ವಾಹನಗಳ ಮೇಲೆ ಪ್ರಚೋದನಾಕಾರಿ ಬರಹ, ಸ್ಟಿಕ್ಕರ್ ಅಂಟಿಸಿದರೆ ದಂಡ: ದರ್ಶನ್ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಆರ್​ಟಿಒ

ನಟ ದರ್ಶನ್ ಬಂಧನದ‌ ನಂತರ ಅವರ ಅಭಿಮಾನಿಗಳು ವಾಹನಗಳ ಮೇಲೆ ತರಹೇವಾರಿ ಸ್ಟಿಕ್ಕರ್​​ಗಳನ್ನು ಅಂಟಿಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಆರ್​ಟಿಒ ಕೆಂಡಾಮಂಡಲವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ನೀಡಿದೆ. ಆರ್​​ಟಿಒ ಎಚ್ಚರಿಕೆಯಲ್ಲೇನಿದೆ? ಯಾವ ರೀತಿಯ ಸ್ಟಿಕ್ಕರ್, ನಂಬರ್, ಫೋಟೋ ಹಾಕುವುದು ಸರಿ, ಯಾವ ರೀತಿಯದ್ದು ಹಾಕುವುದು ತಪ್ಪು ಎಂಬ ವಿವರ ಇಲ್ಲಿದೆ.

ವಾಹನಗಳ ಮೇಲೆ ಪ್ರಚೋದನಾಕಾರಿ ಬರಹ, ಸ್ಟಿಕ್ಕರ್ ಅಂಟಿಸಿದರೆ ದಂಡ: ದರ್ಶನ್ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಆರ್​ಟಿಒ
ದರ್ಶನ್ ಫ್ಯಾನ್ಸ್​ಗೆ ಆರ್​ಟಿಒದಿಂದಲೂ ಬಿಗ್ ಶಾಕ್!
Follow us
| Updated By: ಗಣಪತಿ ಶರ್ಮ

Updated on: Sep 06, 2024 | 6:58 AM

ಬೆಂಗಳೂರು, ಸೆಪ್ಟೆಂಬರ್ 6: ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಆದಮೇಲೆ ವಾಹನಗಳ ಮೇಲೆ ಆಕ್ಷೇಪಾರ್ಹ, ಪ್ರಚೋದನಾಕಾರಿ, ಬೇರೆ ನಟರ ಅಭಿಮಾನಿಗಳ ವಿರುದ್ಧ ಟಾಂಗ್ ಕೊಡುವಂತೆ ಸ್ಟಿಕ್ಕರ್, ಬರಹಗಳ ಅಳವಡಿಕೆ ಮಾಡುವುದು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಬರಹಗಳು ಹೆಚ್ಚಾಗಿವೆ. ಈ ಹಿಂದೆ ಈ‌ ಮಟ್ಟಿಗೆ ಬರಹಗಳನ್ನು ವಾಹನಗಳ ಮೇಲೆ ಹಾಕಿರಲಿಲ್ಲ. ಇದು ಆರ್​ಟಿಒ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಅನವಶ್ಯಕ, ಪ್ರಚೋದನಾಕಾರಿ ಬರಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ನೆಚ್ಚಿನ‌ ನಟರ ಪೋಟೋಗಳನ್ನು ವಾಹನಗಳ ಮೇಲೆ ಹಾಕುವುದರ ಜತೆಗೆ ಪ್ರಚೋದನಾಕಾರಿ ಬರಹ‌, ಸ್ಟಿಕ್ಕರ್ ಅಂಟಿಸಲು ಅವಕಾಶವಿಲ್ಲ ಎಂದು ಆರ್​ಟಿಒ ಅಧಿಕಾರಿಗಳು ಹೇಳಿದ್ದಾರೆ.

ಈವರೆಗೆ ನಂಬರ್ ಪ್ಲೇಟ್ ಮೇಲೆ ಮಾತ್ರ ಬರಹ, ಸ್ಟಿಕ್ಕರ್ ಇದ್ದರೆ ಗಮನಿಸುತ್ತಿದ್ದೆವು. ಇನ್ನುಮುಂದೆ ವಾಹನಗಳ ಇತರ ಭಾಗಗಳಲ್ಲಿ ಕೂಡ ಅನಧಿಕೃತ ಬರಹ ಹಾಕಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೀಳಲಿದೆ ದಂಡ!

ಎಚ್ಚರಿಕೆ ಉಲ್ಲಂಘಿಸಿ ಸ್ಟಿಕ್ಕರ್, ಬರಹ ಅಂಟಿಸಿದಲ್ಲಿ ಮೊದಲ ಬಾರಿಗೆ 500 ರೂಪಾಯಿ, ಎರಡನೇ ಬಾರಿ 1000 ರೂಪಾಯಿ, ಮೂರನೇ ಬಾರಿ ಅದೇ ತಪ್ಪು ಮಾಡಿದರೆ ಪರವಾನಗಿಯನ್ನೇ ರದ್ದು ಮಾಡುತ್ತೇವೆ ಎಂದು ಆರ್​ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಆರ್​ಟಿಒ ಅಡಿಷನಲ್ ಕಮಿಷನರ್ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.

ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆರ್​​ಟಿಒ ಇಲಾಖೆಗಳಿಗೆ ನಿರ್ದೇಶನ ಕೊಡುತ್ತಾ ಬಂದಿದೆ. ಅದರ ಅನ್ವಯ ಆರ್​​ಟಿಒ ಅಧಿಕಾರಿಗಳು ಕೇಸುಗಳನ್ನ ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್​​ಟಿಒ ಮಾಡುತ್ತಿದೆ. ಜೊತೆಗೆ 3 ವರ್ಷದಲ್ಲಿ ಹಲವು ಪ್ರಕರಣ ದಾಖಲು ಮಾಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಕಾನೂನು ಪಾಲಿಸಬೇಕು ಎಂದು ವಾನಹ ಸವಾರ ಶಿವಮೂರ್ತಿ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಜೂನ್ 9 ರಂದು ಪಟ್ಟಣಗೆರೆ ಶೆಡ್​ನಲ್ಲಿ ಏನೇನಾಯ್ತು? ಹಲ್ಲೆ ಮಾಡಿದ್ದು ಯಾರ್ಯಾರು? ಇಂಚಿಂಚೂ ವಿವರ

ಒಟ್ಟಿನಲ್ಲಿ ನಾವು ಮಾಡಿದ್ದೇ ಸರಿ. ನಾವು ಏನು ಮಾಡಿದರೂ ಯಾರೂ ಕೇಳಬಾರದು ಎಂದು ಹುಚ್ಚಾಟ ಪ್ರದರ್ಶನ ಮಾಡಿದರೆ ಇನ್ನು ಮುಂದೆ ಆರ್​ಟಿಒದಿಂದ ಕ್ರಮ ಖಚಿತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ