ಅಕ್ಷಯ ತೃತೀಯಕ್ಕೆ ಬಂಗಾರ ದುಬಾರಿ? ಚಿನ್ನದ ದರದಲ್ಲಿ ಹಾವು-ಏಣಿ ಆಟ: ಆಫರ್ಗಳ ಮೊರೆ ಹೋದ ಗ್ರಾಹಕ!
Akshaya Tritiya Gold Price 2026: ಅಕ್ಷಯ ತೃತೀಯ ಸಮೀಪಿಸುತ್ತಿದ್ದರೂ ಚಿನ್ನದ ಬೆಲೆಯಲ್ಲಿ ನಿರಂತರ ಏರಿಳಿತ ಮುಂದುವರಿದಿದೆ. ಯುದ್ಧದ ಭೀತಿ ಮತ್ತು ಜಾಗತಿಕ ಮಾರುಕಟ್ಟೆಯ ಏರುಪೇರಿನಿಂದಾಗಿ ಚಿನ್ನದ ದರ ದಾಖಲೆ ಮಟ್ಟಕ್ಕೆ ತಲುಪಿದ್ದು, ಗ್ರಾಹಕರು ಬೆಲೆ ಏರಿಕೆಯ ಆತಂಕದಲ್ಲಿದ್ದಾರೆ. ಇದರ ನಡುವೆ ಜ್ಯುವೆಲರಿ ಮಳಿಗೆಗಳು ವೇಸ್ಟೇಜ್ ರಿಯಾಯಿತಿ ಹಾಗೂ ಪ್ರೀ-ಬುಕ್ಕಿಂಗ್ ಆಫರ್ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

ಬೆಂಗಳೂರು, ಏಪ್ರಿಲ್ 14: ಶ್ರೇಷ್ಠ ದಿನವಾದ ಅಕ್ಷಯ ತೃತೀಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಹಳದಿ ಲೋಹದ ಬೆಲೆ ಮಾತ್ರ ಸ್ಥಿರವಾಗಿಲ್ಲದೆ ಗ್ರಾಹಕರನ್ನು ಚಿಂತೆಗೆ ಈಡುಮಾಡಿದೆ. ಕಳೆದ ಒಂದು ತಿಂಗಳಿನಿಂದ ಗಲ್ಫ್ ರಾಷ್ಟ್ರಗಳ ಯುದ್ಧ ಮತ್ತು ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚಿನ್ನದ ದರ (Gold Price) ಹಾವು-ಏಣಿ ಆಟದಂತೆ ಏರಿಕೆ ಮತ್ತು ಇಳಿಕೆ ಕಾಣುತ್ತಿದೆ.
ಚಿನ್ನದ ದರ ಏರಿಕೆಯ ಆತಂಕ
ಯುದ್ಧದ ಕದನ ವಿರಾಮದ ಸುದ್ದಿಗಳ ಬೆನ್ನಲ್ಲೇ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ಸ್ಥಿರವಾಗಿದ್ದ ದರ, ಏಪ್ರಿಲ್ ವೇಳೆಗೆ ಗಮನಾರ್ಹ ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,000 ರೂ. ಗಡಿ ದಾಟಿ ಮುನ್ನುಗ್ಗುತ್ತಿದ್ದು, ಅಕ್ಷಯ ತೃತೀಯದ ವೇಳೆಗೆ ಇದು ಮತ್ತಷ್ಟು ದುಬಾರಿಯಾಗುವ ಆತಂಕ ಮೂಡಿದೆ.
ಗ್ರಾಹಕರನ್ನು ಸೆಳೆಯಲು ಆಫರ್ಗಳ ಸುರಿಮಳೆ!
ಬೆಲೆ ಏರಿಕೆಯ ನಡುವೆಯೂ ಗ್ರಾಹಕರನ್ನು ಆಕರ್ಷಿಸಲು ಜ್ಯುವೆಲರಿ ಮಳಿಗೆಗಳು ಭರ್ಜರಿ ಆಫರ್ಗಳನ್ನು ಘೋಷಿಸಿವೆ. ಸದ್ಯ ಬೆಂಗಳೂರಿನಲ್ಲಿ ಆಭರಣ ಮಳಿಗೆಗಳು ನೀಡುತ್ತಿರುವ ಆಫರ್ ವಿವರ ಹೀಗಿದೆ;
- ಚಿನ್ನದ ಆಭರಣಗಳ ಮೇಲೆ ಶೇ 20 ರಷ್ಟು ವೇಸ್ಟೇಜ್ (ಸೇತುವಾರಿ) ರಿಯಾಯಿತಿ.
- ಹಳೆ ಚಿನ್ನದ ವಿನಿಮಯದ ಮೇಲೆ ಪ್ರತಿ ಗ್ರಾಂಗೆ 100 ರೂಪಾಯಿ ಹೆಚ್ಚುವರಿ ಲಾಭ.
- ಡೈಮಂಡ್ ಮತ್ತು ಅನ್ಕಟ್ ಡೈಮಂಡ್ ಆಭರಣಗಳ ಮೇಲೆ ಶೇ 12.5 ರಷ್ಟು ಡಿಸ್ಕೌಂಟ್.
- ಅಕ್ಷಯ ತೃತೀಯದ ದಿನದ ದರ ಏರಿಕೆಯಿಂದ ಬಚಾವಾಗಲು ಈಗಲೇ ‘ಪ್ರೀ-ಬುಕ್ಕಿಂಗ್’ ಮಾಡುವ ಸೌಲಭ್ಯ.
ಏಪ್ರಿಲ್ 13 ರಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿತ್ತು. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಅಂದಾಜು 13,975 ರೂ. (10 ಗ್ರಾಂಗೆ 1,39,750 ರೂ.) ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,246 ರೂ. (10 ಗ್ರಾಂಗೆ 1,52,460 ರೂ.) ನಷ್ಟಿತ್ತು. ಹಿಂದಿನ ದಿನಕ್ಕೆ, ಅಂದರೆ ಏಪ್ರಿಲ್ 12ಕ್ಕೆ ಹೋಲಿಸಿದರೆ ಪ್ರತಿ 10 ಗ್ರಾಂಗೆ ಸುಮಾರು 350 ರಿಂದ 400 ರೂಪಾಯಿಗಳಷ್ಟು ಕುಸಿತ ದಾಖಲಾಗಿದೆ.
ಏಪ್ರಿಲ್ 19 ರಂದು ಅಕ್ಷಯ ತೃತೀಯ ಇದೆ. ಹೀಗಾಗಿ, ಒಟ್ಟಿನಲ್ಲಿ ಬೆಲೆ ಎಷ್ಟೇ ಏರಿಕೆಯಾದರೂ ಅಕ್ಷಯ ತೃತೀಯದಂದು ಸ್ವಲ್ಪವಾದರೂ ಚಿನ್ನ ಖರೀದಿಸಬೇಕು ಎಂಬ ಪದ್ಧತಿಯನ್ನು ಅನುಸರಿಸುವ ಗ್ರಾಹಕರು ಈಗಿನಿಂದಲೇ ಮಳಿಗೆಗಳಿಗೆ ಭೇಟಿ ನೀಡಿ ಪ್ಲಾನ್ ಮಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



