‘ಒಂದು ಗಂಟೆ ಮಳೆ ಬಂದ್ರೆ 20 ಸಲ ಪವರ್ ಕಟ್ ಮಾಡ್ತಾರೆ’: ಬೆಂಗಳೂರಿನ ಖ್ಯಾತ ಹೃದಯ ತಜ್ಞರ ಎಕ್ಸ್ ಪೋಸ್ಟ್ ವೈರಲ್!
ಬೆಂಗಳೂರಿನಲ್ಲಿ ಒಂದು ಗಂಟೆ ಮಳೆಗೆ 20 ಬಾರಿ ವಿದ್ಯುತ್ ಕಡಿತಗೊಂಡ ಬಗ್ಗೆ ಖ್ಯಾತ ಹೃದಯ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಹಂಚಿಕೊಂಡ X ಪೋಸ್ಟ್ ವೈರಲ್ ಆಗಿದೆ. AI ಬಗ್ಗೆ ಮಾತನಾಡುತ್ತಿದ್ದರೂ, ಮೂಲಭೂತ ವಿದ್ಯುತ್ ಮೂಲಸೌಕರ್ಯವು ಅನಾದಿ ಕಾಲದ್ದಾಗಿದೆ ಎಂದು ಅವರು ಟೀಕಿಸಿದ್ದಾರೆ. ಈ ಪೋಸ್ಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ಬೆಂಗಳೂರಿನ ಮೂಲಭೂತ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ.

ಬೆಂಗಳೂರು, ಮಾರ್ಚ್ 31: ಮಾರ್ಚ್ನಲ್ಲಿ ಬಿಸಿಲಿನ ಬೇಗೆ ಅನುಭವಿಸಿದ ನಿವಾಸಿಗಳಿಗೆ ಭಾನುವಾರ ಸುರಿದ ಸಾಧಾರಣ ಮಳೆಯೊಂದಿಗೆ (weather) ಸ್ವಲ್ಪ ಮಟ್ಟಿಗಿನ ತಂಪಿನ ಅನುಭವ ಸಿಕ್ಕಿತು. ಗುಡುಗು ಸಹಿತ ಮಳೆಯು ನಗರವನ್ನು ತಂಪುಗೊಳಿಸಿದರೂ, ವಿದ್ಯುತ್ ವ್ಯತ್ಯಯ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಈ ಬಗ್ಗೆ ತಮ್ಮ ಅಸಮಾಧಾನ ಹಂಚಿಕೊಂಡ ಬೆಂಗಳೂರಿನ ಖ್ಯಾತ ಹೃದಯ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ, X ಪೋಸ್ಟ್ ಹಂಚಿಕೊಂಡಿದ್ದಾರೆ.
ಪೋಸ್ಟ್ನಲ್ಲೇನಿದೆ?
ಒಂದು ಗಂಟೆಯ ಮಳೆ ಸುರಿದರೆ 20 ಬಾರಿ ವಿದ್ಯುತ್ ಹೋಗಿ ಬಂದಿದೆ ಎಂದು ತಮ್ಮ ಪೋಸ್ಟ್ನಲ್ಲಿ ಬರೆದಿರುವ ದೀಪಕ್, ನಾವು ಕೃತಕ ಬುದ್ಧಿಮತ್ತೆ (AI) ಬಗ್ಗೆ ಮಾತನಾಡುತ್ತೇವೆ, ಆದರೆ ಮೂಲಭೂತ ತಂತ್ರಜ್ಞಾನ ಮತ್ತು ವ್ಯವಸ್ಥೆಗಳು ಇನ್ನೂ ಅನಾದಿಕಾಲದ್ದೇ ಆಗಿದೆ. ಇವು ನಂಬಿಕೆಗೆ ಅರ್ಹವಲ್ಲ ಎಂದು ಟೀಕಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರ ಗಮನ ಸೆಳೆದಿದೆ.
1 hour of rain and the power has gone and come back 20 times. We talk of AI and what not. But basic technology/systems remain ancient and unreliable. #Bengaluru
— Dr Deepak Krishnamurthy (@DrDeepakKrishn1) March 29, 2026
ನೆಟ್ಟಿಗರ ರಿಯಾಕ್ಷನ್ ಏನು?
ಡಾ. ದೀಪಕ್ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡ ಪೋಸ್ಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಮ್ಮದೇ ಅನುಭವಗಳನ್ನು ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ಒಬ್ಬ ಬಳಕೆದಾರ, ಬೆಂಗಳೂರುದಲ್ಲಿ BESCOM ಅತ್ಯುತ್ತಮ ಸೇವೆ ನೀಡುತ್ತದೆ. ನಮ್ಮ ಪ್ರದೇಶದಲ್ಲಿ ಸಮಸ್ಯೆ ತಿಳಿಸಿದ ಕೂಡಲೇ, ಮಧ್ಯರಾತ್ರಿಯಲ್ಲಿಯೂ ಪರಿಹಾರ ಕೊಡುತ್ತಾರೆ ಎಂದು ಬರೆದು ವಿದ್ಯುತ್ ಇಲಾಖೆ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬರು, ಭಾರತದ ಅತ್ಯಂತ ಓವರ್ಹೈಪ್ ಆಗಿರುವ ನಗರ ಬೆಂಗಳೂರು. ಹೊರಗಿನವರು ಇದನ್ನು ತಂತ್ರಜ್ಞಾನದ ನಗರ ಎಂದು ಮಾತ್ರ ನೋಡುತ್ತಾರೆ. ಆದರೆ ಇದರ ಇನ್ನೊಂದು ಮುಖವನ್ನೂ ನೋಡಬೇಕು ಎಂದು ಟೀಕಿಸಿದ್ದಾರೆ.
ಒಬ್ಬ ಬಳಕೆದಾರ ಅತ್ಯಂತ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ನಾವು ಎಐ ಬಳಸಿ ಮಳೆಯ ಹನಿಗಳನ್ನು ಗಾಳಿಯಲ್ಲೇ ಪತ್ತೆಹಚ್ಚಿ, ನೆಲಕ್ಕೆ ಬೀಳುವ ಮುನ್ನವೇ ವಿದ್ಯುತ್ ಕಡಿತ ಮಾಡುತ್ತೇವೆ ಎಂದು ಇಲಾಖೆಯ ಕಾಲೆಳೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:03 pm, Tue, 31 March 26
