ರೈತರೇ ಗಮನಸಿ: ಬಿತ್ತನೆ ಸಂಬಂಧ ಹವಾಮಾನ ತಜ್ಞರು ನೀಡಿರುವ ಸಲಹೆ ಇಲ್ಲಿದೆ
Monsoon Crisis: ಕರ್ನಾಟಕದಲ್ಲಿ ಮುಂಗಾರು ಮಳೆಯ ಕೊರತೆ ತೀವ್ರಗೊಂಡಿದ್ದು, ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಇದೆ. ಒಣಹವೆ ಮುಂದುವರಿಯಲಿದ್ದು, ಜುಲೈ ಕೊನೆಯಲ್ಲಿ ಮಳೆಯಾಗಬಹುದಾದರೂ ಅದು ಸಾಧಾರಣವಾಗಿರಲಿದೆ. ಹೀಗಾಗಿ ಮಳೆ ನಂಬಿ ಬಿತ್ತನೆ ಮಾಡುವ ರೈತರು ಮಣ್ಣಿನ ತೇವಾಂಶ ಗಮನಿಸಿ ಮುನ್ನಡೆಯಲು ಸಲಹೆ ನೀಡಲಾಗಿದೆ.

ಮುಖ್ಯಾಂಶಗಳು
- ಇನ್ನೂ ಒಂದು ವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆಗಲ್ಲ!
- ಮುಂಗಾರು ಮಳೆಯ ತೀವ್ರ ಹಿನ್ನಡೆ ಬಗ್ಗೆ ತಜ್ಞರಿಂದ ಎಚ್ಚರಿಕೆ
- ಮಳೆ ನಂಬಿ ಬಿತ್ತನೆ ಮಾಡುವ ರೈತರಿಗೆ ಕೆಲವು ಸಲಹೆ, ಸೂಚನೆ
ಬೆಂಗಳೂರು, ಜುಲೈ 14: ಕರ್ನಾಟಕದಲ್ಲಿ ಮುಂಗಾರು ಮಳೆಯ ತೀವ್ರ ಹಿನ್ನಡೆ ನಡುವೆ ತಜ್ಞರು ಮತ್ತೊಂದು ಆತಂಕಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಇನ್ನೂ ಒಂದು ವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆಗೋದಿಲ್ಲ. ಜುಲೈ ಕೊನೆಯ ವಾರದಲ್ಲಿ ಮಳೆಯಾದರೂ ಕೂಡ ಅದು ಸಾಧಾರಣವಾಗಿ ಆಗಲಿದೆ. ಹೀಗಾಗಿ ಮಳೆ ನಂಬಿ ಬಿತ್ತನೆ ಬೀಜ ಹಾಕುವ ಅನ್ನದಾತರು ಕಾಯಬೇಕಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬೆಂಗಳೂರು ಸೇರಿ ಸುತ್ತಮುತ್ತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಮಳೆ ಕೊರತೆ ಉಂಟಾಗಿದೆ. ಕರಾವಳಿಯಲ್ಲಿ ಶೇ. 15-30, ಉತ್ತರ ಒಳನಾಡಿನಲ್ಲಿ ಶೇ. 15-20ರಷ್ಟು ಕಡಿಮೆ ವರ್ಷಧಾರೆಯಾಗಿದೆ ಎಂದವರು ತಿಳಿಸಿದ್ದಾರೆ.
ಪ್ರಾದೇಶಿಕವಾರು ಮಳೆ ಕೊರತೆ ಎಷ್ಟು?
| ಪ್ರದೇಶ | ಮಳೆ ಕೊರತೆ |
| ಕರಾವಳಿ | 15-30% |
| ಉತ್ತರ ಒಳನಾಡು | 15-20% |
| ದಕ್ಷಿಣ ಒಳನಾಡು | 40-50% |
ಇದನ್ನೂ ಓದಿ: ಕರ್ನಾಟಕದಲ್ಲಿ ದುರ್ಬಲಗೊಂಡ ಮುಂಗಾರು; ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ, ರಾಯಚೂರಲ್ಲಿ ದಾಖಲೆ
ಈ ನಡುವೆ ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಇದ್ದು, ಜುಲೈ ಕೊನೆಯಲ್ಲಿ ಮಳೆಯಾಗಬಹುದಾದರೂ ಅದು ಸಾಧಾರಣವಾಗಿರಲಿದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳ ಶೇ. 25ಕ್ಕಿಂತ ಕಡಿಮೆ ಪ್ರದೇಶದಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಯಿದೆ. ಇದನ್ನು ಬಿಟ್ಟರೆ ರಾಜ್ಯದ ಉಳಿದೆಡೆ ಮಳೆ ಸಾಧ್ಯತೆ ಇಲ್ಲ. ಇನ್ನೂ ಒಂದು ವಾರ ಉತ್ತರ ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ರಾಜ್ಯದಲ್ಲಿ ಆಗಸ್ಟ್ನಲ್ಲಿ ಮಳೆ ಚೇತರಿಕೆ ಆಗಬಹುದು. ಹೀಗಿದ್ದರೂ ನಿರೀಕ್ಷೆಯಷ್ಟು ವರ್ಷಧಾರೆ ಆಗಲ್ಲ. ಹೀಗಾಗಿ ಮಳೆ ಆಧಾರಿತ ಬೇಸಾಯ ಮಾಡುವ ರೈತರು ತಮ್ಮ ಹೊಲದ ಮಣ್ಣಿನ ತೇವವನ್ನು ನೋಡಿಕೊಂಡು ಬಿತ್ತನೆ ಮಾಡಬಹುದು. ಇಲ್ಲವೇ ಕಾಯುವುದು ಒಳ್ಳೆಯದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿಯಂತೂ ಉತ್ತಮ ಮಳೆಯಾಗಿಲ್ಲ. ಹೀಗಾಗಿ ಜುಲೈನಲ್ಲಾದರೂ ವರುಣ ಕೃಪೆ ತೋರಿದರೆ ಬಿತ್ತನೆ ಮಾಡಬಹುದು ಎಂಬ ನಿರೀಕ್ಷೇಯಲ್ಲಿದ್ದ ರೈತರಿಗೆ ತಜ್ಞರ ಈ ಎಚ್ಚರಿಕೆ ಮತ್ತಷ್ಟು ನಿರಾಸೆ ಮೂಡಿಸಿದೆ. ಮಳೆ ಕೊರತೆ ಕಾರಣ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ನಡುವೆ ಬೆಳೆಗೆ ನೀರು ತರೋದು ಎಲ್ಲಿಂದ? ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಮುಂದಿನ ಬದುಕು ಹೇಗೆ ಎಂಬ ಚಿಂತೆ ಅನ್ನದಾತರನ್ನು ಕಾಡತೊಡಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:54 pm, Tue, 14 July 26




