ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್!
ಕರ್ನಾಟಕದ ಮುಜರಾಯಿ ಇಲಾಖೆಯ ದೇವಾಲಯಗಳು ಮತ್ತು ಸಮುದಾಯ ಭವನಗಳು ಚಿತ್ರೀಕರಣಕ್ಕೆ ಪ್ರಮುಖ ತಾಣಗಳಾಗಿವೆ. ಕಳೆದ ಮೂರು ವರ್ಷಗಳಲ್ಲಿ ಚಲನಚಿತ್ರ ಮತ್ತು ಧಾರಾವಾಹಿ ಚಿತ್ರೀಕರಣದಿಂದ ಇಲಾಖೆಯು ₹71 ಲಕ್ಷ ಆದಾಯ ಗಳಿಸಿದೆ. ಈ ಆದಾಯವನ್ನು ಆಸ್ತಿಗಳ ನಿರ್ವಹಣೆಗೆ ಬಳಸಲಾಗುತ್ತಿದೆ. ಮೈಸೂರು, ಮಂಡ್ಯ ಮತ್ತು ಬೆಂಗಳೂರಿನ ಸ್ಥಳಗಳು ಅತಿ ಹೆಚ್ಚು ಆದಾಯ ತಂದಿವೆ.

ಬೆಂಗಳೂರು, ಏಪ್ರಿಲ್ 13: ದೇವಾಲಯಗಳು ಮತ್ತು ಸಮುದಾಯ ಭವನಗಳನ್ನು ಚಲನಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣಕ್ಕಾಗಿ ಬಾಡಿಗೆಗೆ ನೀಡುವ ಮೂಲಕವೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 71 ಲಕ್ಷ ಆದಾಯ ಗಳಿಸಿದೆ. 2023–24ರಿಂದ 2025–26ರವರೆಗೆ ಚಿತ್ರ ಚಿತ್ರೀಕರಣದಿಂದ 53.91 ಲಕ್ಷ ರೂ. , ಧಾರಾವಾಹಿಗಳಿಂದ 16.86 ಲಕ್ಷ ರೂ. ಬಂದಿದೆ. ಡಾಕ್ಯುಮೆಂಟರಿ, ನ್ಯೂಸ್ ಫೀಚರ್ ಹಾಗೂ ಜಾಹೀರಾತುಗಳಿಂದ ಹೆಚ್ಚುವರಿಯಾಗಿ 42 ಸಾವಿರ ಹಣವನ್ನು ಇಲಾಖೆ ಗಳಿಸಿದೆ.
ಮೈಸೂರು ನಗರದ ನಂಜರಾಜ ಬಹಾದೂರು ಚೌಲ್ಟ್ರಿ 13.27 ಲಕ್ಷ ಆದಾಯ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯದ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ 11.13 ಲಕ್ಷ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರುದಲ್ಲಿರುವ ಶ್ರೀ ರಾಯ ರಾಯ ಕಲ್ಯಾಣ ಮಂಟಪ 9.73 ಲಕ್ಷ ಆದಾಯ ತಂದಿದೆ. ಕನ್ನಡ ಚಿತ್ರಗಳ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರತಂಡಗಳು ಸಹ ಈ ಸ್ಥಳಗಳನ್ನು ಬಳಸಿದ್ದು, ಇದರಿಂದ ಆದಾಯ ಹೆಚ್ಚಾಗಿದೆ. ಇನ್ನು ಈ ಆದಾಯವನ್ನು ಆಸ್ತಿಗಳ ನಿರ್ವಹಣೆಗೆ ಬಳಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಹಳೆಯ ಮೈಸೂರು ಭಾಗವೇ ಫೆವರೇಟ್
ಹಳೆಯ ಮೈಸೂರು ಭಾಗದ ದೇವಾಲಯಗಳು ಮತ್ತು ಸಮುದಾಯ ಭವನಗಳು ಚಿತ್ರ ನಿರ್ಮಾಪಕರಿಗೆ ಹೆಚ್ಚು ಮೆಚ್ಚಿನ ತಾಣಗಳಾಗಿವೆ. ಹೀಗಾಗಿ ಈ ಭಾಗದ ಮುಜರಾಯಿ ಆಸ್ತಿಗಳಿಗೆ ಹೆಚ್ಚಿನ ಚಿತ್ರೀಕರಣ ಬೇಡಿಕೆ ಬರುತ್ತಿದೆ. ಮಂಡ್ಯ ಜಿಲ್ಲೆಯ ಚೆಲುವನಾರಾಯಣಸ್ವಾಮಿ ದೇವಾಲಯ ಮತ್ತು ನಿಮಿಷಾಂಬಾ ದೇವಾಲಯಗಳು ಚಿತ್ರ ಹಾಗೂ ಧಾರಾವಾಹಿ ತಂಡಗಳನ್ನು ಹೆಚ್ಚು ಆಕರ್ಷಿಸಿವೆ. ಬೆಂಗಳೂರು ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ದೇವಾಲಯಗಳು ಧಾರಾವಾಹಿ ಚಿತ್ರೀಕರಣಕ್ಕೆ ಹೆಚ್ಚು ಬೇಡಿಕೆಯಲ್ಲಿವೆ. ಉತ್ತರ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೊಪ್ಪಳದ ಹುಳಿಗೆಮ್ಮದೇವಿ ದೇವಾಲಯ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ದೇವಾಲಯಗಳಲ್ಲಿ ಮಾತ್ರ ಚಿತ್ರೀಕರಣ ನಡೆದಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಯಾವುದೇ ಚಿತ್ರೀಕರಣ ನಡೆದಿಲ್ಲ.
ಎ-ಗ್ರೇಡ್ ಆಸ್ತಿಗಳಿಗೆ ದಿನಕ್ಕೆ 15,000 ಮತ್ತು ಬಿ-ಗ್ರೇಡ್ ಆಸ್ತಿಗಳಿಗೆ 10,000 ಬಾಡಿಗೆ ನಿಗದಿಯಾಗಿದೆ. ಆದರೆ ದಾಖಲೆಗಳ ಪ್ರಕಾರ, ಬಹುತೇಕ ಎ-ಗ್ರೇಡ್ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ ಚಿತ್ರತಂಡಗಳು ಕೇವಲ 5,000 ಮಾತ್ರ ಪಾವತಿಸಿರುವುದು ಕಂಡುಬಂದಿದೆ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ದೇವಾಲಯಗಳು ಮತ್ತು ಸಮುದಾಯ ಭವನಗಳ ನಿರ್ವಹಣೆ ಮುಜರಾಯಿ ಇಲಾಖೆಯಾದರೂ, ಚಿತ್ರೀಕರಣಕ್ಕೆ ಅನುಮತಿ ನೀಡುವುದು ಹಾಗೂ ದರ ನಿಗದಿಪಡಿಸುವುದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಚಿತ್ರ ಅಥವಾ ಧಾರಾವಾಹಿಯ ಬಜೆಟ್ ಆಧರಿಸಿ ರಿಯಾಯಿತಿ ನೀಡಲಾಗಿರಬಹುದು. ಮಾಹಿತಿ ಪ್ರಧಾನ ಹಾಗೂ ರಾಜ್ಯ ಪ್ರಚಾರ ಯೋಜನೆಗಳಿಗೆ ಸಹ ಬಾಡಿಗೆ ರಿಯಾಯಿತಿ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




