ಜ್ಞಾನಭಾರತಿ ವಿವಿಯಲ್ಲಿ ಎಷ್ಟು ಮರ ಕಡಿಯಲಾಗುತ್ತಿದೆ? ಏಕೆ ಕೊಡಲಿ ಏಟು? ಕುಲಪತಿ ಸ್ಪಷ್ಟನೆ ಇಲ್ಲಿದೆ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ 100 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಟ್ಟಡ ನಿರ್ಮಾಣಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ 282 ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿದೆ. ವಿಶ್ವವಿದ್ಯಾಲಯದ ಕುಲಪತಿಗಳು ಹೊಸ ಕೋರ್ಸ್ಗಳಿಗೆ ಹೆಚ್ಚುವರಿ ಸ್ಥಳಾವಕಾಶದ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಮತ್ತು ಪರಿಸರ ಸಂರಕ್ಷಣೆ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರು, ಜೂನ್ 27: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ (Bangalore University Jnanabharathi) ಕ್ಯಾಂಪಸ್ನಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಶೈಕ್ಷಣಿಕ ಕಟ್ಟಡ ನಿರ್ಮಾಣಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ಜ್ಞಾನಭಾರತಿ ಆವರಣದಲ್ಲಿ ಶೈಕ್ಷಣಿಕ ಕಟ್ಟಡ ನಿರ್ಮಾಣ ಮಾಡಲು 400ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಬೆಂಗಳೂರು ವಿವಿ ಬಿಬಿಎಂಪಿಗೆ ಮನವಿ ಮಾಡಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ನಡೆಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕುಲಪತಿ ಜಯಕರ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಉಚ್ಛ ಶಿಕ್ಷಣ ಅಭಿಯಾನ (ಪಿಎಂ ಉಷಾ) ಯೋಜನೆಯಡಿ 100 ಕೋಟಿ ರೂಪಾಯಿ ಅನುದಾನ ಸಿಕ್ಕಿದೆ. ನಮ್ಮ ಕ್ಯಾಂಪಸ್ನಲ್ಲಿ ಹಲವು ವಿಭಾಗಗಳು ಒಂದೇ ಕಟ್ಟಡದಲ್ಲಿ ಇವೆ. ಹೀಗಾಗಿ, ವಿಧ್ಯಾರ್ಥಿಗಳಿಗೆ ಅಗತ್ಯವಾದ ಸೌಲಭ್ಯ ನೀಡಲು ಆಗುತ್ತಿಲ್ಲ. ವಿಶ್ವವಿದ್ಯಾಲಯ ಕೂಡ ಇತ್ತೀಚೆಗೆ ಹೊಸ ಕೋರ್ಸ್ಗಳನ್ನು ಕೂಡ ಈ ಬಾರಿ ಪರಿಚಯ ಮಾಡಿದ್ದೇವೆ. ಉದ್ದೇಶಿತ ಹೊಸ ಕಟ್ಟಡ 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಆಗಲಿದೆ. ಹೀಗಾಗಿ ಎಷ್ಟು ಕಡಿಮೆ ಮರ ಕಡಿಯಬಹುದು ಯೋಚಿಸಿ ನಿರ್ಧಾರ ಮಾಡಿದ್ದೇವೆ ಎಂದರು.
ನಾವು ಏನು ಮಾಡೋಕೆ ಹೊರಟಿದ್ದೇವೆ ಎಂಬುದು ಜನರಿಗೆ ತಿಳಿಯಬೇಕು. 1,200 ಎಕರೆಯ ಈ ಜಾಗ ವಿವಿ ಶೈಕ್ಷಣಿಕ ಉದ್ದೇಶಕ್ಕೆ ಇರುವುದು. ಕ್ಯಾಂಪಸ್ನಲ್ಲಿ ಲಕ್ಷಕ್ಕೂ ಹೆಚ್ಚಿನ ಗಿಡ ಮರಗಳಿವ. ಹೊಸ ಕಟ್ಟಡ ನಿರ್ಮಾಣ ಜಾಗದಲ್ಲಿ ಅರಣ್ಯ ಕಾಯ್ದೆಯನ್ನು ಪಾಲನೆ ಮಾಡುತ್ತೇವೆ. ಕಟ್ಟಡ ನಿರ್ಮಾಣ ಜಾಗ ಜೀವ ವೈವಿಧ್ಯ ಪಾರ್ಕ್ ಇಲ್ಲಿ ನಾವು ಒಂದು ಮರ ಕಡಿದರೆ ಹತ್ತು ಗಿಡ ನೆಡುತ್ತೇವೆ ಎಂದು ಹೇಳಿದರು.
419 ಮರಗಳನ್ನು ಕಡಿಯುತ್ತಿಲ್ಲ, 282 ಮರಗಳನ್ನು ಮಾತ್ರ ಕಡಿಯಲಾಗುತ್ತಿದೆ. ಅವುಗಳಲ್ಲಿ ಹೆಚ್ಚಿನವು ನೀಲಗಿರಿ ಮತ್ತು ಅಕೇಶಿಯ ಮರಗಳು. ಬಫರ್ ಜೋನ್ನಲ್ಲಿರುವ 137 ಮರಗಳನ್ನು ಉಳಿಸುತ್ತೇವೆ ಎಂದರು.
ಏನಿದು ಶೈಕ್ಷಣಿಕ ಕಟ್ಟಡ?
ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸ್ಥಳವಿದೆ. ಸದ್ಯ ಹೊಸ ಕೋರ್ಸ್ಗಳನ್ನು ಪರಿಚಯಿಸಿರುವುದರಿಂದ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಕೂಡ ಇದೆ. ಇದನ್ನು ನೀಗಿಸುವ ಸಲುವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ 1.25 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಶೈಕ್ಷಣಿಕ ಕಟ್ಟಡ ನಿರ್ಮಾಣ ಮಾಡಲು ವಿಶ್ವವಿದ್ಯಾಲಯ ಮುಂದಾಗಿದೆ.
ಇದನ್ನೂ ಓದಿ: ಕಾಏಕಿ ಶಾಪ್ಗೆ ನುಗ್ಗಿ 2 ಕೋಟಿ ರೂ ದೋಚಿದ ದುಷ್ಕರ್ಮಿಗಳು
ಏನಿದು ಪಿಎಂ ಉಷಾ?
2013ರಲ್ಲಿ ಆರಂಭವಾದ ರಾಷ್ಟ್ರೀಯ ಉಚ್ಛ ಶಿಕ್ಷಣ ಅಭಿಯಾನ (ರೂಸಾ) ನಿಧಿಯನ್ನೇ 2023ರಲ್ಲಿ ಪ್ರಧಾನ ಮಂತ್ರಿ ಉಚ್ಛ ಶಿಕ್ಷಣ ಅಭಿಯಾನ (ಪಿಎಂ ಉಷಾ) ಎಂದು ಮರು ನಾಮಕರಣ ಮಾಡಲಾಗಿದೆ. ಆರು ವಿಷಯಗಳಲ್ಲಿ ಅನುದಾನ ನೀಡಲಾಗುತ್ತದೆ.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Fri, 27 June 25








