ಬೆಂಗಳೂರಿನ ಮದರಸಾದಲ್ಲಿ ಬಾಲಕಿ ಮೇಲೆ ಹಲ್ಲೆ ಪ್ರಕರಣ: ದೂರು ಕೊಟ್ಟ ಪೋಷಕರಿಗೆ ಕೊಲೆ ಬೆದರಿಕೆ
ಬೆಂಗಳೂರಿನ ಥಣಿಸಂದ್ರದ ಮದರಸಾದಲ್ಲಿ ಬಾಲಕಿಯ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ, ದೂರು ನೀಡಿದ ಪೋಷಕರಿಗೆ ಜೀವ ಬೆದರಿಕೆ ಹಾಕಲಾಗಿದೆ. ಹಲ್ಲೆಯ ಆರೋಪಿ ಹಸನ್ ವಿರುದ್ಧ ದೂರು ದಾಖಲಿಸಿದ ಬಳಿಕ, ಕೇಸ್ ವಾಪಸ್ ಪಡೆಯುವಂತೆ ಮದರಸಾ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು, ಮಾರ್ಚ್ 11: ಬೆಂಗಳೂರಿನ ಮದರಸಾದಲ್ಲಿ (Madrasa) ಬಾಲಕಿ ಮೇಲೆ ಹಲ್ಲೆ ಆರೋಪ ಪ್ರಕರಣದಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ವಿರುದ್ಧ ದೂರು ಕೊಟ್ಟ ಪೋಷಕರಿಗೆ ಕೊಲೆ ಬೆದರಿಕೆ (Death Threat) ಹಾಕಿರುವ ಆರೋಪ ಕೇಳಿಬಂದಿದೆ. ಹಲ್ಲೆ ವಿಚಾರವಾಗಿ ನೀಡಿರುವ ಕೇಸ್ ವಾಪಸ್ ಪಡೆದುಕೊಳ್ಳಬೇಕು. ಇಲ್ಲವಾದರೆ ಕೊಲೆ ಮಾಡುವುದಾಗಿ ಮದರಸಾದವರು ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರ್ತರು ಆರೋಪಿಸಿದ್ದಾರೆ. ಅನ್ವರ್ ಅಲಿ, ಹಸನ್ ಮುಸ್ಮಿಲ್ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪ ಮಾಡಲಾಗಿದೆ. ಈ ಸಂಬಂಧ ಸಂತ್ರಸ್ತರ ಬಾಲಕಿಯ ತಾಯಿ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯ ತಾಯಿ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಯಶವಂತಪುರ ಠಾಣೆ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
ಹಸನ್ ಎಂಬಾತ ಕೆಲ ದಿನಗಳ ಹಿಂದೆ ಮದರಸಾದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಆರೋಪಿ ಹಸನ್ನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಮದರಸಾವನ್ನು ಪೊಲೀಸರು ಬಂದ್ ಮಾಡಿಸಿದ್ದರು. ಕೇಂದ್ರ ಮಹಿಳಾ ಆಯೋಗದ ಕಮಿಟಿ ಸದಸ್ಯರು ಕೂಡ ಮದರಸಾಗೆ ಭೇಟಿ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ, ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಬಾಲಕಿಯ ತಾಯಿಗೆ ಬೆದರಿಕೆ ಹಾಕಲಾಗಿದೆ. ದೂರುದಾರರ ಪರ ವಕೀಲ ಹುಸೇನ್ಗೂ ಬೆದರಿಕೆ ಹಾಕಿದ ಆರೋಪ ವ್ಯಕ್ತವಾಗಿದೆ. ವಕೀಲ ಹುಸೇನ್ ನಾಲಗೆ ಕಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸಂತ್ರಸ್ತೆ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.
ಥಣಿಸಂದ್ರದಲ್ಲಿರುವ ಮದರಸಾದಲ್ಲಿ ಹಸನ್ ಬಾಲಕಿಯರ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಸಿಸಿಟಿವಿ ವಿಡಿಯೋ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ನೋಡಿ: ಬೆಂಗಳೂರಿನ ಮದರಸಾದಲ್ಲಿ ಬಾಲಕಿಯರ ಮೇಲೆ ಕ್ರೌರ್ಯ: ಕಚೇರಿಗೆ ಕರೆಸಿ ಮನಬಂದಂತೆ ಹಲ್ಲೆ
ಮದರಸಾ ಕಚೇರಿಗೆ ಕರೆದು ನಾಲ್ಕೈದು ಮಕ್ಕಳ ಮೇಲೆ ಹಸನ್ ಹಲ್ಲೆ ಮಾಡಿದ್ದ. ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಘಟನೆ ದೃಶ್ಯ ಕಂಡು ಪೋಷಕರು ಮದರಸ ಮುಂದೆ ಗಲಾಟೆ ಮಾಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.