ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆ ಸಿಎಂ ರಾಜ್ಯಪಾಲರ ಅನುಮತಿ ಪ್ರಶ್ನಿಸಲು ಮುಂದಾಗಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಲು ಸಿಎಂ ಪರ ವಕೀಲರು ಸಿದ್ಧತೆ ನಡೆಸುತ್ತಿದ್ದು ಸೋಮವಾರ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಲಿದ್ದಾರೆ.

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್: ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?
ಸಿದ್ದರಾಮಯ್ಯ
Edited By: ಆಯೇಷಾ ಬಾನು

Updated on: Aug 17, 2024 | 1:47 PM

ಬೆಂಗಳೂರು, ಆಗಸ್ಟ್​.17: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್‌) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಅನುಮತಿ ನೀಡಿದ್ದಾರೆ. ಸದ್ಯ ಕಾವೇರಿ ನಿವಾಸದಲ್ಲೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಸಿಎಂ ನಿವಾಸದಲ್ಲಿ ಕಾನೂನು ಹೋರಾಟದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಶುರುವಾಗಿವೆ. ಹಾಗಾದರೆ ಸಿಎಂ ಮುಂದಿರುವ ಆಯ್ಕೆಗಳೇನು?

ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರೋ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಆರಂಭವಾಗಲಿದೆ. ಇದ್ರಿಂದ ಸಿದ್ದರಾಮಯ್ಯ ತನಿಖೆ ಅಥವಾ ಕೋರ್ಟ್ ವಿಚಾರಣೆ ಎದುರಿಸಬೇಕಾಗುತ್ತೆ.ಅಲ್ಲದೇ, ಈಗಾಗಲೇ ದಾಖಲಾಗಿರೋ ಖಾಸಗಿ ದೂರಿಗೆ ರಾಜ್ಯಪಾಲರ ಪೂರ್ವಾನುಮತಿಯ ಬಲ ಸಿಗಲಿದೆ. ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂರಿಂದ ಖಾಸಗಿ ದೂರು ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಅನುಮತಿ ವಿಚಾರವೂ ಪ್ರಸ್ತಾಪವಾಗಿತ್ತು. ಇದೀಗ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿರೋದ್ರಿಂದ ಕೋರ್ಟ್ ಆದೇಶ ಮಹತ್ವ ಪಡೆಯಲಿದೆ.

ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ 3 ಸಾಧ್ಯತೆಗಳಿವೆ. ಮೇಲ್ನೋಟಕ್ಕೆ ಆರೋಪ ಕಂಡುಬಂದ್ರೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ತನಿಖೆಗೆ ಆದೇಶ ನೀಡಬಹುದು. ಅಥವಾ ತಾವೇ ಪರಿಜ್ಞಾನಕ್ಕೆ ಪಡೆದು ಸಿಎಂಗೆ ಸಮನ್ಸ್ ಜಾರಿಗೊಳಿಸಬಹುದು. ಇಲ್ಲವಾದ್ರೆ ದೂರಿನಲ್ಲಿ ಸತ್ಯಾಂಶವಿಲ್ಲ ಅಂತಾ ಅನಿಸಿದ್ರೆ ಖಾಸಗಿ ದೂರನ್ನ ವಜಾಗೊಳಿಸಬಹುದು)

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ, ಕಾನೂನು ಸಮಾಲೋಚನೆಯಲ್ಲಿ ಸಿಎಂ

ಕಾವೇರಿ ನಿವಾಸದಲ್ಲಿ ಸಿಎಂ ಚರ್ಚೆ

ಇನ್ನು ಕಾನೂನು ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಸಿದ್ದರಾಮಯ್ಯನವರು ಕಾನೂನು ತಜ್ಞರ ಜೊತೆ ಚರ್ಚಿಸಿದ್ದರು. ಇದೀಗ ಮತ್ತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗುಪ್ತಚರ ಇಲಾಖೆ ಮುಖ್ಯಸ್ಥ ಶರತ್ ಚಂದ್ರ ಜೊತೆ ಪ್ರಾಸಿಕ್ಯೂಷನ್​ಗೆ​ ಅನುಮತಿ ನೀಡಿರುವ ಬಗ್ಗೆ ಚರ್ಚಿಸುತ್ತಿದ್ದಾರೆ.

ಸಿಎಂ ವಿರುದ್ಧದ ದೂರಿನಲ್ಲಿ ಏನಿದೆ?

ಮುಡಾದಿಂದ ಸ್ವಾಧೀನಗೊಂಡ ಬಳಿಕ ಕೃಷಿ ಜಮೀನು ಅಸ್ತಿತ್ವದಲ್ಲೇ ಇರಲಿಲ್ಲ. ನಿವೇಶನಗಳಾಗಿ ಹಂಚಲಾಗಿದ್ದ ಜಮೀನನ್ನು ಖರೀದಿಸಿದ್ದಲ್ಲದೇ ಕೃಷಿ ಜಮೀನೆಂದು ಬಿಂಬಿಸಿ ಭೂ ಪರಿವರ್ತನೆ ಮಾಡಿಸಿದ್ದಾರೆ. ಹೀಗಾಗಿ ಸಿಎಂ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು 55 ಕೋಟಿ 80 ಲಕ್ಷ ಬೆಲೆ ಬಾಳುವ ನಿವೇಶನಗಳ ಹಂಚಿಕೆ ಪಡೆದು ಅಕ್ರಮ ಲಾಭ ಗಳಿಸಿದ್ದಾರೆ. ಮುಡಾ, ಜಮೀನಿಗೆ ಬದಲಾಗಿ ನಿವೇಶನಗಳನ್ನು ಹಂಚಿದಾಗ ಸಿಎಂ ಪುತ್ರ ಯತೀಂದ್ರ ಶಾಸಕರಾಗಿದ್ದು ಮುಡಾದ ಭಾಗವಾಗಿದ್ದರು. ಅಲ್ಲದೇ ಸಿದ್ದರಾಮಯ್ಯ ಲೋಕಾಯುಕ್ತರಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಈ ಜಮೀನುಗಳ ವಿವರ ನೀಡಿದ್ರು. ಆದ್ರೆ 2013 ರ ಚುನಾವಣಾ ಪ್ರಮಾಣಪತ್ರದಲ್ಲಿ ಈ ಜಮೀನಿರುವುದನ್ನು ಘೋಷಿಸದೇ ಜನಸಾಮಾನ್ಯರಿಂದ ಮರೆಮಾಚಿದ್ದಾರೆಂದು ಟಿ.ಜೆ. ಅಬ್ರಹಾಂ ಆರೋಪಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:47 am, Sat, 17 August 24

Loading...
Unable to load recommendations.
Follow Us