ಭ್ರಷ್ಟಾಚಾರ ಆರೋಪ: ಲೋಕಾಯುಕ್ತಕ್ಕೆ ಸ್ವಯಂ ಪ್ರೇರಿತವಾಗಿ ದಾಖಲೆ ಸಮೇತ ಉತ್ತರ ಸಲ್ಲಿಸಿದ ಶಾಸಕ ಸುರೇಶ್ ಕುಮಾರ್
ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ತಮ್ಮ ವಿರುದ್ಧ ಸಲ್ಲಿಕೆಯಾಗಿದ್ದ ಭ್ರಷ್ಟಾಚಾರದ ಆರೋಪ ಸಂಬಂಧ ಯಾವುದೇ ನೋಟಿಸ್ ಬರದಿದ್ದರೂ ಲೋಕಾಯುಕ್ತಕ್ಕೆ ಸ್ವಯಂಪ್ರೇರಿತವಾಗಿ 160 ಪುಟಗಳ ದಾಖಲೆಗಳ ಸಮೇತ ಉತ್ತರ ನೀಡಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದೂರು ಎಂದು ಪುನರುಚ್ಛರಿಸಿರುವ ಅವರು, ಶಾಸಕರೂ ಸೇರಿದಂತೆ, ಯಾವುದೇ ಜನಪ್ರತಿನಿಧಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಯಮಾನುಸಾರ ಅವಕಾಶವಿಲ್ಲ ಎಂದಿದ್ದಾರೆ.

ಬೆಂಗಳೂರು, ಜುಲೈ 08: ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಭ್ರಷ್ಟಾಚಾರ ಆರೋಪ ಮಾಡಿ ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಸಂಬಂಧ ಸ್ವಯಂಪ್ರೇರಿತರಾಗಿ 160 ಪುಟಗಳ ದಾಖಲೆಗಳೊಂದಿಗೆ, 27 ಪುಟಗಳ ಉತ್ತರವನ್ನು ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ನೀಡಿದ್ದಾರೆ. ಜುಲೈ 2ರ ಗುರುವಾರದಂದು ತನ್ನ ವಿರುದ್ಧ ಓರ್ವ ವ್ಯಕ್ತಿ ಕರ್ನಾಟಕ ಲೋಕಾಯುಕ್ತರ ಬಳಿ ದೂರು ಸಲ್ಲಿಸಿರುವುದು ಮಾಧ್ಯಮಗಳ ಮೂಲಕ ತಿಳಿದಿದ್ದು, ದೂರಿನ ಅಂಶಗಳನ್ನು ಅಧ್ಯಯನ ಮಾಡಿದ ನಂತರ ಲೋಕಾಯುಕ್ತರಿಗೆ ಉತ್ತರ ನೀಡುವುದಾಗಿ ತಕ್ಷಣವೇ ತಿಳಿಸಿದ್ದೆ. ಹೀಗಾಗಿ ಲೋಕಾಯುಕ್ತರಿಂದ ಯಾವುದೇ ನೋಟಿಸ್ ಅಥವಾ ಸಂದೇಶ ಬರದಿದ್ದರೂ ಸ್ವಯಂ ಪ್ರೇರಿತವಾಗಿ, ಸುದೀರ್ಘ ಉತ್ತರ ನೀಡಿರೋದಾಗಿ ಶಾಸಕರು ಹೇಳಿದ್ದಾರೆ.
‘ಆರೋಪದಲ್ಲಿ ಕಿಂಚಿತ್ತೂ ಹುರುಳಿಲ್ಲ’
ಶಾಸಕರೂ ಸೇರಿದಂತೆ, ಯಾವುದೇ ಜನಪ್ರತಿನಿಧಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಯಮಾನುಸಾರ ಅವಕಾಶವಿಲ್ಲ. ಹೀಗಾಗಿ ಟೆಂಡರ್ ಕುರಿತಂತೆ ಯಾವುದೇ ಕಡತದ ಮೇಲೆ ನಾವು ನಿರ್ಧಾರ ಕೈಗೊಂಡು ಸಹಿ ಹಾಕುವ ಅನುಮೋದನೆ ಮಾಡುವ ಅವಕಾಶ ಇರುವುದಿಲ್ಲ. ಇದೆಲ್ಲವೂ ಕಾನೂನು ಮತ್ತು ನಿಯಮಗಳ ಅನುಸಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ನಡೆಸಬೇಕಿರುವ ಕಾರ್ಯ. ಹೀಗಿರುವಾಗ ತನ್ನ ವಿರುದ್ಧ ಸಲ್ಲಿಸಿರುವ ಈ ದೂರಿನಲ್ಲಿ ತೋರಿಸಿರುವ ಯಾವುದೇ ಅಂಶದಲ್ಲಿ ಕಿಂಚಿತ್ತೂ ಹುರುಳಿಲ್ಲ ಎಂಬುದನ್ನು ಮಾನ್ಯ ಲೋಕಾಯುಕ್ತರಿಗೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ವಿರುದ್ಧದ ಲೋಕಾಯುಕ್ತ ದೂರು ಶುದ್ಧ ಹಾಸ್ಯಾಸ್ಪದ, ರಾಜಕೀಯ ಪಿತೂರಿ; ಬಿಜೆಪಿ ಶಾಸಕ ಸುರೇಶ್ ಕುಮಾರ್
‘ಆರೋಪಕ್ಕೆ ಒಂದು ಪುರಾವೆಯನ್ನೂ ಕೊಟ್ಟಿಲ್ಲ’
ಯಾರೋ ಬೇನಾಮಿ ಗುತ್ತಿಗೆದಾರರಿಗೆ ಸಹಾಯ ಮಾಡಿದ್ದೇನೆ ಮತ್ತು ನಗರ ಪಾಲಿಕೆಗೆ 300 ಕೋಟಿ ರೂ. ನಷ್ಟ ಉಂಟಾಗುವಂತೆ ಮಾಡಿದ್ದೇನೆ ಎಂಬ ಹಸಿ ಸುಳ್ಳಿನಿಂದ ಕೂಡಿರುವ ಆರೋಪವನ್ನು ಸಂಪೂರ್ಣವಾಗಿ ತಾನು ಅಲ್ಲಗೆಳೆದಿದ್ದು, ಆರೋಪ ಮಾಡಿರುವವರು ಆ ಸಂಬಂಧ ಒಂದೇ ಒಂದು ಪುರಾವೆಯನ್ನೂ ಒದಗಿಸಿರುವುದಿಲ್ಲ. ತನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ, ಗುತ್ತಿಗೆ ವಿಚಾರದಲ್ಲಾಗಲಿ ಅಥವಾ ಇನ್ಯಾವುದೇ ಕಾರ್ಯದಲ್ಲಾಗಲಿ , ಕಾನೂನುಬಾಹಿರವಾಗಿ ನಿಯಮ ಉಲ್ಲಂಘಿಸಿ ಕಾರ್ಯವೆಸಗಿಲ್ಲ ಎಂದೂ ಸಹ ಉತ್ತರದಲ್ಲಿ ತಿಳಿಸಿರೋದಾಗಿ ಶಾಸಕರು ಹೇಳಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ತೆಗೆದುಕೊಂಡು ಕಾಮಗಾರಿ ಮಾಡದೆ ಬಿಲ್ ಪಡೆದಿರುವ, ಒಂದೊಮ್ಮೆ ಕಾಮಗಾರಿ ಮಾಡಿದ್ದರೂ ಸೂಚಿತ ಗುಣಮಟ್ಟದ ಮತ್ತು ಸೂಚಿತ ಪ್ರಮಾಣದ ಕಾರ್ಯ ಮಾಡದೆ ಅನೇಕ ಪ್ರಮಾದಗಳನ್ನು ಎಸಗಿರುವ ಗುತ್ತಿಗೆದಾರನ ಪರವಾಗಿ ತನ್ನ ವಿರುದ್ಧ ಈ ದೂರು ಸಲ್ಲಿಸಲಾಗಿದೆ ಎಂಬ ಬಗ್ಗೆಯೂ ಲೋಕಾಯುಕ್ತರ ಗಮನಕ್ಕೆ ತಂದಿದ್ದೇನೆ. ಇದೊಂದು ಶುದ್ಧ ರಾಜಕೀಯ ಪ್ರೇರಿತ ದೂರು. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದೇ ಈ ಸುಳ್ಳು ದೂರಿನ ಉದ್ದೇಶ ಎಂಬುದು ಸ್ಪಷ್ಟವಾಗಿರೋದಾಗಿ ಸುರೇಶ್ ಕುಮಾರ್ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:33 pm, Wed, 8 July 26




