ಬೆಂಗಳೂರು ತುಮಕೂರು ಮೆಟ್ರೋ ಸ್ಟುಪಿಡ್ ಐಡಿಯಾ ಎಂದ ತೇಜಸ್ವಿ ಸೂರ್ಯ! ಕೊಟ್ಟ ಕಾರಣ ಇಲ್ಲಿದೆ

ಬೆಂಗಳೂರು ಮತ್ತು ತುಮಕೂರು ನಡುವೆ ಮೆಟ್ರೋ ರೈಲು ಸಂಪರ್ಕ ಯೋಜನೆಗೆ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಯೋಜನೆಯನ್ನು ‘ಮೂರ್ಖತನದಿಂದ ಕೂಡಿದ್​ದು’ ಎಂದು ಟೀಕಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕೂಡ ಮೆಟ್ರೋ ರೈಲಿನ ಇತಿಮಿತಿ ಬಗ್ಗೆ ಮಾತನಾಡಿದ್ದಾರೆ. ಆದರೆ, ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಈ ಯೋಜನೆಯನ್ನು ಅವರ ಅವಧಿಯಲ್ಲೇ ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು ತುಮಕೂರು ಮೆಟ್ರೋ ಸ್ಟುಪಿಡ್ ಐಡಿಯಾ ಎಂದ ತೇಜಸ್ವಿ ಸೂರ್ಯ! ಕೊಟ್ಟ ಕಾರಣ ಇಲ್ಲಿದೆ
ವಿ ಸೋಮಣ್ಣ, ಮೆಟ್ರೋ, ತೇಜಸ್ವಿ ಸೂರ್ಯ
Updated By: Ganapathi Sharma

Updated on: May 17, 2025 | 12:32 PM

ಬೆಂಗಳೂರು, ಮೇ 17: ಬೆಂಗಳೂರು ಹಾಗೂ ತುಮಕೂರು ಮಧ್ಯೆ ಮೆಟ್ರೋ (Namma Metro) ರೈಲು ಸಂಪರ್ಕ ಯೋಜನೆ ಸಂಬಂಧ ಖಾಸಗಿ ಕಂಪನಿ ಸಲ್ಲಿಸಿದ್ದ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಬಿಎಂಆರ್​ಸಿಎಲ್  (BMRCL) ಸಲ್ಲಿಕೆ ಮಾಡಿದ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲದೆ, ಬೆಂಗಳೂರು ತುಮಕೂರು ಮೆಟ್ರೋ ಸಂಪರ್ಕ ಒಂದು ಸ್ಟುಪಿಡ್ ಐಡಿಯಾ ಎಂದು ಟೀಕಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದ ಅವರು, ಈ ಯೋಜನೆಯನ್ನು ವಿರೋಧಿಸಲು ಕಾರಣವೇನು ಎಂಬುದನ್ನೂ ತಿಳಿಸಿದ್ದಾರೆ.

‘‘ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರ ಮೂರ್ಖತನದಿಂದ ಕೂಡಿದ್ದು. ಅದರ ಬದಲಾಗಿ ಅವರು ಬದಲಾಗಿ ಅವರು ಬೆಂಗಳೂರಿನಲ್ಲಿ ಬಾಕಿ ಇರುವ ಮೆಟ್ರೋ ಮಾರ್ಗಗಳ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸುವ ಮತ್ತು ಬೆಂಗಳೂರಿನೊಳಗೆ ಮೆಟ್ರೋ ಜಾಲವನ್ನು ಮತ್ತಷ್ಟು ವಿಸತರಿಸುವತ್ತ ಗಮನಹರಿಸಬೇಕು. ಮೆಟ್ರೋ ಎಂಬುದು ನಗರದೊಳಗಿನ ಸಂಪರ್ಕವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ್ದು. ತುಮಕೂರಿಗೆ ಆರ್​​ಆರ್​ಟಿಎಸ್ ಅಥವಾ ಉಪನಗರ ರೈಲು ಯೋಜನೆ (ಸಬ್ ಅರ್ಬನ್ ರೈಲ್) ಒದಗಿಸಬೇಕು’’ ಎಂದು ತೇಜಸ್ವಿ ಸೂರ್ಯ ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
ಹೊನ್ನಾವರದ ವೀಳ್ಯದೆಲೆಗೆ ಪಾಕ್ ದೊಡ್ಡ ಮಾರುಕಟ್ಟೆ! ಆದರೂ ಕಳ್ಸಲ್ಲ ರೈತರು
ಅಂಗಾಂಗ ದಾನದಲ್ಲಿ ಧಾರವಾಡಕ್ಕೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!
ಬೆಂಗಳೂರು ತುಮಕೂರು ಮೆಟ್ರೋ ಬಹುತೇಕ ಪಕ್ಕಾ: ಸರ್ಕಾರಕ್ಕೆ ವರದಿ ಸಲ್ಲಿಕೆ
ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!

ತೇಜಸ್ವಿ ಸೂರ್ಯ ಎಕ್ಸ್ ಸಂದೇಶ

ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಭಾಸ್ಕರ ರಾವ್ ಆಕ್ಷೇಪ

ತುಮಕೂರಿಗೆ ಮೆಟ್ರೋ ವಿಸ್ತರಿಸುವ ಯೋಜನೆಗೆ ಮತ್ತೊಬ್ಬ ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಮೆಟ್ರೋ ಎಂದರೇನು, ಸಬ್ ಅರ್ಬನ್, ಇಂಟರ್​ ಸಿಟಿ ಹಾಗೂ ದೀರ್ಘ ದೂರ ಕ್ರಮಿಸುವ ರೈಲುಗಳ ನಡುವಣ ವ್ಯತ್ಯಾಸ ಏನು ಎಂಬುದನ್ನು ಯಾರಾದರೂ ಈ ಸರ್ಕಾರಕ್ಕೆ ಅರ್ಥ ಮಾಡಿಸುವಿರಾ? ಈ ಬೇಡಿಕೆ ಇನ್ನು ಮುಂದೆ ವಿಜಯಪುರ, ಚಿತ್ತಾಪುರ, ಬೆಳಗಾವಿಗೂ ವಿಸ್ತರಿಸಬಹುದು’ ಎಂದು ಅವರು ಉಲ್ಲೇಖಿಸಿದ್ದಾರೆ.

ನಮ್ಮ ಅವಧಿಯಲ್ಲೇ ತುಮಕೂರಿಗೆ ಮೆಟ್ರೋ: ಸೋಮಣ್ಣ

ಒಂದೆಡೆ ಬಿಜೆಪಿ ನಾಯಕರಾದ ತೇಜಸ್ವಿ ಸೂರ್ಯ ಹಾಗೂ ಭಾಸ್ಕರ್ ರಾವ್ ತುಮಕೂರಿಗೆ ಮೆಟ್ರೋ ರೈಲು ವಿಸ್ತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರೆ ಮತ್ತೊಂದೆಡೆ, ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ‘ನಮ್ಮ ಅವಧಿಯಲ್ಲೇ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ದೊರೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ತುಮಕೂರು ಮೆಟ್ರೋ ಸಂಚಾರ ಬಹುತೇಕ ಪಕ್ಕಾ: ಕಾರ್ಯಸಾಧ್ಯತಾ ಪರೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ

ತುಮಕೂರಿಗೆ ಮೆಟ್ರೋ ಯೋಜನೆ ವಿಸ್ತರಣೆ ಸಂಬಂಧ ಬಿಎಂಆರ್​ಸಿಎಲ್ ಈಗಾಗಲೇ ವರದಿ ಕೊಟ್ಟಿದೆ. ನಮ್ಮ ಅವಧಿಯಲ್ಲೇ ಇದನ್ನು ಕಾರ್ಯರೂಪಕ್ಕೆ ತರುವ ಕೆಲಸ ಆಗಲಿದೆ. ತುಮಕೂರಿನ ಜನರಿಗೆ ಕೇಂದ್ರದ ಎಲ್ಲಾ ಸೌಲಭ್ಯಗಳು ಸಿಗಬೇಕು. ಇನ್ನೊಂದು ತಿಂಗಳಲ್ಲಿ ತುಮಕೂರು ಜನರಿಗೆ ದೊಡ್ಡ ಸುದ್ದಿ ಕೊಡುತ್ತೇವೆ. ಅದು ಇಡೀ ತುಮಕೂರಿನ ಚಿತ್ರಣವನ್ನೆ ಬದಲಾವಣೆ ಮಾಡಲಿದೆ. ತುಮಕೂರು ನಗರ ಬೆಂಗಳೂರಿನ 2ನೇ ನಗರವಾಗಿ ಬೆಳೆಯುವುದು ಖಂಡಿತಾ ಎಂದು ಸೋಮಣ್ಣ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ