AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗೆ ಇರುವ ನಿರ್ಬಂಧ ತೆರವು: ಮುಖ್ಯಮಂತ್ರಿ ಭರವಸೆ

ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗೆ ಇರುವ ನಿರ್ಬಂಧ ತೆರವು: ಮುಖ್ಯಮಂತ್ರಿ ಭರವಸೆ
ವಿಧಾನಸೌಧ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Sep 23, 2021 | 7:44 PM

Share

ಬೆಂಗಳೂರು: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತು ಗುರುವಾರ ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಚರ್ಚೆಯ ವೇಳೆ ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಸಮಸ್ಯೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಕಿ ಇರುವ ಎರಡು ಸಾವಿರ ಕೋಟಿ ರೂಪಾಯಿ ಹಣವನ್ನು ಇದೇ ವರ್ಷ ಬಿಡುಗಡೆ ಮಾಡಲಾಗುವುದು. ಹಣವನ್ನು ನಿಯಮಿತ ಅವಧಿಯಲ್ಲಿ ಸರಿಯಾದ ರೀತಿಯಲ್ಲಿ ಖರ್ಚು ಮಾಡಬೇಕು ಎಂದು ನುಡಿದರು.

ಹಣವು ಸರಿಯಾದ ರೀತಿಯಲ್ಲಿ ಖರ್ಚಾಗಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗ ನೇಮಕಾತಿಗೆ ಇರುವ ನಿರ್ಬಂಧ ತೆರವುಗೊಳಿಸುತ್ತೇವೆ. ಕೊರೊನಾ ಹಿನ್ನೆಲೆಯಲ್ಲಿ ನೇಮಕಾತಿಗೆ ನಿರ್ಬಂಧ ವಿಧಿಸಲಾಗಿತ್ತು ಎಂದು ನೆನಪಿಸಿಕೊಂಡರು. ಮುಂದಿನ 10 ದಿನಗಳೊಳಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸುತ್ತೇವೆ. ಮಂಡಳಿಗೆ ಕಾರ್ಯದರ್ಶಿ ಹಾಗೂ ಎಂಜಿನಿಯರ್ ನೇಮಕಕ್ಕೂ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಜವಳಿ ಪಾರ್ಕ್, ಐಟಿ ಪಾರ್ಕ್ ಮರು ಆರಂಭಕ್ಕೆ ಸೂಚನೆ ನೀಡುವ ಜೊತೆಗೆ 371ಜೆ ಆಶೋತ್ತರ ಪೂರ್ಣಗೊಳಿಸುತ್ತೇವೆ. ಆ ಭಾಗದ ಜನರಿಗೆ ಆತ್ಮವಿಶ್ವಾಸ ಬರುವಂತೆ ಕೆಲಸ ಮಾಡುತ್ತೇವೆ. ಕಲ್ಯಾಣ ಕರ್ನಾಟಕವನ್ನು ನಿಜವಾದ ಅರ್ಥದಲ್ಲಿ ನನಸು ಮಾಡಲು ಪ್ರಯತ್ನಿಸುತ್ತೇವೆ ಎಂದರು.

ಸಿದ್ದರಾಮಯ್ಯ ಒತ್ತಾಯ ಇದಕ್ಕೂ ಮುನ್ನ ನಿಯಮ 69ರಡಿ ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಚರ್ಚೆ ಆರಂಭಿಸಿದ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೊವಿಡ್ ಹಿನ್ನೆಲೆಯಲ್ಲಿ 2 ವರ್ಷಗಳಿಂದ ನೇಮಕಾತಿ ರದ್ದಾಗಿದೆ. ಕೂಡಲೇ ವಿಶೇಷ ನೇಮಕಾತಿ ಆರಂಭಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿದರು.

ಸಚಿವ ಮುನಿರತ್ನ ಉತ್ತರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಯೋಜನಾ ಸಚಿವ ಮುನಿರತ್ನ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಚರ್ಚೆ ನಡೆಸಿ ಮುಖ್ಯಮಂತ್ರಿಯೇ ನಿರ್ಧಾರ ಕೈಗೊಳ್ಳುತ್ತಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಡಿಬಿ) ₹ 8,880 ಕೋಟಿ ಅನುದಾನ ನಿಗದಿಯಾಗಿದೆ. ಈ ಪೈಕಿ ಸುಮಾರು ₹5 ಸಾವಿರ ಕೋಟಿ ಬಿಡುಗಡೆ ಆಗಿದೆ ಎಂದರು.

ಕಾಮಗಾರಿಗಳಿಗೆ ಟೆಂಡರ್ ಕರೆಯುವ ವಿಚಾರದಲ್ಲಿಯೂ ಗೊಂದಲಗಳಿವೆ ಎಂಬುದನ್ನು ಒಪ್ಪಿಕೊಂಡ ಅವರು, ಜಿಲ್ಲಾಧಿಕಾರಿಗಳಲ್ಲದೆ ಕಾರ್ಯದರ್ಶಿಗಳೂ ಟೆಂಡರ್ ಕರೆಯುತ್ತಿದ್ದಾರೆ. ಈ ಎರಡೂ ಟೆಂಡರ್​​ಗಳಲ್ಲಿ ಹೊಂದಾಣಿಕೆ ಇಲ್ಲ. ಟೆಂಡರ್ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಕಾರ್ಯದರ್ಶಿಗಳಲ್ಲೇ ಗೊಂದಲವಿದೆ. ಕಾಮಗಾರಿಗಳ‌ ಆಳ, ಮಹತ್ವ ಅಧಿಕಾರಿಗಳಿಗೆ ಗೊತ್ತಿಲ್ಲ. ಎಂಜಿನಿಯರ್​ಗಳಿಗೆ ಕಾರ್ಯಯೋಜನೆ (ಆ್ಯಕ್ಷನ್ ಪ್ಲಾನ್) ಸಲ್ಲಿಸಲು ಎಂಜಿನಿಯರ್​ಗಳಿಂದ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು, ಕಾರ್ಯದರ್ಶಿಗಳು ಸಲ್ಲಿಸುತ್ತಿದ್ದಾರೆ. ₹ 1,500 ಕೋಟಿ ಅನುದಾನ ಬಳಸಲು ಆಗುತ್ತಿಲ್ಲ ಎಂದು ನುಡಿದರು.

ಸದಸ್ಯರ ಆಕ್ಷೇಪ ನಿಯಮ 69ರ ಅಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಗೆ ಸಚಿವ ಮುನಿರತ್ನ ನೀಡಿದ ಉತ್ತರಕ್ಕೆ ಸದಸ್ಯರು ಆಕ್ಷೇಪಿಸಿದರು. ಈ ವೇಳೆ ಉತ್ತರ ಕೊಡಲು ಮುಖ್ಯಮಂತ್ರಿ ಮುಂದಾದರು. ನಂತರ ಮುಖ್ಯಮಂತ್ರಿ ಬದಲಿಗೆ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿದರು.

ಸಕ್ಕರೆ ಕಾರ್ಖಾನೆ ಉಳಿಸಲು ಆಗ್ರಹ ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್​.ಆರ್​.ಪಾಟೀಲ್​ ಹೇಳಿಕೆ ನೀಡಿದರು. ರಾಜ್ಯದ 87 ಸಕ್ಕರೆ ಕಾರ್ಖಾನೆ ಪೈಕಿ 27 ಕಾರ್ಖಾನೆಗಳು ಬಂದ್ ಆಗಿವೆ. ಅದರಲ್ಲಿ ಉತ್ತರ ಕರ್ನಾಟಕದಲ್ಲೇ 63 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಮುಚ್ಚಿ ಹೋದ ಕಾರ್ಖಾನೆಗಳನ್ನು ಮತ್ತೆ ಆರಂಭಿಸಲು ಕ್ರಮತೆಗೆದುಕೊಳ್ಳಬೇಕು. ಸಹಕಾರ ರಂಗದ ಸಕ್ಕರೆ ಕಾರ್ಖಾನೆಗಳನ್ನು ಉಳಿಸಲು ಶೀಫ್ರ ನಿರ್ಣಯ ಕೈಗೊಳ್ಳಬೇಕು ಎಂದು ಎಸ್.ಆರ್.ಪಾಟೀಲ್ ಆಗ್ರಹಿಸಿದರು.

(Hyderabad Karnataka Development CM Basavaraj Bommai Assures All Necessary Measures)

ಇದನ್ನೂ ಓದಿ: ಜಿಎಸ್​ಟಿ ವಂಚನೆ ತಡೆಗೆ ಅಗತ್ಯ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ವಿಚಾರವಾಗಿ ಪ್ರಿಯಾಂಕ್ ಖರ್ಗೆ, ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಚಕಮಕಿ