KPSC Scam: IAS ಅಧಿಕಾರಿ ಜ್ಞಾನೇಂದ್ರ ಜೊತೆ ಮತ್ತೊಬ್ಬ ಸೂತ್ರಧಾರಿ ಬಸವರಾಜ್ ಕನ್ನಾಳೆ ಸಿಐಡಿ ಬಲೆಗೆ!
KPSC ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆಯವರನ್ನು ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ. ಒಂದು ಪ್ರಶ್ನೆ ಪತ್ರಿಕೆಗೆ 40 ಲಕ್ಷ ರೂ. ಪಡೆದು ಸಾಕ್ಷ್ಯ ನಾಶಪಡಿಸಿದ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದ ಕುರಿತು ಸಂಪೂರ್ಣ ತನಿಖಾ ವರದಿ ಬಂದ ಬಳಿಕಷ್ಟೇ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಮುಖ್ಯಾಂಶಗಳು
- IAS ಅಧಿಕಾರಿ ಜ್ಞಾನೇಂದ್ರ ಹಾಗೂ ಬಸವರಾಜ್ ಕನ್ನಾಳೆ CID ಕಸ್ಟಡಿಗೆ.
- ಪ್ರಶ್ನೆ ಪತ್ರಿಕೆಗೆ 40 ಲಕ್ಷ ರೂ. ಪಡೆದು OMR ತಿದ್ದುಪಡಿ ಮಾಡಿದ ಗಂಭೀರ ಆರೋಪ.
- ಸಂಪೂರ್ಣ ತನಿಖಾ ವರದಿ ಬರುವವರೆಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದ ಸಿಎಂ
ಬೆಂಗಳೂರು, ಸೆಪ್ಟೆಂಬರ್ 01: ಕೆಪಿಎಸ್ಸಿ ಅಕ್ರಮ ಪ್ರಕರಣದ ಬೆನ್ನುಬಿದ್ದಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಮುಖ ಸೂತ್ರಧಾರಿಗಳನ್ನು ಬಂಧಿಸಿದ್ದಾರೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಾಂಗ್ವಾರ್ ಬಂಧನದ ಬೆನ್ನಲ್ಲೇ, ಮತ್ತೊಬ್ಬ ಮಾಸ್ಟರ್ ಮೈಂಡ್ ಬಸವರಾಜ್ ಕನ್ನಾಳೆಯನ್ನು ಸಿಐಡಿ ಲಾಕ್ ಮಾಡಿದೆ.
ದೆಹಲಿಯಲ್ಲಿ ಅರೆಸ್ಟ್, ಕೋರ್ಟ್ಗೆ ಹಾಜರು
ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಹಾಗೂ ಭಾಲ್ಕಿಯ ಮುಖಂಡ ಬಸವರಾಜ್ ಕನ್ನಾಳೆಯನ್ನು ದೆಹಲಿಯಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು, ಬೆಂಗಳೂರಿಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಬಳಿಕ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಇಬ್ಬರನ್ನೂ 1ನೇ ACJM ಕೋರ್ಟ್ಗೆ ಹಾಜರುಪಡಿಸಲಾಯಿತು.
ಆರೋಗ್ಯದ ನೆಪ, ಸಿಐಡಿ ಕಸ್ಟಡಿಗೆ ರವಾನೆ
ವಿಚಾರಣೆ ವೇಳೆ ಜ್ಞಾನೇಂದ್ರ ಪರ ವಕೀಲರು, “ಆರೋಪಿಯು ಅಸ್ತಮಾ ಹಾಗೂ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದು, ಫಿಸಿಯೋಥೆರಪಿ ಅಗತ್ಯವಿದೆ. ಹೀಗಾಗಿ ಜಾಮೀನು ನೀಡಬೇಕು” ಎಂದು ಕೋರಿದರು. ಆದರೆ ಸರ್ಕಾರಿ ಅಭಿಯೋಜಕರು (Public Prosecutor) ಇದನ್ನು ತೀವ್ರವಾಗಿ ಆಕ್ಷೇಪಿಸಿ, ಪ್ರಶ್ನೆ ಪತ್ರಿಕೆ ಲೀಕ್ ಹಾಗೂ ಅಕ್ರಮದ ಗಂಭೀರ ಆರೋಪಗಳಿರುವುದರಿಂದ ಹೆಚ್ಚಿನ ತನಿಖೆಗೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದಾರೆ.
40 ಲಕ್ಷ ರೂ. ಗೆ ಪ್ರಶ್ನೆ ಪತ್ರಿಕೆ ಮಾರಾಟ?
ಸಿಐಡಿ ತನಿಖೆಯ ವೇಳೆ ಕ್ರಿಮಿನಲ್ ಜಾಲ ಬಯಲಾಗಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ನಾಯಕರ ಜೊತೆ ಒಡನಾಟ ಹೊಂದಿದ್ದನು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ಒಂದಕ್ಕೆ ಸುಮಾರು 40 ಲಕ್ಷದವರೆಗೆ ಪಡೆದು ಅಭ್ಯರ್ಥಿಗಳಿಗೆ ಮಾರಾಟ ಮಾಡಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, OMR ಶೀಟ್ ತಿದ್ದುಪಡಿ, ಸಾಕ್ಷ್ಯ ನಾಶ ಹಾಗೂ ಸ್ಟ್ರಾಂಗ್ ರೂಮ್ನ CCTV ದೃಶ್ಯಾವಳಿಗಳನ್ನು ನಾಶಪಡಿಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಇಬ್ಬರು ಪ್ರಮುಖ ತಿಮಿಂಗಿಲಗಳು ಬಲೆಗೆ ಬಿದ್ದಿದ್ದು, ಅಕ್ರಮದಲ್ಲಿ ಭಾಗಿಯಾದ ಇತರ ಆರೋಪಿಗಳಲ್ಲೀಗ ನಡುಕ ಶುರುವಾಗಿದೆ.
ಸಿಎಂ ಹೇಳಿದ್ದೇನು?
ಪ್ರಕರಣದ ಕುರಿತು ಪ್ರತಿಕ್ರಿಯಿದ ಸಿಎಂ ಡಿ ಕೆ ಶಿವಕುಮಾರ್, ಕೆಪಿಎಸ್ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿಯಾಗಿ ಸಂಪೂರ್ಣ ತನಿಖಾ ವರದಿ ಬರುವವರೆಗೆ ಯಾವುದೇ ಉದ್ವೇಗದ ಹೇಳಿಕೆ ನೀಡಲು ಬಯಸುವುದಿಲ್ಲ. ಬಿಜೆಪಿ ಹಾಗೂ ವಿಪಕ್ಷಗಳ ನಾಯಕರು ಏನೇನೋ ಮಾತನಾಡುತ್ತಿದ್ದಾರೆ, ಅದಕ್ಕೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ . ಕೆಪಿಎಸ್ಸಿಯಲ್ಲಿ ಹಿಂದೆ ಯಾರ್ಯಾರನ್ನು ನೇಮಕ ಮಾಡಲಾಗಿತ್ತು, ಅಕ್ರಮದ ಹಿಂದ ಯಾರಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಸಿಐಡಿ ತನಿಖೆಯಿಂದ ಹೊರಬರಲಿದೆ. ವಿಪಕ್ಷಗಳು ಪಾದಯಾತ್ರೆ ಮಾಡುವುದಿದ್ದರೆ ಮಾಡಲಿ, ನಮ್ಮ ಸರ್ಕಾರದ ಉತ್ತರ ಏನೆಂಬುದನ್ನು ಕಾಲವೇ ಉತ್ತರಿಸಲಿದೆ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




