8,000 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಮುಂದಾದ ಸರ್ಕಾರ: ಹಿಂದಿನ ಲೆಕ್ಕ ಕೇಳಿದ ತೇಜಸ್ವಿ ಸೂರ್ಯ

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 5500 ಕೋಟಿ ರೂ ಖರ್ಚು ಮಾಡಿದರೂ ರಸ್ತೆ ಪರಿಸ್ಥಿತಿ ಬದಲಾಗಿಲ್ಲ. 8,000 ಕೋಟಿ ರೂ ವೆಚ್ಚದಲ್ಲಿ ಇದೀಗ ಮತ್ತೆ ರಸ್ತೆ ಗುಂಡಿ ಮುಚ್ಚಲು ಹೊರಟಿದ್ದಾರೆ. ಕಳೆದ ಬಾರಿ ಆಗಿರುವ ಖರ್ಚಿನ ಬಗ್ಗೆ ಮಾಹಿತಿನೇ ಇಲ್ಲ. ಇದರ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸಂಸದ ತೇಜಸ್ವಿ ಸೂರ್ಯ ಸಚಿವ ಕೃಷ್ಣಭೈರೇಗೌಡಗೆ ಮನವಿ ಮಾಡಿದ್ದಾರೆ.

8,000 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಮುಂದಾದ ಸರ್ಕಾರ: ಹಿಂದಿನ ಲೆಕ್ಕ ಕೇಳಿದ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ
Image Credit source: ANI
Edited By:

Updated on: Sep 05, 2026 | 6:56 PM

ಬೆಂಗಳೂರು, ಸೆಪ್ಟೆಂಬರ್​ 05: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ಶಾಸಕರು ಹಾಗೂ ಸಂಸದರೊಂದಿಗೆ ನಡೆದ ಮಹತ್ವದ ಸಮಾಲೋಚನಾ ಸಭೆಯಲ್ಲಿ, ರಾಜಧಾನಿಯ ರಸ್ತೆ ಅವ್ಯವಸ್ಥೆ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕಳೆದ 3 ವರ್ಷಗಳಲ್ಲಿ ರಸ್ತೆ ಗುಂಡಿ ಮುಚ್ಚಲು 5500 ಕೋಟಿ ರೂ ಖರ್ಚು ಮಾಡಿದರೂ ನಗರದಲ್ಲಿ ರಸ್ತೆ ಪರಿಸ್ಥಿತಿ ಬದಲಾಗಿಲ್ಲ. ಹೀಗಾಗಿ ಈ ಬಗ್ಗೆ ಸಮಗ್ರ ಶ್ವೇತಪತ್ರ ಹೊರಡಿಸುವಂತೆ ಮನವಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

8,000 ಕೋಟಿ ರೂ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚಲು ಹೊರಟ ಸರ್ಕಾರ

ವಿಕಾಸಸೌಧದಲ್ಲಿ ನಡೆದ ಜಿಬಿಎ ಸರ್ವಪಕ್ಷ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ‘ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಬೆಂಗಳೂರಿನ ಶಾಸಕರು, ಸಂಸದರನ್ನು ಸಭೆಗೆ ಆಹ್ವಾನಿಸಿದ್ದರು. ಕಳೆದ ಮೂರು ವರ್ಷಗಳಲ್ಲಿ ರಸ್ತೆ ಗುಂಡಿ ಮುಚ್ಚಲು ಬರೋಬ್ಬರಿ 5,500 ಕೋಟಿ ರೂ ಖರ್ಚು ಮಾಡಲಾಗಿದೆ. ಇಷ್ಟೊಂದು ಹಣ ವ್ಯಯಿಸಿದರೂ ನಗರದ ರಸ್ತೆಗಳ ಪರಿಸ್ಥಿತಿ ಕಿಂಚಿತ್ತೂ ಸುಧಾರಿಸಿಲ್ಲ. ಇದೀಗ ಮತ್ತೆ ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ 8,000 ಕೋಟಿ ರೂ ವೆಚ್ಚ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಕಳೆದ ಬಾರಿ ಆಗಿರುವ ಖರ್ಚಿನ ಬಗ್ಗೆ ಮಾಹಿತಿನೇ ಇಲ್ಲ. ಹಾಗಾಗಿ ಇದರ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಮನವಿ ಮಾಡಿದ್ದೇನೆ’ ಎಂದರು.

ಹೈಯೆಸ್ಟ್ ರೇಟ್, ಡಕೋಟಾ ಎಕ್ಸ್‌ಪ್ರೆಸ್ ಸರ್ವಿಸ್

ನಗರದ ಸಂಚಾರ ದಟ್ಟಣೆಗೆ ಪರ್ಯಾಯವೆಂದು ನಿತ್ಯ 12 ಲಕ್ಷ ಜನ ಆಶ್ರಯಿಸಿರುವ ನಮ್ಮ ಮೆಟ್ರೋ ಸೇವೆಯ ಅಧ್ವಾನಗಳನ್ನೂ ಸಭೆಯಲ್ಲಿ ಪ್ರಸ್ತಾಪಿಸಿರುವ ತೇಜಸ್ವಿ ಸೂರ್ಯ, ‘ದೇಶದ ಎಲ್ಲ ಪ್ರಮುಖ ನಗರಗಳ ಮೆಟ್ರೋ ವ್ಯವಸ್ಥೆಗೆ ಹೋಲಿಸಿದರೆ ಬೆಂಗಳೂರಿನ ಮೆಟ್ರೋ ಪ್ರಯಾಣ ದರ ಅತ್ಯಂತ ದುಬಾರಿಯಾಗಿದೆ. ಆದರೆ ದುಬಾರಿ ಹಣ ವಸೂಲಿ ಮಾಡಿದರೂ ನೀಡುತ್ತಿರುವ ಸೇವೆ ಮಾತ್ರ ಅತ್ಯಂತ ಕಳಪೆಯಾಗಿದೆ.

ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ಸೂಚನೆಗೂ ಡೋಂಟ್ ಕೇರ್: ಬಿತ್ತು ಕಾರ್ಯಪಾಲಕ ಅಭಿಯಂತರರ ವಿಕೆಟ್

ಕಳೆದ ಒಂದೇ ವರ್ಷದಲ್ಲಿ ಬೇರೆ ಬೇರೆ ತಾಂತ್ರಿಕ ಕಾರಣಗಳಿಂದ ಬರೋಬ್ಬರಿ 21 ಬಾರಿ ಮೆಟ್ರೋ ರೈಲು ಸಂಚಾರ ಅರ್ಧದಲ್ಲೇ ಸ್ಥಗಿತಗೊಂಡಿದೆ. ಹೆಚ್ಚು ದರ ಪಡೆದು ಡಕೋಟಾ ಎಕ್ಸ್‌ಪ್ರೆಸ್ ಸರ್ವಿಸ್​​ ನೀಡಲಾಗುತ್ತಿದೆ. ಇದು ಬೆಂಗಳೂರಿನ ಮೆಟ್ರೋ ಪರಿಸ್ಥಿತಿ ಆಗಿದೆ’ ಎಂದು ಕಿಡಿಕಾರಿದರು.

ಮೆಟ್ರೋ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಮನವಿ

ಇನ್ನು ಸದ್ಯ ಪ್ರಗತಿಯಲ್ಲಿರುವ ಮೆಟ್ರೋ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ. ಆರೆಂಜ್ ಹಾಗೂ ರೆಡ್ ಲೈನ್ ಮೆಟ್ರೋ ಕಾಮಗಾರಿ‌ಮುಗಿಸುವಂತೆ ಮನವಿ ಮಾಡಲಾಗಿದ್ದು, ಈ ಎರಡು ಮಾರ್ಗ ಕಾಮಗಾರಿ ಮುಗಿದರೆ ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:54 pm, Sat, 5 September 26

Loading...
Unable to load recommendations.
Follow Us