AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿನ ಬೇಗೆಗೆ ಬೆಂದ ಕರ್ನಾಟಕ: ಬೆಂಗಳೂರು ಸೇರಿ ವಿವಿಧೆಡೆ ಹೀಟ್‌ವೇವ್ ಅಲರ್ಟ್

ಕರ್ನಾಟಕದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಕಲಬುರಗಿಯಲ್ಲಿ 45°C ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲೂ 37°C ತಲುಪುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಆರೆಂಜ್ ಹಾಗೂ ಯೆಲ್ಲೋ ಹೀಟ್‌ವೇವ್ ಅಲರ್ಟ್ ಘೋಷಿಸಿದ್ದು, ಕಲಬುರಗಿ ಜಿಲ್ಲಾಧಿಕಾರಿ ಮಧ್ಯಾಹ್ನದ ಹೊತ್ತಲ್ಲಿ ಅನಗತ್ಯ ಹೊರಗೆ ಓಡಾಡದಂತೆ ಸಲಹೆ ನೀಡಿದ್ದಾರೆ. ದಾಖಲೆ ಮಟ್ಟದ ಉಷ್ಣತೆಯಿಂದ ಜನ ಹೈರಾಣಾಗಿದ್ದಾರೆ.

ಬಿಸಿಲಿನ ಬೇಗೆಗೆ ಬೆಂದ ಕರ್ನಾಟಕ: ಬೆಂಗಳೂರು ಸೇರಿ ವಿವಿಧೆಡೆ ಹೀಟ್‌ವೇವ್ ಅಲರ್ಟ್
ಸಾಂದರ್ಭಿಕ ಚಿತ್ರImage Credit source: AI Image
ಪ್ರಸನ್ನ ಹೆಗಡೆ
|

Updated on:Apr 16, 2026 | 12:20 PM

Share

ಬೆಂಗಳೂರು, ಏಪ್ರಿಲ್​​ 16: ಬಿಸಿಲಿನ ಬೇಗೆಗೆ ಈಗಾಗಲೇ ಕರ್ನಾಟಕದ ಜನ ಬೆಂದು ಹೋಗಿದ್ದಾರೆ. ಈ ನಡುವೆ ರಾಜ್ಯದ ವಿವಿಧ ಭಾಗಗಳಲ್ಲಿ ಉಷ್ಣತೆ ದಿನೇದಿನೇ ಏರಿಕೆಯಾಗುತ್ತಿದ್ದು, ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 44°–45°C ತಾಪಮಾನ ದಾಖಲಾಗಿದೆ. ಇತ್ತ ಬೆಂಗಳೂರಿನಲ್ಲಿ ಬುಧವಾರ 35.8°C ತಾಪಮಾನ ದಾಖಲಾಗಿರೋದು ಜನರನ್ನು ಕಂಗೆಡಿಸಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಏಪ್ರಿಲ್ ತಿಂಗಳ ಹಿಂದಿನ ದಾಖಲೆಗಳನ್ನು ಮೀರಿಸುವ ಮಟ್ಟದಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಲ್ಲಿ ಒಣಹವೆ

ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36°C ರಿಂದ 37°C ನಡುವೆ ಇರಲಿದ್ದು, ನಗರದಲ್ಲಿ ಒಣಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳವಾರ ಬೆಂಗಳೂರಿನಲ್ಲಿ 36.6°C ಗರಿಷ್ಠ ತಾಪಮಾನ ದಾಖಲಾಗಿದ್ದು, 2026ರ ಅತ್ಯಂತ ಬಿಸಿಯಾದ ದಿನವಾಗಿತ್ತು. ಬುಧವಾರ ತಾಪಮಾನ 0.8°C ಇಳಿಕೆಯಾಗಿದ್ದರೂ, ಮುಂದಿನ ದಿನಗಳಲ್ಲಿ 38°C ತಲುಪುವ ಸಾಧ್ಯತೆ ಇದೆ ಎಂದು ಐಎಂಡಿ ಬೆಂಗಳೂರಿನ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಕೆಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ ಇದ್ದರೂ, ಅದು ಸೀಮಿತ ಪ್ರದೇಶಗಳಿಗೆ ಮಾತ್ರ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸುಧಾರಿಸದ ಗಾಳಿಯ ಗುಣಮಟ್ಟ; ಹಲವು ಜಿಲ್ಲೆಗಳಲ್ಲಿ ‘ಕಳಪೆ’ ಮಟ್ಟಕ್ಕೆ ಕುಸಿತ!

ಅತ್ತ ಕಲ್ಯಾಣ ಕರ್ನಾಟಕ ಭಾಗಕ್ಕೆ ಮುಂದಿನ ಎರಡು ದಿನಗಳಿಗೆ ಆರೆಂಜ್ ಮತ್ತು ಯೆಲ್ಲೋ ಹೀಟ್‌ವೇವ್ ಅಲರ್ಟ್ ನೀಡಲಾಗಿದೆ. ಕಲಬುರಗಿಯಲ್ಲಿ ಅವ್ರಾದ್ ಬಿ ಪ್ರದೇಶದಲ್ಲಿ 45°C, ಚಿಂಚೋಳಿ ಮತ್ತು ಅಫ್ಜಲ್ಪುರದಲ್ಲಿ 44.03°C ಹಾಗೂ ಕಲಬುರಗಿ ನಗರದಲ್ಲಿ 42.1°C ತಾಪಮಾನ ದಾಖಲಾಗಿದೆ. ಇಲ್ಲಿ ತಾಪಮಾನ 45°C ಮೀರಿಸುವ ಸಾಧ್ಯತೆ ಇದೆ. ಸಾಮಾನ್ಯಕ್ಕಿಂತ 3°C ರಿಂದ 4°C ಹೆಚ್ಚು ತಾಪಮಾನ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರಣ್ನುಮ್ ಅವರು ನಾಗರಿಕರಿಗೆ ಅಗತ್ಯವಿಲ್ಲದ ಹೊರಗಡೆ ಸಂಚಾರವನ್ನು ಬೆಳಿಗ್ಗೆ 11:30ರಿಂದ ಸಂಜೆ 5ರವರೆಗೆ ತಪ್ಪಿಸಲು ಸಲಹೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಬಿಸಿ ಮತ್ತು ತೇವಾಂಶಯುಕ್ತ ಹವಾಮಾನದ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:17 pm, Thu, 16 April 26

Follow Us