ಆಲೂಗಡ್ಡೆ ಚಿಪ್ಸ್ ಪ್ರಿಯರೇ ಹುಷಾರ್: ಕೊಳೆತ ಆಲೂಗಡ್ಡೆ, ಗಲೀಜು ನೀರಿಂದ ಚಿಪ್ಸ್ ತಯಾರಿ
ದೇವನಹಳ್ಳಿ, ವಿಜಯಪುರದ 'ಶ್ರೀಸಾಯಿರಾಮ್ ಹಾಟ್ ಚಿಪ್ಸ್' ಬೇಕರಿಯಲ್ಲಿ ಕೊಳೆತ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿ ಚಿಪ್ಸ್ ತಯಾರಿಸುತ್ತಿದ್ದ ಆಘಾತಕಾರಿ ಕೃತ್ಯ ಬಯಲಾಗಿದೆ. ಚಿಪ್ಸ್ ತಿಂದ ಮಕ್ಕಳು ತೀವ್ರ ಕೆಮ್ಮಿಗೆ ಒಳಗಾಗಿ ಅಸ್ವಸ್ಥರಾಗಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಅಧಿಕಾರಿಗಳು ತಕ್ಷಣವೇ ಬೇಕರಿಯನ್ನು ಸೀಜ್ ಮಾಡಿ, ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಆಹಾರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮುಖ್ಯಾಂಶಗಳು
- ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಒಂದು ಆಘಾತಕಾರಿ ಘಟನೆ
- ಸಾರ್ವಜನಿಕರ ಕಣ್ಣೆದುರೇ ಕೊಳೆತ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿ ಚಿಪ್ಸ್
- ವಿಜಯಪುರ ಪಟ್ಟಣದ 'ಶ್ರೀಸಾಯಿರಾಮ್ ಹಾಟ್ ಚಿಪ್ಸ್' ಬೇಕರಿಯಲ್ಲಿ ಈ ಘಟನೆ ನಡೆದಿದೆ
ದೇವನಹಳ್ಳಿ, ಜು.15: ನೀವು ಬೇಕರಿಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಆಲೂಗಡ್ಡೆ ಚಿಪ್ಸ್ ಎಷ್ಟು ಸುರಕ್ಷಿತ ಗೊತ್ತಾ? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಸ್ತೆ ಬದಿಯ ಬೇಕರಿಯೊಂದರಲ್ಲಿ ಸಾರ್ವಜನಿಕರ ಕಣ್ಣೆದುರೇ ಕೊಳೆತ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿ ಚಿಪ್ಸ್ ತಯಾರಿಸುತ್ತಿದ್ದ ಕೃತ್ಯ ಬಯಲಾಗಿದ್ದು, ಅಧಿಕಾರಿಗಳು ತಕ್ಷಣವೇ ಬೇಕರಿಯನ್ನು ಸೀಜ್ ಮಾಡಿದ್ದಾರೆ.
ವಿಜಯಪುರ ಪಟ್ಟಣದ ‘ಶ್ರೀಸಾಯಿರಾಮ್ ಹಾಟ್ ಚಿಪ್ಸ್’ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಯಾದ ವೆಂಕಟೇಶ್ ಎಂಬ ವ್ಯಕ್ತಿ ತಮ್ಮ ಮಕ್ಕಳಿಗೆ ಇಷ್ಟ ಎಂದು ಈ ಬೇಕರಿಯಲ್ಲಿ ಆಲೂಗಡ್ಡೆ ಚಿಪ್ಸ್ ಖರೀದಿಸಿದ್ದರು. ಆದರೆ, ರಾತ್ರಿ ಈ ಚಿಪ್ಸ್ ತಿಂದಿದ್ದ ಮನೆಯ ಮಕ್ಕಳಿಗೆ ಬೆಳಗಾಗುವಷ್ಟರಲ್ಲಿ ತೀವ್ರವಾದ ಕೆಮ್ಮು ಕಾಣಿಸಿಕೊಂಡಿದೆ.
ಇಲ್ಲಿದೆ ನೋಡಿ ವಿಡಿಯೋ:
ಮಕ್ಕಳಿಗೆ ದಿಢೀರನೆ ಕೆಮ್ಮು ಬರಲು ಕಾರಣವೇನು ಎಂದು ವೆಂಕಟೇಶ್ ಅವರು ಚಿಪ್ಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ಕಪ್ಪು ಚುಕ್ಕೆಗಳು ಇರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ಬೇಕರಿಗೆ ಬಂದು ಪರಿಶೀಲಿಸಿದಾಗ ಚಿಪ್ಸ್ ತಯಾರಿಯ ಅಸಲಿ ಕರಾಳ ಮುಖ ಕಣ್ಣಿಗೆ ಬಿದ್ದಿದೆ.
ಇದನ್ನೂ ಓದಿ: ಜಿಬಿಎ ಸ್ಟಿಕ್ಕರ್ ಭೀತಿಗೆ ಗಲ್ಲಿ ಸೇರಿದ ಕಾರುಗಳು: ಕುಮಾರಸ್ವಾಮಿ ಲೇಔಟ್ನಲ್ಲಿ ಅಕ್ರಮ ಪಾರ್ಕಿಂಗ್ ಹಾವಳಿ
ಗಲೀಜು ನೀರಿನಲ್ಲಿ ತಯಾರಿ; ಅಧಿಕಾರಿಗಳಿಂದ ಬೇಕರಿ ಸೀಜ್:
ಬೇಕರಿಯ ಒಳಗಡೆ ಅತ್ಯಂತ ಅಸಹ್ಯಕರ ವಾತಾವರಣದಲ್ಲಿ, ಕೊಳೆತು ನಾರುತ್ತಿದ್ದ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿಕೊಂಡು ಚಿಪ್ಸ್ ತಯಾರಿಸುತ್ತಿರುವುದು ಕಂಡುಬಂದಿದೆ. ಇದನ್ನು ನೋಡಿ ತೀವ್ರ ಆಕ್ರೋಶಗೊಂಡ ಸಾರ್ವಜನಿಕರು ತಕ್ಷಣವೇ ಚಿಪ್ಸ್ ಅಂಗಡಿಯ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಬೇಕರಿ ವಿರುದ್ಧ ಸ್ಥಳೀಯರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲೇ ಕೊಳೆತ ಆಲೂಗಡ್ಡೆಯಿಂದ ತಯಾರಾಗಿದ್ದ ಚಿಪ್ಸ್ನ ಸ್ಯಾಂಪಲ್ಗಳನ್ನು ಹೆಚ್ಚಿನ ತಪಾಸಣೆಗಾಗಿ ಲ್ಯಾಬ್ಗೆ ರವಾನಿಸಿದ್ದಾರೆ. ಜೊತೆಗೆ, ಅಂಗಡಿಯ ಮಾಲೀಕನಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿ, ಬೇಕರಿಯನ್ನು ಸಂಪೂರ್ಣವಾಗಿ ಸೀಜ್ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:24 am, Wed, 15 July 26



