ಬೆಂಗಳೂರಿನ ಹೋಟೆಲ್ ಸಪ್ಲೈಯರ್ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆ: ಸ್ಫೋಟಕ್ಕೆ ನಡೆದಿತ್ತಾ ಸಂಚು..?
ಬೆಂಗಳೂರಿನ ಹೋಟೆಲ್ವೊಂದರ ಸಪ್ಲೈಯರ್ ಬ್ಯಾಗ್ನಲ್ಲಿ ಸ್ಫೋಟಕ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಹೋಟೆಲ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದಾಗ ಗ್ರೆನೇಡ್ ಪತ್ತೆಯಾಗಿದ್ದು, ಕೂಡಲೇ ಸಪ್ಲೈಯರ್ನನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಿಸಿದ್ದಾರೆ. ಹಾಗಾದ್ರೆ, ಯಾರು ಆ ಸಪ್ಲೈಯರ್? ಹೋಟೆಲ್ ಸಿಬ್ಬಂದಿ ಗ್ರನೇಡ್ ಪತ್ತೆ ಮಾಡಿದ್ಹೇಗೆ ಎನ್ನುವ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಮಾರ್ಚ್ 21): ಇಲ್ಲಿನ ಸಂಪೀಗೆಹಳ್ಳಿ (Sampigehalli) ಠಾಣೆ ವ್ಯಾಪ್ತಿಯ ಹೋಟೆಲ್ವೊಂದ ಸಪ್ಲೈಯರ್ ಬ್ಯಾಗ್ನಲ್ಲಿ ಸ್ಫೋಟಕ ಹ್ಯಾಂಡ್ ಗ್ರೆನೇಡ್ (Hand Grenade) ಪತ್ತೆಯಾಗಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಬಳಿಯ ಬೆಳ್ಳಳ್ಳಿಯ ಅಬ್ದುಲ್ ರೆಹಮಾನ್ ಎನ್ನುವಾತನ ಬ್ಯಾಗ್ನಲ್ಲಿ ಹ್ಯಾಂಡ್ ಗ್ರನೇಡ್ ಸಿಕ್ಕಿದೆ. ಹೋಟೆಲ್ ಸಿಬ್ಬಂದಿಯೊಬ್ಬರು, ಆಧಾರ್ ಕಾರ್ಡ್ಗಾಗಿ ಅಬ್ದುಲ್ ರೆಹಮಾನ್ನ ಬ್ಯಾಗ್ ಪರಿಶೀಲಿಸಿದಾಗ ಗ್ರೇನೆಡ್ ಪತ್ತೆಯಾಗಿದೆ. ಕೂಡಲೇ ಹೋಟೆಲ್ನವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಸಂಪೀಗೆಹಳ್ಳಿ ಪೊಲೀಸರು ಮೊದಲಿಗೆ ಹೋಟೆಲ್ನವರಿಂದ ಮಾಹಿತಿ ಪಡೆದುಕೊಂಡು ನಂತರ ರೆಹಮಾನ್ ಬ್ಯಾಗ್ ಚೆಕ್ ಮಾಡಿದಾಗ ಹ್ಯಾಂಡ್ ಗ್ರನೇಡ್ ಕಂಡುಬಂದಿದೆ.
ಸದ್ಯ ಅಬ್ದುಲ್ ರೆಹಮಾನ್ ಹಾಗೂ ಈತನ ಬ್ಯಾಗ್ನಲ್ಲಿ ಸಿಕ್ಕ ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಂಬ್ ಮಾದರಿಯ ಸ್ಫೋಟಕವನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ. ಮತ್ತೊಂದೆಡೆ ಕೋಗಿಕ್ರಾಸ್ ಬಳಿಯ ಬೆಳ್ಳಳ್ಳಿಯ ನಿವಾಸಿಯಾಗಿರುವ ಅಬ್ಧುಲ್ ರೆಹಮಾನ್ ನನ್ನು ಪೊಲೀಸರು ತೀವ್ರ ವಿಚಾರಣೆಗೊಳೊಡಿಸಿದ್ದಾರೆ.
ಇದನ್ನೂ ಓದಿ: ಭೂಮಿ ಮೇಲೆ ಆಕಾಶದ ಕೆಳಗಿದ್ದೇನೆ, ತಾಕತ್ ಇದ್ರೆ ಹುಡುಕಿ: ಕುಡುಕನ ಸವಾಲು, ಶೃಂಗೇರಿ ಪೊಲೀಸರು ಕಂಗಾಲು!
ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ಹೇಗೆ?
ಅಬ್ದುಲ್ ರೆಹಮಾನ್ ತಾನು ಬೆಳ್ಳಹಳ್ಳಿಯ ನಿವಾಸಿ ಎಂದು ಹೇಳಿಕೊಂಡು ವೈಭವ್ ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಬಳಿಕ ಹೋಟೆಲ್ನವರು ಆಧಾರ್ ಕಾರ್ಡ್ ಕೇಳಿದ್ದಾರೆ. ಆದ್ರೆ ಆತ ಕಾರ್ಡ್ ಕೇಳಿದಾಗ ಕೊಟ್ಟಿಲ್ಲ. ಎರಡು ದಿನಗಳು ಕಳೆದರೂ ಸಹ ಆಧಾರ್ ಕಾರ್ಡ್ ಕೊಟ್ಟಿಲ್ಲ. ಇದರಿಂದ ಹೋಟೆಲ್ ಸಿಬ್ಬಂದಿಯೊಬ್ಬರು ಶೆಡ್ನಲ್ಲಿದ್ದ ರೆಹಮಾನ್ನ ಬ್ಯಾಗ್ ಚೆಕ್ ಮಾಡಿದಾಗ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದೆ. ಇದರಿಂದ ಬೆಚ್ಚಿಬಿದ್ದ ಸಿಬ್ಬಂದಿ ಕೂಡಲೇ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧರಿಸಿ ಸ್ಥಳಕ್ಕೆ ಸಂಪಿಗೆಹಳ್ಳಿ ಪಿಎಸ್ಐ ದೌಡಾಯಿಸಿ ಮೊದಲು ಹೋಟೆಲ್ ಮಾಲೀಕರ ಬಳಿ ಮಾಹಿತಿ ಪಡೆದುಕೊಂಡು ಬಳಿಕ ರೆಹಮಾನ್ ಬ್ಯಾಗ್ ಪರಿಶೀಲನೆ ಮಾಡಿದಾಗ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಆ ತಕ್ಷಣವೇ ಅಬ್ದುಲ್ ರೆಹಮಾನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲಿಯೋ ಸಿಕ್ಕಿತ್ತು. ಬಾಂಬ್ ಮಾದರಿಯ ವಸ್ತು ರಸ್ತೆಯಲ್ಲಿ ಸಿಕ್ಕಿತ್ತು ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಆದರೂ ಬಿಡದ ಸಂಪಿಗೆಹಳ್ಳಿ ಪೊಲೀಸರು ಅಬ್ದುಲ್ ರೆಹಮಾನ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ಗ್ರೆನೇಡ್ ಎಲ್ಲಿ ಇತ್ತು? ಅದು ಹೇಗೆ ಸಿಕ್ತು? ಅದನ್ನ ಏಕೆ ತಗೆದುಕೊಂಡುಬಂದಿದ್ದು? ಏನಾದರೂ ಬ್ಲಾಸ್ಟ್ ಮಾಡುವ ಪ್ಲ್ಯಾನ್ ಏನಾದರೂ ಇತ್ತಾ? ಹೀಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಪೂರ್ವ ವಿಭಾಗ ಜಂಟಿ ಪೊಲೀಸ್ ಆಯುಕ್ತ ಹೇಳಿದ್ದಿಷ್ಟು
ಈ ಬಗ್ಗೆ ಪೂರ್ವ ವಿಭಾಗ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿ, ಟನ್ನಿಸ್ ಬಾಲ್ ಮಾದರಿಯ ವಸ್ತುವಿನಲ್ಲಿ ಕೆಮಿಕಲ್ ತುಂಬಿಸಲಾಗಿತ್ತು. ಅದಕ್ಕೆ ಎರಡು ಬತ್ತಿಗಳನ್ನ ಜೋಡಿಸಲಾಗಿತ್ತು. ಸುರಕ್ಷಿತ ಸ್ಥಳದಲ್ಲಿ ಈ ವಸ್ತುವನ್ನ ಡಿಸ್ಪೋಸ್ ಮಾಡಿದ್ದಾರೆ. ಹಾಗೇ ಆ ವಸ್ತುವಿನಲ್ಲಿ ಕೆಮಿಕಲ್ ಸಂಗ್ರಹಿಸಿ ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪಿ ಬಳಿ ಯಾವುದೇ ಮೊಬೈಲ್ ಇಲ್ಲ. ಸ್ಥಳೀಯ ಹುಡುಗನಾಗಿರುವ 23 ವರ್ಷದ ಅಬ್ದುಲ್ ರೆಹಮಾನ್ ಇದುವರೆಗೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿಲ್ಲ. ಸದ್ಯ ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಪೂರ್ವ ವಿಭಾಗ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.
Published On - 2:36 pm, Fri, 21 March 25