ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ
Karnataka Weather: ರಾಜ್ಯದಲ್ಲಿ ಬಿಸಿಲಿನ ಅಬ್ಬರ ಇಂದೂ ಮುಂದುವರಿಯಲಿದ್ದು, ಕಲಬುರಗಿ ಮತ್ತು ಬೀದರ್ನಲ್ಲಿ 40°C ತಾಪಮಾನ ತಲುಪುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಸೆಕೆ ಮತ್ತು ಬಿಸಿ ಗಾಳಿ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ, ದಕ್ಷಿಣ ಒಳನಾಡು ಮತ್ತು ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದಲ್ಲಿ ಒಣ ಹವೆ ಮುಂದುವರಿಯಲಿದೆ.

ಬೆಂಗಳೂರು, ಏಪ್ರಿಲ್ 30: ರಾಜ್ಯದಲ್ಲಿ ಇಂದು ಕೂಡ ಬಿಸಿಲಿನ ಅಬ್ಬರ ಮುಂದುವರಿಯಲಿದ್ದು, ಕೆಲ ಭಾಗಗಳಲ್ಲಿ ಮಾತ್ರ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿ ಮತ್ತು ಬೀದರ್ನಲ್ಲಿ ತಾಪಮಾನ ಹೆಚ್ಚಿರಲಿದ್ದು, ಗರಿಷ್ಠ 39ರಿಂದ 40 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ತಲುಪುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಬೆಂಗಳೂರಿನಲ್ಲಿಯೂ ತಾಪಮಾನ ಎಂದಿನಂತೆ ಇರಲಿದ್ದು, ಜನರಿಗೆ ಸೆಕೆಯ ಅನುಭವ ಮುಂದುವರಿಯಲಿದೆ. ಕೆಲ ಜಿಲ್ಲೆಗಳಲ್ಲಿ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆಯನ್ನು ನೀಡಲಾಗಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ಮೈಸೂರು, ತುಮಕೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಹಗಲಿನ ವೇಳೆ ತಾಪಮಾನ 36-38 ಡಿಗ್ರಿ ಸೆಲ್ಸಿಯಸ್ವರೆಗೆ ತಲುಪಲಿದೆ. ಹಾಗೆಯೇ ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಧಾರವಾಡ ಭಾಗದಲ್ಲಿ ಒಳ ಮತ್ತು ಬಿಸಿ ಹವೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರು ಮಳೆಗೆ ಮತ್ತೊಂದು ಸಾವು; ಜೆ.ಪಿ. ನಗರದ ಮಿನಿ ಫಾರೆಸ್ಟ್ ಬಳಿ ಶಾಕ್ ಹೊಡೆದು ರಘು ದುರ್ಮರಣ, ಒಟ್ಟು 9 ಬಲಿ!
ಕರಾವಳಿಗರಿಗೆ ಎಚ್ಚರಿಕೆ
🚨ಬಿಸಿ ಗಾಳಿ & ತೇವಾಂಶ ಎಚ್ಚರಿಕೆ 🚨 #Hot and #Humid #Warning@dcudupi @dcuttarakannada #KSNDMC @KarnatakaVarthe #Premonsoon pic.twitter.com/bXIoYaN4RX
— Karnataka State Natural Disaster Monitoring Centre (@KarnatakaSNDMC) April 29, 2026
ಕರಾವಳಿ ಜಿಲ್ಲೆಗಳಾದ ಮಂಗಳೂರು, ಕಾರವಾರ ಮತ್ತು ಉಡುಪಿಯಲ್ಲಿ ಬಿಸಿಲು ಮತ್ತು ತೇವಾಂಶ ಹೆಚ್ಚಾಗಿ ಕಂಡುಬರಲಿದ್ದು, ಇದೇ ರೀತಿಯ ಹವಾಮಾನ ಮುಂದಿನ ಎರಡು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತೀವ್ರ ತಾಪಮಾನ ಕಂಡುಬರುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆಯನ್ನು ನೀಡಿದೆ. ಅದಾಗಿಯೂ ಕರಾವಳಿ ಭಾಗದ ಕೆಲವೆಡೆ ತುಂತುರು ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ.
ಎಲ್ಲೆಲ್ಲಿ ಮಳೆ?
ದಕ್ಷಿಣ ಒಳನಾಡು ಕರ್ನಾಟಕ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಿಶೇಷವಾಗಿ ಸಂಜೆ ವೇಳೆ ಕೆಲವೆಡೆ ಗಾಳಿಯೊಂದಿಗೆ ಲಘು ಅಥವಾ ಮಧ್ಯಮ ಪ್ರಮಾಣದ ಮಳೆ ಸಾಧ್ಯತೆ ಇದೆ. ಗುಡುಗು ಸಹಿತ ಮಳೆಯ ಸಂಭವವೂ ಇದೆ ಎನ್ನಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಹಗಲಿನ ವೇಳೆ ಕನಿಷ್ಠ 24ರಿಂದ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆಯಾದರೂ, ಸಂಜೆ ಅಥವಾ ರಾತ್ರಿ ವೇಳೆಗೆ ಸಾಮಾನ್ಯ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:25 am, Thu, 30 April 26




