ಕಾಲ್ತುಳಿತ ಮಧ್ಯೆ ದಾಖಲೆ ಬರೆದ ಮೆಟ್ರೋ: ನಿನ್ನೆ ಒಂದೇ ದಿನ 9 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ
ಆರ್ಸಿಬಿ ತಂಡದ ವಿಜಯೋತ್ಸವ ಹಿನ್ನೆಲೆ ಬೆಂಗಳೂರಿನ ನಮ್ಮ ಮೆಟ್ರೋ ದಾಖಲೆಯ ಪ್ರಯಾಣಿಕರ ಸಂಖ್ಯೆಯನ್ನು ದಾಖಲಿಸಿದೆ. ನೇರಳೆ ಮತ್ತು ಹಸಿರು ಮಾರ್ಗದ ಸೇರಿದಂತೆ ನಿನ್ನೆ ಒಂದೇ ದಿನ 9,66,732 ಜನರು ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಬಿಎಂಆರ್ಸಿಎಲ್ ಹೊಸ ದಾಖಲೆ ಬರೆದಿದೆ. ಇದು ಹಿಂದಿನ ದಾಖಲೆ ಮುರಿದಿದೆ.

ಬೆಂಗಳೂರು, ಜೂನ್ 05: ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಕದನದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB), ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತ್ತು. ಬಳಿಕ ಸಂಭ್ರಮಾಚರಣೆಗಾಗಿ ಆರ್ಸಿಬಿ ತಂಡ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಭೀಕರ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ 11 ಜನರು ಮೃತಪಟ್ಟಿದ್ದಾರೆ. ಈ ಮಧ್ಯೆ ನಿನ್ನೆ ಒಂದೇ ದಿನ ಮೆಟ್ರೋದಲ್ಲಿ (Namma Metro) 9,66,732 ಜನರು ಪ್ರಯಾಣ ಮಾಡುವ ಮೂಲಕ ನಮ್ಮ ಮೆಟ್ರೋ ಹೊಸ ದಾಖಲೆ ಬರೆದಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮದ ಪ್ರಕಾರ, ಎಂದಿಗಿಂತ ನಿನ್ನೆ ಪ್ರಯಾಣಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿತ್ತು. ನೇರಳೆ ಮಾರ್ಗದಲ್ಲಿ 4,78,334 ಜನರು ಪ್ರಯಾಣ ಮಾಡಿದರೆ, ಮಾದಾವರ ಟು ಸಿಲ್ಕ್ ಇನ್ಸ್ಟಿಟ್ಯೂಟ್ (ಹಸಿರು ಮಾರ್ಗದಲ್ಲಿ) 2,84,674 ಜನರು ಪ್ರಯಾಣಿಸಿದ್ದಾರೆ. ಮೆಜೆಸ್ಟಿಕ್ ನಿಲ್ದಾಣದಿಂದಲೇ 2,03,724 ಜನರು ಪ್ರಯಾಣ ಮಾಡಿದ್ದಾರೆ.
ಇದನ್ನೂ ಓದಿ: ಬೃಹತ್ ಕಾರ್ಯಕ್ರಮ, ಸಮಾರಂಭಗಳಿಗೆ ಎಸ್ಒಪಿ: ಗೃಹ ಸಚಿವ ಪರಮೇಶ್ವರ್ ಘೋಷಣೆ
ಒಟ್ಟಾರೆ ನಿನ್ನೇ ಒಂದೇ ದಿನ ನಮ್ಮ ಮೆಟ್ರೋದಲ್ಲಿ 9,66,732 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈ ಹಿಂದೆ 8.7 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ನಮ್ಮ ಮೆಟ್ರೋ ದಾಖಲೆ ಬರೆದಿತ್ತು. ಇದೀಗ ಆ ದಾಖಲೆಯನ್ನು ಮೆಟ್ರೋ ಹಿಂದಿಕ್ಕಿದೆ.
ಇದನ್ನೂ ಓದಿ: ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸಿಎಂ, ಡಿಸಿಎಂ ಸೇರಿ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ದೂರು
ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳವಾಗಿತ್ತು ಎಂದು ಬಿಎಂಆರ್ಸಿಎಲ್ನ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ನಿನ್ನೆ ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಜನರು ಸಾವನ್ನಪ್ಪಿದ್ದು, ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಸದ್ಯ ಈ ದುರಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಮ್ಮ ಮೆಟ್ರೋ ವಿಷಾದ ವ್ಯಕ್ತಪಡಿಸಿದೆ.
ನಮ್ಮ ಮೆಟ್ರೋ ಟ್ವಿಟ್
— ನಮ್ಮ ಮೆಟ್ರೋ (@OfficialBMRCL) June 5, 2025
ಈ ಬಗ್ಗೆ ಟ್ವೀಟ್ ಮಾಡಿರುವ ಮೆಟ್ರೋ, ನಿನ್ನೆ ಸಂಭವಿಸಿದ ದುರದೃಷ್ಟಕರ ಘಟನೆಯಿಂದ ನಾವು ಅತೀವವಾಗಿ ದುಃಖಿತರಾಗಿದ್ದೇವೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ, ನಾವು ಶೋಕಾಚರಣೆ ಮಾಡುತ್ತೇವೆ ಮತ್ತು ಈ ದುರಂತದಿಂದ ಬಾಧಿತರಾದ ಕುಟುಂಬಗಳಿಗೆ ನಮ್ಮ ಹೃದಯಪೂರ್ವಕ ಸಂತಾಪವನ್ನು ಸೂಚಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:26 pm, Thu, 5 June 25







