Bangalore Rain: ಬೆಂಗಳೂರಿನಲ್ಲಿ ಮುಂದಿನ 12 ಗಂಟೆ ಭಾರಿ ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆಯಾಗಿದ್ದು, ಸಂಚಾರ ದಟ್ಟಣೆ ಮತ್ತು ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಮುಂದಿನ 12 ಗಂಟೆಗಳಲ್ಲಿ ಭಾರಿ ಮಳೆಯಾಗುವುದಾಗಿ ಎಚ್ಚರಿಸಿದೆ. ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸುರಕ್ಷಿತವಾಗಿರಲು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಬೆಂಗಳೂರು, ಮೇ 18: ಬೆಂಗಳೂರು (Bengaluru) ನಗರದ ಹಲವೆಡೆ ಮತ್ತೆ ಮಳೆಯಾಗುತ್ತಿದೆ (Rain). ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್ ವೃತ್ತ, ಮಾರ್ಕೆಟ್, ಮೆಜೆಸ್ಟಿಕ್, ಜಯನಗರ, ಚಾಮರಾಜಪೇಟೆ, ವಿಜಯನಗರ, ಚಂದ್ರಾಲೇಔಟ್ ಹಾಗೂ ರಾಜಾಜಿನಗರ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಆರ್.ಆರ್. ನಗರ, ನಾಯಂಡಹಳ್ಳಿ, ಬಿಟಿಎಮ್ ಲೇಔಟ್, ಯಶವಂತಪುರ, ಪೀಣ್ಯ ಮೈಕೋ ಲೇಔಟ್ ಮತ್ತು ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಬೆಂಗಳೂರು ನಗರ ಜಿಲ್ಲೆಯ 8 ವಲಯದಲ್ಲೂ ಮುಂದಿನ 12 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದೆ. ಇನ್ನು, ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಗ್ರಾಮಾಂತರ, ಯಾದಗಿರಿ, ಚಿಕ್ಕಬಳ್ಳಾಪುರ, ರಾಮನಗರ, ಉತ್ತರ ಕನ್ನಡ, ಕೊಡಗು, ಧಾರವಾಡ, ರಾಯಚೂರು, ಕಲಬುರಗಿ, ಬೀದರ್, ಬಾಗಲಕೋಟೆ, ಗದಗ, ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.
30-40 ಕಿಮೀ ವೇಗದಲ್ಲಿ ಬಿರುಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ವಾಗಲಿದೆ. ಸಂಚಾರ ದಟ್ಟಣೆ ಉಂಟಾಗಲಿದೆ. ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಸಂಚಾರ ದಟ್ಟಣೆ
ಬೆಂಗಳೂರಿನ ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತಿರುವುದರಿಂದ ನಿಧಾನವಾಗಿ ಸಂಚರಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಕೆಆರ್ ಮಾರುಕಟ್ಟೆ ಮೇಲ್ಸೇತುವೆ, ಮೈಸೂರು ರಸ್ತೆಯ ಟೋಲ್ಗೇಟ್ನಿಂದ ಹಳೆ ಗುಡ್ಡದಹಳ್ಳಿ ಕಡೆಗೆ, ಆರ್ವಿ ಟೀಚರ್ಸ್ ಜಂಕ್ಷನ್ನಿಂದ ಅಶೋಕ ಅಶೋಕ ಪಿಲ್ಲರ್ದ ಕಡೆಗೆ, ಅನಿಲ್ ಕುಂಬ್ಳೆ ಜಂಕ್ಷನ್ನಿಂದ ಬಿಆರ್ವಿ ಜಂಕ್ಷನ್ ಕಡೆಗೆ ಮತ್ತು ಬೇಲಿಮಠಯಿಂದ ಜುಂಕ್ಷನ್ ಬಿನ್ನಿಮಿಲ್ ಕಡೆಗೆ ನಿಧಾನವಾಗಿ ಸಂಚರಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್ ತಿಳಿಸಿದೆ.
ಟ್ವಿಟರ್ ಪೋಸ್ಟ್
ಈ ಕೆಳಕಂಡ ಸ್ಥಳಗಳಲ್ಲಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ. 1.ಮಾರ್ಕೆಟ್ ಫ್ಲೈಓವರ್ ಡೌನ್ರಾಂಪ್ ಮತ್ತು ಅಪ್ಪರ್ ರ್ಯಾಂಪ್ ನಿಂದ ನಗರದ ಕಡೆಗೆ 2.ಮೈಸೂರು ರಸ್ತೆ ಟೋಲ್ ಗೇಟ್ ನಿಂದ ಹಳೇ ಗುಡ್ಡದಹಳ್ಳಿ ಕಡೆಗೆ 3.R V ಟೀಚರ್ಸ್ ಕಾಲೋನಿಯಿಂದ ಅಶೋಕ ಸ್ತಂಭದ ಕಡೆಗೆ
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 18, 2025
ಮಳೆ ಮುನ್ಸೂಚನೆ
ಮೇ 21ರಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ವಿಪರೀತ ಮಳೆ ಸುರಿಯಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದು ಮತ್ತು ನಾಳೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.




