ಕಾಕ್ರೋಚ್ ಜನತಾ ಪಾರ್ಟಿಗೆ ‘ಲಕ್ಷ್ಮಣರೇಖೆ’ ಎಳೆದ ಬೆಂಗಳೂರು ಪೊಲೀಸರು, ಆಗಿದ್ದೇನು?
ಸಾಮಾಜಿಕ ಜಾಲತಾಣಗಳಲ್ಲಿ ಯಾವುದಕ್ಕೆ ಯಾವಾಗ ಡಿಮ್ಯಾಂಡ್ ಬರುತ್ತೆ ಎಂದು ಊಹಿಸಲು ಅಸಾಧ್ಯ.ಮೂರ್ನಾಲ್ಕು ದಿನದ ಹಿಂದೆ ರಾತ್ರೋರಾತ್ರಿ ದೇಶಾದ್ಯಂತ 'ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ' (Cockroach Party of India) ಎಂಬ ವಿಚಿತ್ರ ಹೆಸರಿನ ಟ್ರೆಂಡ್ ಸದ್ದು ಮಾಡುತ್ತಿದ್ದು, ಇದೀಗ ಕಾಕ್ರೋಚ್ ಪಾರ್ಟಿ ಮತ್ತೊಂದು ಹೆಜ್ಜೆ ಇಡಲು ಮುಂದಾಗಿದೆ. ಆದ್ರೆ, ಇದಕ್ಕೆ ಬೆಂಗಳೂರು ಪೊಲೀಸ್ರು ಲಕ್ಷ್ಮಣ ರೇಖೆ ಎಳೆದಿದ್ದಾರೆ.

ಬೆಂಗಳೂರು, (ಮೇ 22): ಕಾಕ್ರೋಜ್ ಜನತಾ ಪಾರ್ಟಿ (cockroach janata party) ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಇತ್ತ ಕಾಕ್ರೋಜ್ ಜನತಾ ಪಾರ್ಟಿ ಕರ್ನಾಟಕ, ಇದೇ ಮೇ. 24 ರಂದು ಬೆಂಗಳೂರಿನ (Bengaluru) ಟೌನ್ ಹಾಲ್ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿದೆ. ಕಾಕ್ರೋಜ್ ಜನತಾ ಪಾರ್ಟಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರು ಪೊಲೀಸರು, ಇಂತಹ ಕಾರ್ಯಕ್ರಮ ಆಯೋಜನೆಗೆ ಮನವಿ ಬಂದಿಲ್ಲ. ಒಂದು ವೇಳೆ ಮನವಿ ಬಂದರೂ ಟೌನ್ ಹಾಲ್ ಬಳಿ ಅನುಮತಿ ನೀಡಲ್ಲ ಎಂದು ಸ್ಪಷ್ಟಪಡಿಸಿದೆ.
ಮುಖ್ಯಾಂಶಗಳು
- ಮೇ 24ರಂದು ಬೆಂಗಳೂರಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕ್ರಮವೆಂದು ಪೋಸ್ಟ್ ವೈರಲ್
- ಪೋಸ್ಟ್ ವೈರಲ್ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಬೆಂಗಳೂರು ಪೊಲೀಸರು
- ಇಂತಹ ಕಾರ್ಯಕ್ರಮ ಆಯೋಜನೆಗೆ ಮನವಿ ಬಂದಿಲ್ಲ
- ಮನವಿ ಬಂದರೂ ಟೌನ್ಹಾಲ್ ಬಳಿ ಅನುಮತಿ ಇಲ್ಲ ಎಂದು ಪೊಲೀಸರಿಂದ ಸ್ಪಷ್ಟನೆ
ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ
ಕಾಕ್ರೋಜ್ ಜನತಾ ಪಾರ್ಟಿಯಿಂದ ಬೆಂಗಳೂರಿನ ಟೌನ್ ಹಾಲ್ ಬಳಿ ಮಾನವ ಸರಪಳಿ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಟೌನ್ ಹಾಲ್ ಬಳಿ ಕಾರ್ಯಕ್ರಮ ಆಯೋಜನೆಗೆ ಯಾವುದೇ ವ್ಯಕ್ತಿ, ಸಂಘಟನೆ, ಪಕ್ಷದಿಂದ ಅನುಮತಿ ಕೋರಿರುವ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ. ಈ ಸಂಬಂಧ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಇದನ್ನೂ ಓದಿ: Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?
ಸಾರ್ವಜನಿಕರಿಗೆ ಖಡಕ್ ಸೂಚನೆ
ಫ್ರೀಡಂ ಪಾರ್ಕ್ ಹೊರತುಪಡಿಸಿ, ಬೇರೆ ಯಾವುದೇ ಸ್ಥಳಗಳಲ್ಲಿ ಧರಣಿ, ಪ್ರತಿಭಟನಾ Rally ನಡೆಸಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಮನವಿ ಬಂದರೂ ಸಹ ಟೌನ್ ಹಾಲ್ ಬಳಿ ಅನುಮತಿ ನೀಡಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿ ಟೌನ್ ಹಾಲ್ ಮುಂಭಾಗ ಜನರು ಬಂದು ಸೇರುವುದು ನ್ಯಾಯಾಲಯ ಆದೇಶದ ಸ್ಪಷ್ಪ ಉಲ್ಲಂಘನೆಯಾಗಿರುತ್ತದೆ. ಹೀಗಾಗಿ ಜನರು ಟೌನ್ ಹಾಲ್ ಬಳಿ ಆಗಮಿಸಿ ಗುಂಪು ಸೇರಬಾರದು. ಅಲ್ಲದೇ ಸಾರ್ವಜನಿಕರು ಇಂತ ಪೋಸ್ಟ್ ಗಳನ್ನ ಹಂಚಿಕೊಳ್ಳಬಾರದು ಎಂದು ಸೂಚಿಸಿದ್ದಾರೆ.
ಮಾನವ ಸರಪಳಿ ನಿರ್ಮಾಣಕ್ಕೆ ಕರೆ ನೀಡಿದ್ದ ಪೋಸ್ಟ್ ವೈರಲ್
ಯುವಕರಿಗೆ ಭವಿಷ್ಯವಿಲ್ಲ. ಬೆಲೆ ಏರಿಕೆಯಿಂದ ಬದುಕಿಲ್ಲ. ವಿದ್ಯಾರ್ಥಿಗಳಿಗೆ ನೀಟು ಪರೀಕ್ಷೆಇಲ್ಲ. ನಮ್ಮ ಮತ ಕದಿಯುತ್ತದ್ದಾರೆ. ಬನ್ನಿ ಕಾಕ್ರೋಜ್ ಗಳ ಸಂದೇಶ ನೀಡೋಣ. ಇಲ್ಲಿ ನಾಯಕರಿಲ್ಲ. ನಮಗೆ ನಾವೇ ನಾಯಕರು. ಇಲ್ಲಿ ಸಂಘಟನೆ ಇಲ್ಲ. ಪ್ರಜೆಗಳು ಕೈ ಜೋಡಿಸುವುದೇ ಸಂಘಟನೆ . ಬನ್ನಿ ಶಕ್ತಿ ಪ್ರದರ್ಶಿಸೋಣ. ಆತ್ಮ ವಂಚಕ ಆಡಳಿತಕ್ಕೆ ಸಂದೇಶ ರವಾನಿಸೋಣ. ಹೀಗಾಗಿ ಟೌನ್ಹಾಲ್ ಬಳಿ ಮೇ 24ರಂದು ಬೆಳಗ್ಗೆ 11ಗಂಟೆಗೆ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಎಂದು ಪೋಸ್ಟ್ ಮಾಡಲಾಗಿತ್ತು. ಆದ್ರೆ, ಇದೀಗ ಪೊಲೀಸರ ಖಡಕ್ ಸೂಚನೆ ಬೆನ್ನಲ್ಲೇ ಟೌನ್ ಹಾಲ್ ಸಭೆ ಮುಂದೂಡಲಾಗಿದೆ ಎಂದು ಪೋಸ್ಟ್ ಮಾಡಲಾಗಿದೆ.





