ಬೆಂಗಳೂರಿಗರೇ ಎಚ್ಚರ! ನೀವು ತಿನ್ನುವ ಸೊಪ್ಪು, ತರಕಾರಿಯಲ್ಲೂ ಇದೆ ಸೀಸದ ಅಂಶ!
ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ 70 AQI ದಾಟಿದ್ದು, ನಗರದ ಸುತ್ತಮುತ್ತ ಬೆಳೆಯುವ ಸೊಪ್ಪು ಹಾಗೂ ತರಕಾರಿಗಳಲ್ಲಿ ಅಪಾಯಕಾರಿ ಸೀಸ (Lead) ಮತ್ತು ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷೆಯಲ್ಲಿ ಬದನೆ, ತೊಂಡೆಕಾಯಿ ಹಾಗೂ ಹಸಿರೆಲೆ ತರಕಾರಿಗಳು ಅಸುರಕ್ಷಿತ ಎಂದು ತಿಳಿದುಬಂದಿದ್ದು, ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮುಖ್ಯಾಂಶಗಳು
- ಬೆಂಗಳೂರಿನ ವಾಯುಮಾಲಿನ್ಯ ಪ್ರಮಾಣವು ಈಗಾಗಲೇ ಎಪ್ಪತ್ತು ಎಕ್ಯೂಐ ದಾಟಿ ಆತಂಕ ಮೂಡಿಸಿದೆ.
- ಸುತ್ತಮುತ್ತಲಿನ ಭಾಗಗಳಲ್ಲಿ ಬೆಳೆಯುವ ಸೊಪ್ಪು ತರಕಾರಿಗಳಲ್ಲಿ ಅಪಾಯಕಾರಿ ಸೀಸ ಪತ್ತೆಯಾಗಿದೆ.
- ಕೈಗಾರಿಕಾ ತ್ಯಾಜ್ಯ ಮತ್ತು ಕಲುಷಿತ ನೀರಿನ ಬಳಕೆಯಿಂದ ತರಕಾರಿಗಳು ಅಸುರಕ್ಷಿತವಾಗಿವೆ.
ಬೆಂಗಳೂರು, ಜುಲೈ 20: ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು, ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟ ತಲುಪುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಿಗರ ಆರೋಗ್ಯಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯಲಾಗುವ ಹಸಿರೆಲೆ ಸೊಪ್ಪು ಮತ್ತು ತರಕಾರಿಗಳಲ್ಲಿ ಸೀಸ (Lead), ಕೀಟನಾಶಕ ಹಾಗೂ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
70ರ ಗಡಿ ದಾಟಿದ AQI: ಕಲುಷಿತಗೊಳ್ಳುತ್ತಿದೆ ನಗರದ ಗಾಳಿ
ನಗರದಲ್ಲಿ ಪ್ರತಿದಿನ ಸುಮಾರು ಮೂರು ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿದ್ದು, ವಾಯುಮಾಲಿನ್ಯ ಗಣನೀಯವಾಗಿ ಏರಿಕೆಯಾಗುತ್ತಿದೆ. ಸದ್ಯ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು (AQI) 68 ರಿಂದ 70ರ ಗಡಿಯನ್ನು ದಾಟಿದ್ದು, ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈ ವಾಯುಮಾಲಿನ್ಯದ ಪರಿಣಾಮ ಹಾಗೂ ಕೃಷಿಗೆ ಕೈಗಾರಿಕಾ ತ್ಯಾಜ್ಯ ಮತ್ತು ಕಲುಷಿತ ನೀರನ್ನು ಬಳಸುತ್ತಿರುವುದರಿಂದ ತರಕಾರಿಗಳಲ್ಲಿ ವಿಷಕಾರಿ ಅಂಶಗಳು ಸೇರಿಕೊಳ್ಳುತ್ತಿವೆ ಎಂದು ಪರಿಸರ ತಜ್ಞರಾದ ಅಕ್ಷಯ್ ಹೆಬ್ಳೀಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ Bengaluru Air Quality: ಮಲೆನಾಡಿನಲ್ಲಿ ಶುದ್ಧ ಗಾಳಿ, ಬೆಂಗಳೂರಿನಲ್ಲಿ ಉತ್ತಮ ಹವಾಮಾನ
ಆರ್ಗ್ಯಾನಿಕ್ ತರಕಾರಿಗಳೂ ಸುರಕ್ಷಿತವಲ್ಲ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದ ಪರೀಕ್ಷೆಗಳ ಪ್ರಕಾರ, 2024 ರಿಂದ 2026ರ ಅವಧಿಯಲ್ಲಿ ಸಂಗ್ರಹಿಸಲಾದ 1,323 ತರಕಾರಿ ಮಾದರಿಗಳಲ್ಲಿ 29 ಮಾದರಿಗಳು ಸಂಪೂರ್ಣ ಅಸುರಕ್ಷಿತ ಎಂದು ಕಂಡುಬಂದಿದೆ. ವಿಶೇಷವಾಗಿ ಬದನೆಕಾಯಿ, ತೊಂಡೆಕಾಯಿ ಮತ್ತು ಹಸಿರೆಲೆ ಸೊಪ್ಪುಗಳಲ್ಲಿ ಸೀಸದ ಪ್ರಮಾಣ ವಿಪರೀತವಾಗಿದೆ. ಕೆಲವು ಕಡೆ ‘ಆರ್ಗ್ಯಾನಿಕ್’ (ಜೈವಿಕ) ಹೆಸರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲೂ ಈ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾಗಿರುವುದು ಗ್ರಾಹಕರನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಒಟ್ಟಾರೆಯಾಗಿ, ನಿರಂತರವಾಗಿ ಹೆಚ್ಚುತ್ತಿರುವ ಮಾಲಿನ್ಯವು ಈಗ ಬೆಂಗಳೂರಿಗರ ದಿನನಿತ್ಯದ ಆಹಾರದ ತಟ್ಟೆಯನ್ನೂ ಕಲುಷಿತಗೊಳಿಸುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




