ ವ್ಯವಸ್ಥೆ ಮಾಡಿ ಎಂದು ಚಂದಾಪುರದ ಆತ್ರೇಯ ಆಸ್ಪತ್ರೆಯ ವೈದ್ಯರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ನಮ್ಮ ಆಸ್ಪತ್ರೆಯಲ್ಲಿರುವ ಐವರ ಪೈಕಿ ಓರ್ವ ಮೃತಪಟ್ಟಿದ್ದಾನೆ. ನಾಲ್ವರ ಸ್ಥಿತಿ ಬಹಳ ಗಂಭೀರವಾಗಿದೆ. ಅದಕ್ಕಿಂತ ಗಂಭೀರ ಪರಿಸ್ಥಿತಿ ಎಂದ್ರೆ ನಮ್ಮಲ್ಲಿ ಇರುವ ಆಕ್ಸಿಜನ್ ಇನ್ನು ಅರ್ಧ ಗಂಟೆ ಅಷ್ಟೇ ಬರುತ್ತದೆ. ಅದಾದ ಮೇಲೆ ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಅವರು ಸಾಯುತ್ತಾರೆ ಅಷ್ಟೇ, ಪ್ಲೀಸ್ ಆಕ್ಸಿಜನ್ ವ್ಯವಸ್ಥೆ ಮಾಡಿ ಎಂದು ಬೆಂಗಳೂರಿನ ಚಂದಾಪುರದಲ್ಲಿರುವ ಆತ್ರೇಯ ಆಸ್ಪತ್ರೆಯ ವೈದ್ಯ ನಾರಾಯಣ ಸ್ವಾಮಿ ತಮ್ಮ ರೋಗಿಗಳ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ತುರ್ತು ಮನವಿ ಮಡಿಕೊಂಡಿದ್ದಾರೆ.

ಬೇರೆ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕರೆ ನಾವೇ ಕಳುಹಿಸುತ್ತೇವೆ. ಇಲ್ಲದಿದ್ದರೆ ನಾವು ಏನೂ ಮಾಡಲು ಆಗಲ್ಲವೆಂದೂ ಡಾ. ನಾರಾಯಣ ಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

ಟಿವಿ9 ಡಿಜಿಟಲ್​ಗೆ ವೈದ್ಯ ನಾರಾಯಣ ಸ್ವಾಮಿ ಅವರು ಹೇಳಿದ್ದೇನು?:
ಈ ದುರ್ಭರ ಪರಿಸ್ಥಿತಿ ಬಗ್ಗೆ ಟಿವಿ9 ಡಿಜಿಟಲ್​ ತಂಡವು ಅಪಾರ ಕಾಳಜಿಯೊಂದಿಗೆ ವೈದ್ಯ ನಾರಾಯಣ ಸ್ವಾಮಿ ಅವರನ್ನು ಸಂಪರ್ಕಿಸಲು ಯತ್ನಿಸಿತು. ಕೇಲವೇ ಕ್ಷಣಗಳ ಕಾಲ ಮಾತನಾಡಿದ ಡಾ. ನಾರಾಯಣ ಸ್ವಾಮಿ ಪರಿಸ್ಥಿತಿ ಗಂಭೀರವಾಗಿದೆ. ಪೇಷೆಂಟ್ಸ್​ ಬಳಿಯಲ್ಲೇ ನಿಂತಿದ್ದೇನೆ. ಈ ಮಧ್ಯೆ ಆಸ್ಪತ್ರೆಯು ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ಅವರನ್ನು ಸಂಪರ್ಕಿಸಿದೆ. ಶೀಘ್ರವೇ ಏನಾದರೂ ವ್ಯವಸ್ಥೆ ಮಾಡುವುದಾಗಿ ಸಚಿವ ಸುಧಾಕರ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ವಿಚಾರವಾಗಿ ಆರೋಗ್ಯ ಇಲಾಖೆ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ. ಆತ್ರೇಯ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿದ ಡಾ.ಸುಧಾಕರ್ ಅವರು ರೋಗಿಗಳಿಗೆ ತೊಂದರೆಯಾಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇಂದು, ನಾಳೆ ಅಗತ್ಯವಿರುವ ಆಕ್ಸಿಜನ್ ಪೂರೈಕೆಗೆ ಸೂಚನೆ ನೀಡಿರುವುದಾಗಿ
ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಇದೇ ವೇಳೆ ತಿಳಿಸಿದ್ದಾರೆ.

ಇನ್ನು, ಆತ್ರೇಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ಅಳಲು ವಿಚಾರವಾಗಿ ಚಂದಾಪುರದ ಆತ್ರೇಯ ಆಸ್ಪತ್ರೆಗೆ ಬೆಂಗಳೂರು ನಗರ ಜಿಲ್ಲಾ ವೈದ್ಯಾಧಿಕಾರಿ (ಡಿಹೆಚ್‌ಒ) ಶ್ರೀನಿವಾಸ್ ಭೇಟಿ ನೀಡಿದ್ದಾರೆ. ಆಕ್ಸಿಜನ್ ಕೊರತೆ ಮತ್ತು ಸೋಂಕಿತರ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

(A doctor from Atreya hospital in Chandapura alarm sos message pleads for immediate oxygen supply to save 4 patients)