ಅನಧಿಕೃತವಾಗಿ ಕಟ್ಟಡ ನಿರ್ಮಿಸಿದವರಿಗೆ ಶಾಕ್ ಕೊಟ್ಟ ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಕ್ರಮ ಕಟ್ಟಡ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಂತೆ, ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂಗೆ ಸೂಚನೆ ನೀಡಿದೆ. ಬಿಬಿಎಂಪಿ ಕಾಯ್ದೆ 2020ರ ಕಲಂ 248(3) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ತಿಳಿಸಿದೆ.

ಬೆಂಗಳೂರು, ಏಪ್ರಿಲ್ 05: ಅನಧಿಕೃತವಾಗಿ ಕಟ್ಟಡ ನಿರ್ಮಿಸುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಕ್ (BBMP) ಕೊಟ್ಟಿದೆ. ಇನ್ಮುಂದೆ, ಪಾಲಿಕೆ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (BESCOM) ಕ್ಕೆ ಸೂಚನೆ ನೀಡಿದೆ. 2024ರ ಡಿಸೆಂಬರ್ 17ರ ಸುಪ್ರೀಂಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಸುತ್ತೋಲೆಯಲ್ಲಿ ಏನಿದೆ?
ಪಾಲಿಕೆಯಿಂದ ಈಗಾಗಲೇ ಅನಧಿಕೃತ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಾಯ್ದೆಯ ಕಲಂ 248(1), (2) ಮತ್ತು (3) ರಡಿಯಲ್ಲಿ ಆದೇಶವನ್ನು ಮತ್ತು ಕಲಂ 356(1) & (2) ರಡಿಯಲ್ಲಿ ಆದೇಶ ಹೊರಡಿಸಲಾಗಿದೆ. ಆದುದರಿಂದ ಇನ್ನು ಮುಂದೆ ಯಾವುದೇ ಅನಧಿಕೃತ ಕಟ್ಟಡದ ವಿರುದ್ಧ ಬಿಬಿಎಂಪಿ ಕಾಯ್ದೆ 2020ರ ಕಲಂ 248(3) ಅಡಿಯಲ್ಲಿ ಪಾಲಿಕೆಯಿಂದ ಆದೇಶ ಹೊರಡಿಸಿದ ತಕ್ಷಣ, ನಿಗಮದಿಂದ ಇಂತಹ ಕಟ್ಟಡಗಳಿಗೆ ತಾತ್ಕಾಲಿಕ/ಶಾಶ್ವತ ವಿದ್ಯುತ್ ಸಂಪರ್ಕವನ್ನು ಕೂಡಲೇ ಸ್ಥಗಿತಗೊಳಿಸಿ ಅನಧಿಕೃತ ನಿರ್ಮಾಣಗಳನ್ನು ಪರಿಣಾಮಕಾರಿಯಾಗಿ ತಡೆಯುವುದು ಅವಶ್ಯವಿರುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖವಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ವಿದ್ಯುತ್ ಸಂಪರ್ಕ ನೀಡುವ ಪೂರ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕವನ್ನು ನೀಡಬೇಕೆಂದು ಬೆಸ್ಕಾಂಗೆ ಬಿಬಿಎಂಪಿ ಸೂಚಿಸಿದೆ.
ಅನಧಿಕೃತ ಕಟ್ಟಡ ನಿರ್ಮಾಣ ತಡೆಯಲು ಬಿಬಿಎಂಪಿ ಹೆಜ್ಜೆ
- ಕಟ್ಟಡ ನಿರ್ಮಾಣ ಹಂತದಲ್ಲಿ/ಪೂರ್ವದಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಬೇಕಾದಲ್ಲಿ ಪಾಲಿಕೆಯಿಂದ ನೀಡಲಾಗಿರುವ ‘ಎ’ ಖಾತಾ ಹಾಗೂ ಅಂತಹ ಕಟ್ಟಡಗಳ ನಿರ್ಮಾಣಕ್ಕೆ ಪಾಲಿಕೆಯಿಂದ ನಕ್ಷೆ ಮಂಜೂರಾತಿ ನೀಡಿರುವುದನ್ನು ಬೆಸ್ಕಾಂ ಖಾತರಿಪಡಿಸಿಕೊಳ್ಳುಬೇಕು.
- ಯಾವುದೇ ಕಟ್ಟಡಕ್ಕೆ ಬಿಬಿಎಂಪಿ ಕಾಯ್ದೆ 2020 ರ ಕಲಂ 248(3) ರಡಿಯಲ್ಲಿ ಆದೇಶ ಹೊರಡಿಸಿದ ನಂತರ ಕಟ್ಟಡಕ್ಕೆ ಶಾಶ್ವತ/ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು.
- ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ಯಾವುದೇ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ಸಂಪರ್ಕ ನೀಡುವ ಪೂರ್ವದಲ್ಲಿ ಅಂತಹ ಕಟ್ಟಡಕ್ಕೆ ಪಾಲಿಕೆಯಿಂದ ಪೂರ್ಣತಾ ಪ್ರಮಾಣ ಪತ್ರ/ಸ್ವಾಧಿನಾನುಭವ ಪ್ರಮಾಣ ಪತ್ರ ನೀಡಲಾಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು.
- ಪಾಲಿಕೆಯಿಂದ ನೀಡಿರುವ ನಕ್ಷೆ ಮಂಜೂರಾತಿಯ ಸಿಂಧುತ್ವ ಅವಧಿಯು ಮುಗಿದ ನಂತರ, ಅಂತಹ ಕಟ್ಟಡಕ್ಕೆ ತಾತ್ಕಾಲಿಕ ಸಂಪರ್ಕ ಮುಂದುವರೆಸಬೇಕಾದಲ್ಲಿ ಕಟ್ಟಡ ನಕ್ಷೆ ಮಂಜೂರಾತಿಯನ್ನು ಪಾಲಿಕೆಯಿಂದ ನವೀಕರಿಸಿರುವುದನ್ನು ದೃಡೀಕರಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 pm, Sat, 5 April 25