TV9 Kannada News Live: ಇಂದು ಮೂರನೇ ದಿನದ ಮಳೆಗಾಲದ ಅಧಿವೇಶನ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Karnataka News Today Live Updates: ಮುಂಗಾರು ಅಧಿವೇಶನದ 3ನೇ ದಿನ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ-ಜೆಡಿಎಸ್ ಪ್ರತಿಭಟನೆಗೆ ಸಜ್ಜಾಗಿದ್ದು, ಸದನದಲ್ಲಿ ಭಾರಿ ಕಾದಾಟ ಸಾಧ್ಯತೆ. ಇತ್ತ ಪಶ್ಚಿಮ ಬಂಗಾಳದ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಏಳು ಮಂದಿ ಸಜೀವ ದಹನಗೊಂಡಿದ್ದಾರೆ. ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ ಪಡೆಯಿರಿ.

TV9 Kannada News Live: ಇಂದು ಮೂರನೇ ದಿನದ ಮಳೆಗಾಲದ ಅಧಿವೇಶನ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
ಇಂದು ಮೂರನೇ ದಿನದ ಮಳೆಗಾಲದ ಅಧಿವೇಶನ

Updated on: Aug 17, 2026 | 11:35 AM

LIVE NEWS & UPDATES

  • 17 Aug 2026 11:13 AM (IST)

    ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಮಂಕಾಳು ವೈದ್ಯ ನಾಮಪತ್ರ ಸಲ್ಲಿಕೆ!

    ವಿಧಾನಸಭೆ ಉಪಸಭಾಧ್ಯಕ್ಷ (ಡೆಪ್ಯೂಟಿ ಸ್ಪೀಕರ್) ಹುದ್ದೆಗೆ ಮಂಕಾಳು ವೈದ್ಯ ಅವರು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಲಕ್ಷ್ಮಣ ಸವದಿ, ಹೆಚ್.ಸಿ. ಬಾಲಕೃಷ್ಣ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಸಾಥ್ ನೀಡಿದರು.

  • 17 Aug 2026 11:12 AM (IST)

    ಹನೂರು ಗುಂಡೇಟು ಪ್ರಕರಣ: ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ವಿತರಣೆ!

    ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಎಂ.ಆರ್. ಮಂಜುನಾಥ್ ಹನೂರು ತಹಶೀಲ್ದಾರ್ ಚೈತ್ರಾ ಅವರ ಮೂಲಕ ಮೃತರ ಕುಟುಂಬಕ್ಕೆ ಸರ್ಕಾರದ 5 ಲಕ್ಷ ರೂ. ಹಾಗೂ ವೈಯಕ್ತಿಕ 10 ಲಕ್ಷ ರೂ. ಸೇರಿದಂತೆ ತಲಾ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

  • 17 Aug 2026 11:12 AM (IST)

    ಪರಿಷತ್ ಉಪಸಭಾಪತಿ ಚುನಾವಣೆ: ಅಭ್ಯರ್ಥಿ ಕಣಕ್ಕಿಳಿಸದೆ ಹಿಂದೆ ಸರಿದ ಮೈತ್ರಿಕೂಟ!

    ವಿಧಾನಪರಿಷತ್ ಉಪಸಭಾಪತಿ ಚುನಾವಣೆಯಿಂದ ಮೈತ್ರಿಕೂಟ ಹಿಂದೆ ಸರಿದಿದೆ. ಈಗಾಗಲೇ ಸಭಾಪತಿ ಚುನಾವಣೆಯಲ್ಲಿ ಸೋಲು ಕಂಡಿದ್ದು, ಸಂಖ್ಯಾಬಲದ ಕೊರತೆ ಅರಿತ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಮುಜುಗರ ತಪ್ಪಿಸಿಕೊಳ್ಳಲು ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಜಾಣ ತೀರ್ಮಾನ ಕೈಗೊಂಡಿದ್ದಾರೆ.

  • 17 Aug 2026 10:59 AM (IST)

    ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆ: ಕೋಲಾರದ ಶ್ರೀಕರ್ ಗೆ ಜೋಡಿ ಪ್ರಶಸ್ತಿ!

    ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಎಂ.ಎನ್. ಜಿಮ್ ಆಯೋಜಿಸಿದ್ದ ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಕಠಿಣ ಸ್ಪರ್ಧೆಯಲ್ಲಿ ಕೋಲಾರದ ಶ್ರೀಕರ್ ಅದ್ಭುತ ಪ್ರದರ್ಶನ ನೀಡಿ, ‘ಕೋಲಾರ ಅತ್ಯುತ್ತಮ ದೇಹದಾಢ್ಯ’ ಹಾಗೂ ‘ಮಿಸ್ಟರ್ ಕರ್ನಾಟಕ ಬೆಸ್ಟ್ ಪೋಸರ್’ ಟೈಟಲ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

  • 17 Aug 2026 10:58 AM (IST)

    ‘ವಂದೇ ಮಾತರಂ’ಗೆ ಅಗೌರವ ಆರೋಪ: ಕಾಂಗ್ರೆಸ್ ವಿರುದ್ಧ ರಾಯಚೂರಿನಲ್ಲಿ ಬಿಜೆಪಿ ಭಾರಿ ಪ್ರತಿಭಟನೆ

    ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ “ವಂದೇ ಮಾತರಂ” ಗೀತೆಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ, ರಾಯಚೂರಿನ ಅಂಬೇಡ್ಕರ್ ಸರ್ಕಲ್ ಬಳಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ವಿರುದ್ಧ ಧಿಕ್ಕಾರ ಕೂಗಿ ಭಾರಿ ಪ್ರತಿಭಟನೆ ನಡೆಸಿದರು.

  • 17 Aug 2026 10:58 AM (IST)

    ಕಾರು-ಬೈಕ್ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು, ಚಾಲಕ ಗಂಭೀರ!

    ಹೆಬ್ಬಾಳ-ಕೆ.ಆರ್.ಪುರಂ ಮುಖ್ಯರಸ್ತೆಯಲ್ಲಿ ಅತಿ ವೇಗವಾಗಿ ಬಂದ ಬೊಲೆನೊ ಕಾರು ಹಿಂದಿನಿಂದ ಬೈಕ್‌ಗೆ ಭೀಕರವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಪಲ್ಟಿಯಾದ ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 17 Aug 2026 10:58 AM (IST)

    ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ: ತಲೆಮರೆಸಿಕೊಂಡಿದ್ದ ಆರೋಪಿ ಗೊಟ್ಟಿಗೆರೆ ಮಂಜ ಬಂಧನ!

    ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ರಕ್ತಗಾಯಗೊಳಿಸಿ ಪರಾರಿಯಾಗಿದ್ದ ಆರೋಪಿ ಮಂಜುನಾಥ್ ಸಿ. ಅಲಿಯಾಸ್ ಗೊಟ್ಟಿಗೆರೆ ಮಂಜಣ್ಣನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್‌ನಲ್ಲಿ ಬೇರೊಬ್ಬರ ಹೆಸರಿನಲ್ಲಿ ರೂಮ್ ಬುಕ್ ಮಾಡಿ ಅಡಗಿದ್ದಾಗ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ.

  • 17 Aug 2026 10:57 AM (IST)

    ನೆಲಮಂಗಲ ಅಪ್ಪ-ಮಗ ಅನುಮಾನಾಸ್ಪದ ಸಾವು!

    ಚಿಕ್ಕಬಾಣಾವರದಲ್ಲಿ ಅಪ್ಪ-ಮಗ ಮಲಗಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದು, ಗಂಡ ಅಭಿನಂದನ್ ಮುಖದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ರಾತ್ರಿ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದ್ದು, ಹರಿಣಿ ತನ್ನ ಸ್ನೇಹಿತನಿಗೆ ಸಂಪರ್ಕದಲ್ಲಿದ್ದ ನಂಬರ್ ಆಧರಿಸಿ, ಆಕೆಯೇ ಕೊಲೆ ಮಾಡಿರುವ ಶಂಕೆಯಲ್ಲಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

     

  • 17 Aug 2026 10:57 AM (IST)

    ವರದಾನದಿಗೆ ಹಾರಿದ ತಾಯಿ-ಮಗಳ ರಕ್ಷಣೆ; ಯುವಕರ ಸಮಯಪ್ರಜ್ಞೆಗೆ ಶ್ಲಾಘನೆ

    ಕೌಟುಂಬಿಕ ಕಲಹದಿಂದ ವರದಾನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ-ಮಗಳನ್ನು ಚಿಕ್ಕಮಾಕೊಪ್ಪದ ಯುವಕರಾದ ಸಾಹಿಲ್, ಸೋನು ಹಾಗೂ ಯಾಸಿನ್ ಸಾಹಸದಿಂದ ರಕ್ಷಿಸಿದ್ದಾರೆ. ಮಗಳ ಅಳು ಕೇಳಿ ಓಡಿಬಂದು ಜೀವ ಉಳಿಸಿದ ಈ ಮೂವರು ಮೀನುಗಾರ ಯುವಕರ ಮಾನವೀಯತೆಗೆ ಜಿಲ್ಲಾ ಪೊಲೀಸರು ಗೌರವ ಸಲ್ಲಿಸಿದ್ದಾರೆ.

  • 17 Aug 2026 10:06 AM (IST)

    ಆನ್​ಲೈನ್ ಪೂಜೆ ನೆಪದಲ್ಲಿ ಹಣ ಪೀಕುತ್ತಿದ್ದವರ ವಿರುದ್ಧ ದೂರು!

    ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಗಸ್ಟ್ 17ರ ನಾಗರಪಂಚಮಿ ಹಿನ್ನೆಲೆ, AI ವಿಡಿಯೋ ಬಳಸಿ ‘ಆನ್‌ಲೈನ್ ಪೂಜಾ ಸೇವೆ’ ಹೆಸರಿನಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಬುಕಿಂಗ್ ಆ್ಯಪ್ ಮೂಲಕ 751 ರೂ. ನೀಡಿ ಬುಕಿಂಗ್ ಮಾಡಿದರೆ ಪೂಜೆ ವಿಡಿಯೋ ಹಾಗೂ ಪ್ರಸಾದ ಕಳುಹಿಸುವುದಾಗಿ ಜಾಹೀರಾತು ನೀಡಲಾಗಿತ್ತು. ಈ ವಿಡಿಯೋಗೂ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಕಾರ್ಯನಿರ್ವಹಣಾಧಿಕಾರಿ, ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • 17 Aug 2026 10:01 AM (IST)

    ಹೋಟೆಲ್, ಮೆಡಿಕಲ್ ಮುಂಭಾಗ ಇನ್ಮುಂದೆ QR ಕೋಡ್!

    ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಹೋಟೆಲ್ ಹಾಗೂ ಫಾರ್ಮಾ ಮೆಡಿಕಲ್ ಸ್ಟೋರ್‌ಗಳ ಮುಂದೆ ಕ್ಯೂಆರ್ ಕೋಡ್ (QR Code) ಅಳವಡಿಸಲು ಮುಂದಾಗಿದ್ದೇವೆ. ಸಾರ್ವಜನಿಕರು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ದೂರು ಹಾಗೂ ತೊಂದರೆಗಳನ್ನು ನೇರವಾಗಿ ದಾಖಲಿಸಬಹುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

  • 17 Aug 2026 09:58 AM (IST)

    ಉಪಸಭಾಪತಿ ರೇಸ್: ಉಮಾಶ್ರೀ ಅಂತಿಮ?

    ರಾಜ್ಯ ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಇಂದು ಮಧ್ಯಾಹ್ನ 12 ಗಂಟೆಯೊಳಗೆ ಪ್ರಸ್ತಾಪ ಸಲ್ಲಿಸಲು ಗಡುವು ವಿಧಿಸಲಾಗಿದೆ. ಕಾಂಗ್ರೆಸ್‌ನಿಂದ ಹಿರಿಯ ನಾಯಕಿ ಉಮಾಶ್ರೀ ಅವರ ಹೆಸರನ್ನು ಪ್ರಸ್ತಾವಿಸಿ ಇಂದು ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆಯಿದೆ.

Breaking News Today Live Updates in Kannada: ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಮುಂಗಾರು ಅಧಿವೇಶನದ 3ನೇ ದಿನದ ಕಲಾಪ ಇಂದು ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿದೆ. ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ-ಜೆಡಿಎಸ್ ವಿಪಕ್ಷಗಳು, ಸದನದ ಒಳಗೆ ಹಾಗೂ ಹೊರಗೆ ತೀವ್ರ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇದರೊಂದಿಗೆ ಪಿಂಚಣಿ ಸ್ಥಗಿತ, ಬಿಡದಿ ಟೌನ್‌ಶಿಪ್ ಹಾಗೂ ಆರ್‌ಎಸ್‌ಎಸ್ ಕುರಿತ ಮಸೂದೆಗಳ ವಿರುದ್ಧವೂ ಕಲಾಪದಲ್ಲಿ ಭಾರಿ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಾರಾಪೀಠದ ನಾಲ್ಕು ಅಂತಸ್ತಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಮುಂಜಾನೆ 5 ಗಂಟೆಗೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಿದ್ರೆಯಲ್ಲಿದ್ದ ಕನಿಷ್ಠ ಏಳು ಮಂದಿ ಸಜೀವ ದಹನಗೊಂಡಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

Published On - 9:57 am, Mon, 17 August 26

Loading...
Unable to load recommendations.
Follow Us