ಗಾಳಿ ಆಂಜನೇಯ ಸ್ವಾಮಿ ರಥೋತ್ಸವ: ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
Bengaluru Traffic Advisory; ಬೆಂಗಳೂರಿನ ಪ್ರಸಿದ್ಧ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ಮಾರ್ಚ್ 27 ರಿಂದ 29 ರವರೆಗೆ ಮೈಸೂರು ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಮಾರ್ಪಾಡು ಮಾಡಲಾಗಿದೆ. ಮಜೆಸ್ಟಿಕ್, ಸಿಟಿ ಮಾರ್ಕೆಟ್ ಮತ್ತು ಕೆಂಗೇರಿ ಕಡೆಯಿಂದ ಬರುವ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದ್ದು, ಪ್ರಯಾಣದ ಮೊದಲು ಪೊಲೀಸರ ಈ ಮಾರ್ಗಸೂಚಿಯನ್ನು ತಪ್ಪದೇ ಗಮನಿಸಿ.

ಬೆಂಗಳೂರು, ಮಾರ್ಚ್ 27: ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ (Gali Anjaneya Swamy Temple) ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವವು ಮಾರ್ಚ್ 27 ರಿಂದ ಮಾರ್ಚ್ 29 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಮೈಸೂರು ರಸ್ತೆಯಲ್ಲಿ (Mysore Road) ಸಂಚಾರ ದಟ್ಟಣೆ ತಪ್ಪಿಸಲು ಬೆಂಗಳೂರು ಸಂಚಾರಿ ಪೊಲೀಸರು ಮಹತ್ವದ ಸಂಚಾರ ಮಾರ್ಪಾಡುಗಳನ್ನು ಮಾಡಿದ್ದಾರೆ.
ಸಂಚಾರ ನಿರ್ಬಂಧ ಎಲ್ಲೆಲ್ಲಿ?
- ಮಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ: ಮೈಸೂರು ರಸ್ತೆ ಮುಖಾಂತರ ಕೆಂಗೇರಿ ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳನ್ನು ಹೊಸಗುಡ್ಡದಹಳ್ಳಿ ಜಂಕ್ಷನ್ನಿಂದ ಕಿಂಕೋ ಜಂಕ್ಷನ್ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
- ಭಾರೀ ವಾಹನಗಳಿಗೆ ಸೂಚನೆ: ಕೆಂಗೇರಿ ಕಡೆಯಿಂದ ನಗರಕ್ಕೆ ಪ್ರವೇಶಿಸುವ ಭಾರೀ ವಾಹನಗಳನ್ನು ಹೊರತುಪಡಿಸಿ, ಉಳಿದ ವಾಹನಗಳಿಗೆ ಎಂದಿನಂತೆ ಸಂಚರಿಸಲು ಅವಕಾಶ ನೀಡಲಾಗಿದೆ.
ಮಾರ್ಚ್ 27ರ ಬೆಳಿಗ್ಗೆ 07 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಈ ಸಂಚಾರ ನಿರ್ಬಂಧಗಳು ಜಾರಿಯಲ್ಲಿರುತ್ತವೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು
- ಮಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ನಿಂದ ಮೈಸೂರು ರಸ್ತೆ ಕಡೆಗೆ ಹೋಗುವವರು ಹೊಸಗುಡ್ಡದಹಳ್ಳಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಅವಲಹಳ್ಳಿ ಮುಖ್ಯ ರಸ್ತೆ ಮೂಲಕ ಬೆಂಗಳೂರು ಒನ್ ಜಂಕ್ಷನ್ ತಲುಪಬೇಕು. ಅಲ್ಲಿಂದ ಎಡ ತಿರುವು ಪಡೆದು ಕೆ.ಇ.ಬಿ. ಜಂಕ್ಷನ್ ಬಳಿ ಬಲ ತಿರುವು ಪಡೆದು ಪಿ.ಇ.ಎಸ್.ಐ.ಟಿ. ಕಾಲೇಜು (ದೇವೇಗೌಡ ಸರ್ಕಲ್) ಮುಖಾಂತರ ನಾಯಂಡಹಳ್ಳಿ ಹತ್ತಿರ ಮೈಸೂರು ರಸ್ತೆಯನ್ನು ಸೇರಬಹುದು.
- ಮೈಸೂರು ರಸ್ತೆ ಮೇಲ್ಸೇತುವೆ ಬಳಸುವ ಸರಕು ವಾಹನಗಳು ಮೈಸೂರು ರಸ್ತೆ ವೆಟನರಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಗುಡ್ ಶೆಡ್ ರಸ್ತೆ ಮೂಲಕ ಶಾಂತಲಾ ಜಂಕ್ಷನ್ – ಕೋಡೆ ಸರ್ಕಲ್ – ಲುಲು ಮಾಲ್ – ಹುಣಸೇಮರ ಜಂಕ್ಷನ್ ಮೂಲಕ ಮಾಗಡಿ ರಸ್ತೆಯತ್ತ ಸಂಚರಿಸಬಹುದು.
- ಕೆಂಗೇರಿ ಕಡೆಯಿಂದ ನಗರಕ್ಕೆ ಪ್ರವೇಶಿಸುವವರು (ಮಾರ್ಚ್ 28-29ರ ವಿಶೇಷ ಸೂಚನೆ) ನಾಯಂಡಹಳ್ಳಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ನಾಗರಭಾವಿ ಜಂಕ್ಷನ್ ಹತ್ತಿರ ಬಲ ತಿರುವು ಪಡೆಯಬೇಕು. ಚಂದ್ರಾ ಲೇಔಟ್ 80 ಅಡಿ ರಸ್ತೆಯಲ್ಲಿ ಚಲಿಸಿ ವೆಸ್ಟ್ ಆಫ್ ಕಾರ್ಡ್ ರಸ್ತೆ ಮುಖಾಂತರ ಎಂ.ಸಿ. ಸರ್ಕಲ್ ತಲುಪಿ ಮಾಗಡಿ ರಸ್ತೆ ಸೇರಬಹುದು.
ಬೆಂಗಳೂರು ಸಂಚಾರಿ ಪೊಲೀಸ್ ಎಕ್ಸ್ ಸಂದೇಶ
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) March 26, 2026
ಸಾರ್ವಜನಿಕರಿಗೆ ಸಂಚಾರಿ ಪೊಲೀಸರ ಮನವಿ
ರಥೋತ್ಸವದ ಸಮಯದಲ್ಲಿ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಹಾಗೂ ಅನಿವಾರ್ಯವಿದ್ದಲ್ಲಿ ಮಾತ್ರ ಈ ರಸ್ತೆಯನ್ನು ಬಳಸುವಂತೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಮೈಸೂರು ರಸ್ತೆಯಲ್ಲಿ ಸಂಚರಿಸುವ ಮುನ್ನ ಗೂಗಲ್ ಮ್ಯಾಪ್ ಅಥವಾ ಸಂಚಾರಿ ಪೊಲೀಸರ ಅಧಿಕೃತ ಸೂಚನೆಗಳನ್ನು ಗಮನಿಸುವುದು ಉತ್ತಮ.
ಮಾರತ್ತಹಳ್ಳಿ ಬ್ರಿಡ್ಜ್ನಲ್ಲೂ ಸಂಚಾರ ಬದಲಾವಣೆ
ಮಾರತ್ತಹಳ್ಳಿ ಬ್ರಿಡ್ಜ್ ಮೇಲೆ ಮೆಟ್ರೋ ಕಾಮಗಾರಿ ಹಿನ್ನೆಲೆ ಮಾರ್ಚ್ 27 ರಿಂದ ಇಂದಿನಿಂದ 3 ದಿನಗಳ ಕಾಲ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ರಾತ್ರಿ 12ರಿಂದ ಮುಂಜಾನೆ 3 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದ್ದು, HAL ಕಡೆಯಿಂದ ವರ್ತೂರು ಮುಖ್ಯರಸ್ತೆ, ಮಾರತ್ತಹಳ್ಳಿ ಬ್ರಿಡ್ಜ್ ಮೂಲಕ ವರ್ತೂರು, ವೈಟ್ ಫೀಲ್ಡ್ ಕಡೆ ಹೋಗುವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಯಿಂದ ವರ್ತೂರು ಮುಖ್ಯರಸ್ತೆ, ಮಾರತ್ತಹಳ್ಳಿ ಬ್ರಿಡ್ಜ್ ಮೂಲಕ HAL ಕಡೆಗೂ ಸಂಚಾರ ನಿರ್ಬಂಧ ಮಾಡಲಾಗಿದೆ. ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.
