ಜೈನ್ ವಿಶ್ವವಿದ್ಯಾಲಯದಲ್ಲಿ ಬಿಆರ್ ಅಂಬೇಡ್ಕರ್ರಿಗೆ ಅವಮಾನ: ವಿದ್ಯಾರ್ಥಿಗಳ ಮೇಲಿನ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಜೈನ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ವಿಡಂಬನಾತ್ಮಕ ನಾಟಕದ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿದೆ. ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರು ನೀಡಿದ ತೀರ್ಪಿನಲ್ಲಿ, ನಾಟಕವು ಸಂವಿಧಾನದ ಆರ್ಟಿಕಲ್ 19 ರ ಅಡಿಯಲ್ಲಿ ರಕ್ಷಣೆ ಪಡೆದಿದೆ ಎಂದು ಹೇಳಿದ್ದಾರೆ.

ಬೆಂಗಳೂರು, ಮಾರ್ಚ್ 01: ಡಾ. ಬಿಆರ್ ಅಂಬೇಡ್ಕರ್ (BR Ambedkar) ಕುರಿತು ವಿಡಂಬನಾತ್ಮಕ ನಾಟಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜೈನ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ.
ವಿಡಂಬನಾತ್ಮಕ ನಾಟಕಕ್ಕೆ ಸಂವಿಧಾನದ ಆರ್ಟಿಕಲ್ 19 ರಕ್ಷಣೆಯಿದೆ. ನಾಟಕದಲ್ಲಿ ದಲಿತ ದೌರ್ಜನ್ಯದ ಉದ್ದೇಶವಿರಲಿಲ್ಲ ಎಂದು ನ್ಯಾ.ಎಸ್.ಆರ್.ಕೃಷ್ಣಕುಮಾರ್ರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದ್ದು, ಹೀಗಾಗಿ ಕೇಸ್ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಶನಿವಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಬೆಂಗಳೂರು: ಜೈನ್ ವಿಶ್ವವಿದ್ಯಾಲಯದಲ್ಲಿ ಬಿ.ಆರ್ ಅಂಬೇಡ್ಕರ್ರಿಗೆ ಅವಮಾನ: 7 ವಿದ್ಯಾರ್ಥಿಗಳ ಬಂಧನ
ಲಾಲ್ ಬಾಗ್ ರಸ್ತೆಯಲ್ಲಿರುವ ಜೈನ್ ಯೂನಿವರ್ಸಿಟಿಯ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಯೂತ್ ಫೆಸ್ಟ್ ಅಂಗವಾಗಿ ಫೆಬ್ರವರಿ 6ರಂದು ಆಯೋಜಿಸಲಾಗಿದ್ದ ಸ್ಕಿಟ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಯಾಕಂದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಬಳಸಿದ್ದ ಕೆಲ ಪದಗಳು ದಲಿತ ಸಂಘಟನೆಗಳನ್ನ ಕೆರಳಿಸಿತ್ತು. ಫೆ. 6ರಂದು ಕಾಲೇಜಿನ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮ್ಯಾಡ್ ಆ್ಯಡ್ ಪ್ರದರ್ಶನದಲ್ಲಿ ಅಂಬೇಡ್ಕರ್ ಹಾಗೂ ದಲಿತರ ಬಗ್ಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಬಿ ಆರ್ ಅಂಬೇಡ್ಕರ್ ಅಲ್ಲ, ಬಿಯರ್ ಅಂಬೇಡ್ಕರ್, ಡೋಂಟ್ ಟಚ್ ಮಿ, ಟಚ್ ಮಿ’ ಅಂತ ಸಾಂಗ್ ಪ್ಲೇ ಮಾಡಿ ಗೇಲಿ ಮಾಡಿದ್ದಲ್ಲದೇ, ನೀವು ಡಿ-ಲಿಟ್ ಆಗಿರುವಾಗ ದಲಿತರಾಗಿರಲು ಕಾರಣವೇನು’ ಎಂದು ವಿವಾದಾತ್ಮಕ ಸ್ಕಿಟ್ ಪ್ರದರ್ಶನ ಮಾಡಿದ್ದರು. ಈ ವಿವಾದದ ಕಿಚ್ಚು ಹೆಚ್ಚಾಗ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ, ಬೇಷರತ್ ಕ್ಷಮೆಯಾಚಿಸಿತ್ತು. ಅಷ್ಟು ಮಾತ್ರವಲ್ಲ ಶಿಸ್ತುಪಾಲನ ಕಮಿಟಿಯಿಂದಲೂ ಸ್ಕಿಟ್ ಪ್ರದರ್ಶನ ಮಾಡಿದ್ದ 6 ವಿದ್ಯಾರ್ಥಿಗಳನ್ನ ಅಮಾನತು ಮಾಡಲಾಗಿತ್ತು.
ಪ್ರಿನ್ಸಿಪಾಲ್ ಸೇರಿದಂತೆ 6 ಜನರ ವಿರುದ್ಧ ಎಫ್ಐಆರ್
ಇನ್ನು ಈ ವಿಚಾರವಾಗಿ ಪ್ರಿನ್ಸಿಪಾಲ್ ಸೇರಿದಂತೆ 6 ಜನರ ವಿರುದ್ಧ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಫೆ.11 ರಂದು ಎಫ್ಐಆರ್ ದಾಖಲಾಗಿತ್ತು. ಬೆಂಗಳೂರು ದಕ್ಷಿಣ ವಿಭಾಗದ ಸಮಾಜ ಕಲ್ಯಾಣಾಧಿಕಾರಿ ದೂರು ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿತ್ತು.
ಕರ್ನಾಟದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







