AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಂಟ್ ಹೊಡೆಯುವ ನೆಪದಲ್ಲಿ ಬಂದವರು ಕೇವಲ 5 ನಿಮಿಷದ ಗ್ಯಾಪ್‌ನಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್

ಬೆಂಗಳೂರಿನಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಪೇಂಟರ್ಸ್ ಘಟನೆ ಮನೆ ಮಾಲೀಕರಿಗೆ ಪಾಠವಾಗಿದೆ. ಮನೆಗೆ ಕೆಲಸಗಾರರನ್ನು, ಅದರಲ್ಲೂ ಪರಿಚಯವಿಲ್ಲದವರನ್ನು ನೇಮಿಸುವಾಗ ತೀವ್ರ ಎಚ್ಚರಿಕೆ ವಹಿಸಬೇಕು. ದಾಸನಪುರದಲ್ಲಿ ದಂಪತಿಗಳ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಪರಾರಿಯಾಗಿದ್ದು, ಇಂತಹ ದರೋಡೆಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ.

ಪೇಂಟ್ ಹೊಡೆಯುವ ನೆಪದಲ್ಲಿ ಬಂದವರು ಕೇವಲ 5 ನಿಮಿಷದ ಗ್ಯಾಪ್‌ನಲ್ಲಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ಎಸ್ಕೇಪ್
ಪೇಂಟ್ ಹೊಡೆಯುವ ನೆಪದಲ್ಲಿ ಚಿನ್ನ ದೋಚಿದ ಕಳ್ಳರು Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on:Jun 08, 2026 | 3:34 PM

Share

ಬೆಂಗಳೂರು, ಜೂ.8: ಮನೆಗೆ ಕೆಲಸಗಾರರನ್ನು ಸೇರಿಸಿಕೊಳ್ಳುವ ಮುನ್ನ ಹಲವು ಬಾರಿ ಯೋಚನೆ ಮಾಡಬೇಕು. ಇದೀಗ ಸಿಲಿಕಾನ್ ಸಿಟಿಯಲ್ಲಿ ನಡೆದ ಘಟನೆಯೊಂದು ಭಾರೀ ಅಘಾತಗೊಳಿಸಿದೆ. ಮನೆಗೆ ಬಣ್ಣ ಬಳಿಯುವ ನೆಪದಲ್ಲಿ ಬಂದ ಪೇಂಟರ್‌ಗಳು ಮಾಲೀಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಬರೋಬ್ಬರಿ 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾಮಾಂಜನೇಯ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿಗಳಾದ ನಿತ್ಯಾ ಮತ್ತು ಚಂದ್ರಶೇಖರ್ ದಂಪತಿಗಳ ಮನೆಯಲ್ಲೇ ಈ ದರೋಡೆ ನಡೆದಿದ್ದು, ಕದೀಮರ ಕೈಚಳಕಕ್ಕೆ ದಂಪತಿಗಳು ಕಣ್ಣೀರಿಡುವಂತಾಗಿದೆ.

ನಿತ್ಯಾ ಹಾಗೂ ಚಂದ್ರಶೇಖರ್ ದಂಪತಿಗಳು ರಾಮಾಂಜನೇಯ ಬಡಾವಣೆಯಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇವರ ಮನೆಯ ಮೊದಲ ಮಹಡಿಯಲ್ಲಿದ್ದ ಬಾಡಿಗೆದಾರರು ಖಾಲಿ ಮಾಡಿದ್ದರು. ಇದನ್ನು ಗಮನಿಸಿದ್ದ ಪೇಂಟರ್ ಲಿಂಗರಾಜು ಎಂಬಾತ, ಮನೆ ಮಾಲೀಕ ಚಂದ್ರಶೇಖರ್ ಅವರನ್ನು ಭೇಟಿಯಾಗಿ, ನಿಮ್ಮ ಮನೆಗೆ ನಾವೇ ಕಡಿಮೆ ದರದಲ್ಲಿ ಪೇಂಟ್ ಮಾಡಿಕೊಡುತ್ತೇವೆ ಎಂದು ನಂಬಿಸಿ ತನ್ನ ಮೊಬೈಲ್ ನಂಬರ್ ನೀಡಿದ್ದನು. ಎರಡು ದಿನಗಳ ಬಳಿಕ ಚಂದ್ರಶೇಖರ್ ಅವರು ಲಿಂಗರಾಜುವಿಗೆ ಕರೆ ಮಾಡಿ ಬಣ್ಣ ಬಳಿಯಲು ಒಪ್ಪಿಗೆ ನೀಡಿದ್ದರು.

ಇನ್ನು ಕೆಲಸ ಆರಂಭಿಸಬೇಕು ಎಂದು ಲಿಂಗರಾಜು ತನ್ನ ಜೊತೆಗೆ ಪವನ್ ಕುಮಾರ್, ಮಂಜುನಾಥ್ ಮತ್ತು ವೆಂಕಟೇಶ್ ಎಂಬ ಮೂವರು ಕೆಲಸಗಾರರನ್ನು ಕರೆತಂದು ಮೊದಲ ಮಹಡಿಗೆ ಪೇಂಟ್ ಮಾಡಿಸಿದ್ದನು. ಕೆಲಸ ಚೆನ್ನಾಗಿ ಮಾಡಿದ್ದರಿಂದ, ಮಾಲೀಕರು ತಾವು ವಾಸವಿದ್ದ ಕೆಳಮಹಡಿಯ ಕಿಟಕಿಗಳಿಗೂ ಬಣ್ಣ ಬಳಿಯುವಂತೆ ತಿಳಿಸಿದರು. ನಂತರ ಪೇಂಟರ್‌ಗಳು ನಿತ್ಯಾ ದಂಪತಿಗಳು ವಾಸವಿದ್ದ ಬೆಡ್‌ರೂಂಗೆ ಪೇಂಟ್ ಮಾಡಲು ಹೋಗಿದ್ದಾರೆ. ಈ ವೇಳೆ ಬೆಡ್‌ ರೂಮ್​​​​ ಒಳಗಡೆ ಪೇಂಟ್ ನಡೆಯುತ್ತಿದ್ದಾಗ ಹೊರಗಡೆ ಮಗು ಜೋರಾಗಿ ಅಳುವ ಶಬ್ದ ಕೇಳಿಸಿದೆ. ತಾಯಿ ನಿತ್ಯಾ ಅವರು ಮಗುವನ್ನು ಸಮಾಧಾನಪಡಿಸಲು ರೂಮ್‌ನಿಂದ ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಪೇಂಟರ್‌ಗಳು ತಮ್ಮ ಕೈಚಳಕ ತೋರಿಸಿದ್ದರು. ಕೇವಲ ಐದಾರು ನಿಮಿಷಗಳ ಗ್ಯಾಪ್‌ನಲ್ಲಿ ಬೀರುವಿನಲ್ಲಿದ್ದ ಸುಮಾರು 254 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಜಾಗ ಖಾಲಿ ಮಾಡಿದ್ದಾರೆ.

ಇದನ್ನೂ ಓದಿ: ಆಯುಷ್ಮಾನ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ

ಕೆಲಸ ಮುಗಿಯುವ ಮುನ್ನವೇ ಪೇಂಟರ್‌ಗಳು ದಿಢೀರ್ ನಾಪತ್ತೆಯಾಗಿದ್ದನ್ನು ಕಂಡು ಅನುಮಾನಗೊಂಡ ನಿತ್ಯಾ ಅವರು ರೂಮ್​​​ನ ಬೀರು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಕದ್ದ ಆಭರಣಗಳ ಒಟ್ಟು ಮೌಲ್ಯ ಸುಮಾರು 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ಕದ್ದ ಒಡವೆಗಳನ್ನು ಪತ್ತೆಹಚ್ಚಿ ಕೊಡುವಂತೆ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಲಿಂಗರಾಜು ಮತ್ತು ಆತನ ಗ್ಯಾಂಗ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Mon, 8 June 26

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More