ಸುಪ್ರೀಂ ಕೋರ್ಟ್ ಹೆಸರಲ್ಲೇ ವಂಚನೆ: ಜೈಲಿನಿಂದ ಎಸ್ಕೇಪ್ ಆಗಿದ್ದ ಕೈದಿಯ ಕಳ್ಳಾಟ 8 ವರ್ಷದ ಬಳಿಕ ಬಯಲು
ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ತನ್ನ ಬುದ್ಧಿವಂತಿಯಿಂದ ಸುಪ್ರೀಂ ಕೋರ್ಟ್ ನಕಲಿ ಆದೇಶ ಸೃಷ್ಟಿಸಿ 2018ರಲ್ಲಿ ರಾಜಾರೋಷವಾಗಿ ಹೊರಬಿದ್ದಿದ್ದ. ಆದರೆ ಇದೀಗ ಬರೋಬ್ಬರಿ ಎಂಟು ವರ್ಷಗಳ ಬಳಿಕ ಕೈದಿಯ ಮಹಾ ವಂಚನೆ ಬಯಲಾಗಿದೆ. ಸದ್ಯ ಪೊಲೀಸರು ವಂಚಕ ಕೈದಿಯ ಪತ್ತೆಗೆ ಜಾಲ ಬೀಸಿದ್ದಾರೆ.

ಆನೇಕಲ್, ಮೇ 24: ಬೆಂಗಳೂರಿನಲ್ಲಿ (bangaluru) ಹೈ ಸೆಕ್ಯೂರಿಟಿ ಜೈಲು ಎಂದೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ (parappana agrahara jail) ಹೆಸರಾಗಿದೆ. ಹೀಗಿರುವಾಗ ಚಾಲಾಕಿ ಕೈದಿಯೊಬ್ಬ (prisoner) ಜೈಲಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಹೊರಗೆ ಬಂದಿದ್ದ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ನ ನಕಲಿ ಆದೇಶ ಸೃಷ್ಟಿ ಮಾಡಿ ಜೈಲಿನಿಂದ ರಿಲೀಸ್ ಆಗಿ ಇದೀಗ ಎಂಟು ವರ್ಷಗಳ ಬಳಿಕ ಆತನ ಕಳ್ಳಾಟ ಬಯಲಾಗಿದೆ. ಸದ್ಯ ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎಫ್ಐಆರ್ ದಾಖಲಾಗಿದೆ.
ಮುಖ್ಯಾಂಶಗಳು
- ನಕಲಿ ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಸೃಷ್ಟಿ
- 8 ವರ್ಷಗಳ ಬಳಿಕ ಕೈದಿಯ ಮಹಾ ವಂಚನೆ ಬಯಲು
- ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
ನಡೆದಿದ್ದೇನು?
ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಮತ್ತು ಆತನ ಗ್ಯಾಂಗ್ 2001ರಲ್ಲಿ ಭಾರೀ ಮೊತ್ತದ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ಕೋರ್ಟ್, ಶಂಕರ್ನನ್ನು ಅಪರಾಧಿ ಎಂದು ಘೋಷಿಸಿ ಐಪಿಸಿ ಸೆಕ್ಷನ್ 364A (ಹಣಕ್ಕಾಗಿ ಅಪಹರಣ) ಮತ್ತು 120B (ಸಂಚು ರೂಪಿಸುವಿಕೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೋರ್ಟ್ ಆದೇಶದಂತೆ ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ.
ಸಿನಿಮೀಯ ಸ್ಕೆಚ್
ಜೈಲಿನಲ್ಲಿದ್ದ ಶಂಕರ್ ಆರ್ಮುಗಮ್ ಹೊರಬರಲು ಮಾಸ್ಟರ್ ಪ್ಯಾನ್ ಹಾಕಿದ್ದ. ತನಗೆ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್ನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ಬಿಂಬಿಸುವ ನಕಲಿ ಆದೇಶ ಪತ್ರವನ್ನು ತಾನೇ ಖುದ್ದು ಸೃಷ್ಟಿಸಿದ್ದ. ಈ ನಕಲಿ ದಾಖಲೆಯನ್ನು ಜೈಲು ಅಧಿಕಾರಿಗಳ ಕೈಗಿಟ್ಟು, ಕೇವಲ 10 ಸಾವಿರ ರೂ ದಂಡ ಪಾವತಿಸಿ, 2018 ನವೆಂಬರ್ 13ರಂದು ರಾಜಾರೋಷವಾಗಿ ಜೈಲಿನಿಂದ ಹೊರಬಂದಿದ್ದ.
ಅನಾಮಧೇಯ ಪತ್ರದಿಂದ ಬಯಲಾದ ಸತ್ಯ
ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ ಒಂದು ರಹಸ್ಯ ಅನಾಮಧೇಯ ಪತ್ರ ಬಂದಿದೆ. ಆ ಪತ್ರದ ಆಧಾರದ ಮೇಲೆ ಜೈಲು ಇಲಾಖೆ ಆಂತರಿಕ ತನಿಖೆ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ತನಿಖೆಯಲ್ಲಿ ಶಂಕರ್ ಸಲ್ಲಿಕೆ ಮಾಡಿದ್ದ ಸುಪ್ರೀಂ ಕೋರ್ಟ್ ಆದೇಶ ಸಂಪೂರ್ಣ ನಕಲಿ ಅನ್ನೋದು ಸಾಬೀತಾಗಿದೆ. ಕೇವಲ ಕೈದಿಯೊಬ್ಬನೇ ಇಷ್ಟು ದೊಡ್ಡ ಸಾಹಸ ಮಾಡಲು ಸಾಧ್ಯವಿಲ್ಲ. ಜೈಲಿನ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಅವರ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಎಲ್ಲಾ ಆಯಾಮದಲ್ಲೂ ತನಿಖೆ ನಡೆದಿದೆ.
ಇದನ್ನೂ ಓದಿ: ಒಬ್ಬ ಖದೀಮ ಮೂರು ಮಾದರಿಯಲ್ಲಿ ಕಳ್ಳತನ: ಮಲ್ಟಿ ಟ್ಯಾಲೆಂಟೆಡ್ ಕಳ್ಳ ಕೊನೆಗೂ ಅರೆಸ್ಟ್
ಸದ್ಯ ಫೋರ್ಜರಿ ಮತ್ತು ವಂಚನೆ ಅಡಿಯಲ್ಲಿ ಶಂಕರ್ ಆರ್ಮುಗಮ್ ವಿರುದ್ಧ ಹೊಸದಾಗಿ ಪ್ರಕರಣ ದಾಖಲಾಗಿದ್ದು, ದೇಶದ ಕಾನೂನು ವ್ಯವಸ್ಥೆಗೆ ಸವಾಲು ಹಾಕಿದ ಈ ಖತರ್ನಾಕ್ ಕೈದಿ ಹಾಗೂ ಆತನಿಗೆ ಸಾಥ್ ನೀಡಿದವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




