ಗ್ರೇಟರ್ ಅಲ್ಲ ಲೂಟಿಕೋರರ ಬೆಂಗಳೂರು: ಮಳೆ ಅವಾಂತರದ ಬೆನ್ನಲ್ಲೇ ಕುಮಾರಸ್ವಾಮಿ ಟೀಕೆ
ಭಾರೀ ಮಳೆಯಿಂದ ಬೆಂಗಳೂರು ಜಲಾವೃತಗೊಂಡ ಬಳಿಕ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಗ್ರೇಟರ್ ಅಲ್ಲ ಲೂಟಿಕೋರರ ಬೆಂಗಳೂರು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿನ ದುರಾಡಳಿತವನ್ನು ಕುಮಾರಸ್ವಾಮಿ ಖಂಡಿಸಿದ್ದಾರೆ. ಜೆಡಿಎಸ್ ಕೂಡ ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯನ್ನು ಟೀಕಿಸಿದೆ.

ಬೆಂಗಳೂರು, ಮೇ 19: ಕರ್ನಾಟಕದ ರಾಜಧಾನಿ ಈಗ ‘ಗ್ರೇಟರ್ ಬೆಂಗಳೂರು’ ಅಲ್ಲ, ಲೂಟಿಕೋರರ ಬೆಂಗಳೂರು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ. ಶನಿವಾರ ಹಾಗೂ ಭಾನುವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಜಲಾವೃತಗೊಂಡ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಲೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಆಡಳಿತವನ್ನು ಸುಗಮಗೊಳಿಸುವ ಉದ್ದೇಶದೊಂದಿಗೆ ಮೇ 15 ರಂದು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ಬಂದಿತ್ತು. ಇದೀಗ ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಭಾರೀ ಮಳೆಯಾದಾಗ ಗ್ರೇಟರ್ ಬೆಂಗಳೂರು ಮುಳುಗುತ್ತದೆ ಮತ್ತು ಲಘು ಮಳೆಯಾದಾಗ ತೇಲುತ್ತದೆ ಎಂದು ಕುಮಾರಸ್ವಾಮಿ ಭಾನುವಾರ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ ತಿಳಿಸಿದ್ದಾರೆ. ಮೂಲಸೌಕರ್ಯಗಳನ್ನು ಸರಿಪಡಿಸುವಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ. ಗುಂಡಿಗಳು, ತೆರೆದ ಚರಂಡಿಗಳು ಮತ್ತು ಪದೇ ಪದೇ ಪ್ರವಾಹ ಉಂಟಾಗುವುದು ದುರಾಡಳಿತದ ಪುರಾವೆಯಾಗಿದೆ. ಮಳೆ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧವಾಗದೇ ಇರುವುದರ ಸೂಚಕವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಾರ್ವಜನಿಕರ ಹಣವನ್ನು ವ್ಯಯಿಸುವಲ್ಲಿನ ಹೊಣೆಗಾರಿಕೆ, ಬದ್ಧತೆಯನ್ನೂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರಸ್ತೆ ಗುಂಡಿಯನ್ನು ಮುಚ್ಚಲು ಮಣ್ಣು ಕೂಡ ಇಲ್ಲ, ಆದರೆ ಸುರಂಗ ರಸ್ತೆಗಳಿಗೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಟೆಂಡರ್ಗಳನ್ನು ಕರೆಯಲಾಗುತ್ತದೆ ಎಂದು ವ್ಯಂಗ್ಯವಾಡಿದ ಅವರು, ಜನರು ಪ್ರತಿಭಟಿಸದ ನಿರ್ಜೀವ ಕಲ್ಲುಗಳು ಎಂದು ಕಾಂಗ್ರೆಸ್ ಸರ್ಕಾರ ಭಾವಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಲು ನಾಲಾಯಕ್: ಜೆಡಿಎಸ್
ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಲು ನಾಲಾಯಕ್ ಎಂದು ಜೆಡಿಎಸ್ ಟೀಕಿಸಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಬೆಂಗಳೂರಿನ ನಾಗರಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ಅವರು, ಮನೆ ಸರಿಯಾಗಿ ಕಟ್ಟಿಲ್ಲ ಎಂದು ಉಡಾಫೆ ಮಾತು ಆಡುತ್ತಾರೆ ಎಂದು ಟೀಕಿಸಿದೆ.
ಜೆಡಿಎಸ್ ಎಕ್ಸ್ ಸಂದೇಶ
‘ @DKShivakumar ನೀವು ಬೆಂಗಳೂರು ಉಸ್ತುವಾರಿ ಸಚಿವರಾಗಲು ನಾಲಾಯಕ್.@INCKarnataka ದುರಾಡಳಿತದಲ್ಲಿ ಬೆಂಗಳೂರಿನ ನಾಗರಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ಅವರು, ಮನೆ ಸರಿಯಾಗಿ ಕಟ್ಟಿಲ್ಲ ಎಂದು ಉಡಾಫೆ ಮಾತು ಆಡುತ್ತಿರಾ.
ಸಿಲಿಕಾನ್…
— Janata Dal Secular (@JanataDal_S) May 19, 2025
ಸಿಲಿಕಾನ್ ಸಿಟಿಯಲ್ಲಿ ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಸಿಲ್ಲ, ಮೋರಿಗಳನ್ನು ಕ್ಲೀನ್ ಮಾಡಿಸಿಲ್ಲ. ಒಂದರೆಡು ತಾಸು ಮಳೆ ಬಂದರೆ ರಸ್ತೆಗಳು ಸಂಪೂರ್ಣ ಕೆರೆಯಾಗುತ್ತದೆ. ಅದಕ್ಷ ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿನ ಮಾನ ವಿಶ್ವ ಮಟ್ಟದಲ್ಲಿ ಹರಾಜಾಗುತ್ತಿದೆ ಎಂದು ಜೆಡಿಎಸ್ ಕಿಡಿ ಕಾರಿದೆ.
ಇದನ್ನೂ ಓದಿ: ಕೇಂದ್ರ ಕೊಟ್ಟ ಹಣ ಬಳಸುವಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಫಲ: ಅಂಕಿಅಂಶ ಸಮೇತ ಸಿದ್ದರಾಮಯ್ಯಗೆ ಜೋಶಿ ತಿರುಗೇಟು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಬೆಂಗಳೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿ ಪಡಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಕಸದ ಮಾಫಿಯಾಕ್ಕೆ ಮಣಿದು ಕಮಿಷನ್ ಆಸೆಗೆ ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಿದ್ದೀರಿ. ಇದು ಸರ್ಕಾರದ ಅಸಮರ್ಪಕ ಆಡಳಿತಕ್ಕೆ ಹಿಡಿದ ಕನ್ನಡಿ. ‘‘ಗ್ರೇರೇಟರ್ ಬೆಂಗಳೂರು’’, ‘‘ಬ್ರ್ಯಾಂಡ್ ಬೆಂಗಳೂರು’’ ಬರೀ ಹೆಸರಿಗಷ್ಟೇ. ಈ ಲೂಟಿ ಯೋಜನೆಯ ನಿಜವಾದ ಫಲಾನುಭವಿಗಳು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ಸಿಗರೇ ಆಗಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.








