
ಬೆಂಗಳೂರು, (ಸೆಪ್ಟೆಂಬರ್ 13): ಗ್ರೀನ್, ಯೆಲ್ಲೋ, ಬ್ಲೂ, ಪರ್ಪಲ್ ಬೆನ್ನಲ್ಲೇ ಇದೀಗ ಆರೆಂಜ್ ಲೈನ್ ನಮ್ಮ ಮೆಟ್ರೋ ಕಾಮಗಾರಿಗೆ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಹೌದು..ಜೆ.ಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರ, ಹೊಸಹಳ್ಳಿ ಟು ಕಡಬಗೆರೆ ಮಾರ್ಗದ ಆರೆಂಜ್ ಲೈನ್ ಮೆಟ್ರೋ ಕಾಮಗಾರಿಗೆ ಅಡ್ಡಲಾಗಿದ್ದ ಬಿಲ್ಡಿಂಗ್ ಗಳ ತೆರವು ಮಾಡಲು ಟೆಂಡರ್ ಕರೆಯಲಾಗಿದೆ. ಆರೆಂಜ್ ಲೈನ್ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್ 10ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಆದ್ರೆ, ಕಾಮಗಾರಿ ಮಾತ್ರ ಆರಂಭವಾಗಿರಲಿಲ್ಲ. ರಾಜ್ಯ ಸರ್ಕಾರ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಮೆಟ್ರೋ ಜೊತೆಗೆ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಮುಂದಾಗಿತ್ತು. ಹೀಗಾಗಿ ಕಾಮಗಾರಿ ಪ್ರಾರಂಭವಾಗಿರಲಿಲ್ಲ, ಇದೀಗ ಬಿಎಂಆರ್ಸಿಎಲ್ ಕಾಮಗಾರಿಗೆ ಅಡ್ಡಲಾಗಿದ್ದ ಬಿಲ್ಡಿಂಗ್ ಗಳ ತೆರವು ಮಾಡಲು ಟೆಂಡರ್ ಕರೆದಿದೆ.
ಕಾಮಗಾರಿ ವಿಳಂಬಕ್ಕೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಬಿಎಂಆರ್ಸಿಎಲ್ ನಮ್ಮ ಮೆಟ್ರೋ 3ನೇ ಹಂತದ ಯೋಜನೆಯ ಮಾರ್ಗ ಮಧ್ಯೆ ಬರುವ ಕಟ್ಟಡಗಳು ತೆರವುಗೊಳಿಸುವುದಕ್ಕಾಗಿ 17.57 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ 4 ಪ್ಯಾಕೇಜ್ ಗಳ ಟೆಂಡರ್ ಕರೆದಿದೆ.
ಇನ್ನೂ 44.65 ಕಿ.ಮೀ. ಉದ್ದದ ಫೇಸ್-3 ಯೋಜನೆಯು 2 ಕಾರಿಡಾರ್ಗಳನ್ನು ಒಳಗೊಂಡಿದೆ. ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಉದ್ದದ ಕಾರಿಡಾರ್-1 ನಿರ್ಮಾಣವಾಗಲಿದ್ದು, 22 ಸ್ಟೇಷನ್ ಬರಲಿದೆ. ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ. ಉದ್ದದ ಕಾರಿಡಾರ್-2 ನಿರ್ಮಾಣವಾಗಲಿದ್ದು, 9 ಸ್ಟೇಷನ್ ಇರಲಿವೆ. ಒಟ್ಟು 31 ಎಲಿವೇಟೆಡ್ ಸ್ಟೇಷನ್ ನಿರ್ಮಾಣವಾಗಲಿದೆ.ಯೋಜನೆಯನ್ನು 2032ರೊಳಗೆ ಮುಗಿಸಲು ಪ್ಲ್ಯಾನ್ ಮಾಡಲಾಗಿದೆ.
ಮೊದಲ ಪ್ಯಾಕೇಜ್ಗೆ 4.74 ಕೋಟಿ 2ನೇ ಪ್ಯಾಕೇಜ್ 4.54 ರುಪಾಯಿ 3ನೇ ಪ್ಯಾಕೇಜ್ಗೆ 4.29 ಕೋಟಿ ರುಪಾಯಿ. 4ನೇ ಪ್ಯಾಕೇಜ್ ಗೆ 4 ಕೋಟಿ ರುಪಾಯಿನಿಗದಿಪಡಿಸಲಾಗಿದೆ.ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ತೆರವುಗೊಳಿಸುವುದು ಈ ಕಾಮಗಾರಿಯ ಪ್ರಮುಖ ಉದ್ದೇಶವಾಗಿದೆ.ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಜನ್ರಿಗೆ ಸಂಚಾರ ಮಾಡಲು ಸಾಕಷ್ಟು ಸಹಾಯ ಆಗಲಿದೆ. ಪೀಣ್ಯದಲ್ಲಿರುವ ಸಾವಿರಾರು ಇಂಡಸ್ಟ್ರಿಗಳಿದ್ದು, ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ.
ಒಟ್ನಲ್ಲಿ ಆರೆಂಜ್ ಲೈನ್ ಗೆ ಕಳೆದ ವರ್ಷವೇ ಶಂಕುಸ್ಥಾಪನೆ ಮಾಡಿದ್ರು, ಬಿಎಂಆರ್ಸಿಎಲ್ ಕಾಮಗಾರಿ ಆರಂಭಿಸಿಲ್ಲ ಎಂದು ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದು, ನಂತರವಾದ್ರು ಕಾಮಗಾರಿ ಆರಂಭವಾಗಲಿದೆಯಾ ಎಂದು ಕಾದು ನೋಡಬೇಕಿದೆ.