ಹೈಕೋರ್ಟ್ ಆದೇಶವನ್ನೇ ನಕಲಿ ಮಾಡಿ ಲಕ್ಷಾಂತರ ರೂ. ವಂಚನೆ: ಗರ್ಲ್ ಫ್ರೆಂಡ್ಗೂ ಪಂಗನಾಮ ಹಾಕಿದ್ದ ಆರೋಪಿ ಅಂದರ್
‘‘ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿರುವ ಹಣವನ್ನು ಬಿಡಿಸಿಕೊಳ್ಳಲು ಸ್ವಲ್ಪ ನಗದು ಬೇಕಾಗಿದೆ. ಹೈಕೋರ್ಟ್ ಆದೇಶ ಕೂಡ ನಮ್ಮ ಪರ ಇದೆ’’ ಎಂದು ಹೈಕೋರ್ಟ್ ಆದೇಶದ ಪ್ರತಿಯನ್ನೇ ಹೋಲು ನಕಲಿ ಆದೇಶ ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ ಮಾಡಿದವರು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಯೊಬ್ಬನಂತೂ ತನ್ನ ಗರ್ಲ್ಫ್ರೆಂಡ್ಗೆ ಕೂಡ ವಂಚನೆ ಎಸಗಿದ್ದಾನಂತೆ!

ಬೆಂಗಳೂರು, ಮಾರ್ಚ್ 6: ಕರ್ನಾಟಕ ಹೈಕೋರ್ಟ್ (Karnataka High Court) ಆದೇಶವನ್ನೇ ನಕಲಿ ಮಾಡಿ ಲಕ್ಷಾಂತರ ರೂಪಾಯಿ ಹಣ (Money Fraud) ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು (Vidhan Soudha Police) ಬಂಧಿಸಿದ್ದಾರೆ. ಬಂಧಿತರು ಕುಣಿಗಲ್ (Kunigal) ಮೂಲದ ವಿಜೇತ್, ಲೋಹಿತ್ ಆಗಿದ್ದಾರೆ. ಆರೋಪಿಗಳು ಹೈಕೋರ್ಟ್ ನೀಡುವ ಆದೇಶದ ಪ್ರತಿಯನ್ನೇ ಹೋಲುವ ನಕಲಿ ಆದೇಶ ಪ್ರತಿ ತಯಾರಿಸುತ್ತಿದ್ದರು. ಅದನ್ನು ಬಳಸಿಕೊಂಡು ಅನೇಕರನ್ನು ವಂಚಿಸಿದ್ದರು. ಒಬ್ಬ ಆರೋಪಿಯಂತೂ, ತನ್ನ ಗರ್ಲ್ ಫ್ರೆಂಡನ್ನೇ ವಂಚಿಸಿದ್ದ ಎಂಬುದು ಗೊತ್ತಾಗಿದೆ.
ಆರೋಪಿ ವಿಜೇತ್, ಜಾರಿ ನಿರ್ದೇಶನಾಲಯ (ಇಡಿ) ಹಣ ಮುಟ್ಟುಗೋಲು ಹಾಕಿಕೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದ್ದು ಎಂಬ ನಂಬಿಕೆ ಬರುವ ರೀತಿಯಲ್ಲಿ ಹೈಕೋರ್ಟ್ ಆದೇಶವನ್ನೇ ಹೋಲುವಂತೆ ನಕಲಿ ಆದೇಶ ಪ್ರತಿ ತಯಾರಿಸಿದ್ದ.
ಖತರ್ನಾಕ್ ಖದೀಮರು ಮಾಡಿದ್ದೇನು?
ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ, ಹೈಕೋರ್ಟ್ ಈ ತಮ್ಮ ಪರ ತೀರ್ಪು ನೀಡಿದ್ದು, ಸೀಜ್ ಮಾಡಿದ ಹಣವನ್ನು ಜಾರಿ ನಿರ್ದೇಶನಾಲಯ ನಮಗೆ ನೀಡಬೇಕಿದೆ. ಆ ಹಣವನ್ನು ಬಿಡಿಸಿಕೊಳ್ಳಲು ಸ್ವಲ್ಪ ಹಣ ಬೇಕಾಗಿದೆ. ಮೊತ್ತ ಕೈಸೇರಿದ ಕೂಡಲೇ ಹಿಂದಿರುಗಿಸುವುದಾಗಿ ಆರೋಪಿಗಳು ಜನರನ್ನು ವಂಚಿಸುತ್ತಿದ್ದರು. ಹೈಕೋರ್ಟ್ ಆದೇಶವನ್ನೇ ಹೋಲುವ ನಕಲಿ ಪ್ರತಿ ತಯಾರಿಸಿ ಜನರಲ್ಲಿ ನಂಬಿಕೆ ಬರುವಂತೆ ಮಾಡಿ ಹಣ ಪೀಕುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಆರೋಪಿಗಳು ಹೇಳುತ್ತಿದ್ದುದೇನು?
ನಮಗೆ ಇಡಿ ಅಧಿಕಾರಿಗಳಿಂದ ಕೋಟ್ಯಂತರ ರೂ. ಹಣ ರಿಲೀಸ್ ಆಗಬೇಕಿದೆ. ಅದಕ್ಕೆ ಹೈಕೋರ್ಟ್ ಆದೇಶ ಕೂಡ ಮಾಡಿದೆ. ಆದರೆ, ಈಗ ನನಗೆ ಇದನ್ನು ಬಿಡಿಸಿಕೊಳ್ಳಲು ಹಣ ಕಟ್ಟಬೇಕಿದೆ. ಇಡಿ ಕೊಟ್ಟ ಬಳಿಕ ಹಣ ವಾಪಸ್ ಕೊಡುವುದಾಗಿ ಆರೋಪಿಗಳು ಹೇಳಿದ್ದರು. ಇದನ್ನು ನಂಬಿ ಹಣ ಕೊಟ್ಟ ಮೂವರಿಗೆ ವಂಚನೆ ಎಸಗಿದ್ದರು. ಸುಮಾರು 70 ಲಕ್ಷ ರೂಪಾಯಿಗೂ ಹೆಚ್ಚಿನ ಹಣ ಪಡೆದು ವಂಚಿಸಿದ್ದ್ದರು.
ಇದನ್ನೂ ಓದಿ: ಬೆಂಗಳೂರು: ಯುವತಿ ಜತೆ ಲಿವ್ ಇನ್ನಲ್ಲಿದ್ದ ಉತ್ತರ ಪ್ರದೇಶದ ಯುವಕ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಆರೋಪಿ ವಿಜೇತ್ ತನ್ನ ಗರ್ಲ್ಫ್ರೆಂಡ್ ಬಳಿಯಿಂದಲೂ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ. ಸದ್ಯ ವಿಧಾನಸೌಧ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.