ರಾಜ್ಯ ಕಾಂಗ್ರೆಸ್ನಲ್ಲಿ ಬಗೆಹರಿಯದ ಗೊಂದಲ: ಸಚಿವ ಸ್ಥಾನ ಸಿಕ್ಕವರದ್ದೊಂದು, ಸಿಗದವರದ್ದೊಂದು ಕಥೆ
ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸಂಪುಟದ ಗೊಂದಲ ಮುಂದುವರಿದಿದೆ. ಖಾತೆ ಹಂಚಿಕೆ ಬಗ್ಗೆ ಅಸಮಾಧಾನಗೊಂಡಿರುವ ಕೃಷ್ಣಭೈರೇಗೌಡ ಬಿಡಿಎ ಮತ್ತು ಬಿಎಂಆರ್ಡಿಎ ಒಳಗೊಂಡ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಸಚಿವ ಸ್ಥಾನಕ್ಕಾಗಿ ಜಮೀರ್ ಅಹ್ಮದ್ ಸೇರಿದಂತೆ ಹಲವು ಶಾಸಕರು ಭಾರಿ ಲಾಬಿ ನಡೆಸುತ್ತಿದ್ದು, ನೂತನ ಸಚಿವರ 2ನೇ ಪಟ್ಟಿ ಶೀಘ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು, ಜೂನ್ 14: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಚಾರವಾಗಿ ಕಾಂಗ್ರೆಸ್ನಲ್ಲಿ ಗೊಂದಲ ಮುಂದುವರಿದಿದೆ. ನೂತನ ಸಚಿವರಿಗೆ ಈಗಾಗಲೇ ಖಾತೆ ಹಂಚಿಕೆಯಾಗಿದ್ದರೂ ಅಸಮಾಧಾನ ಮಾತ್ರ ಮುಗಿದಿಲ್ಲ. ಬೇಸರಗೊಂಡಿದ್ದ ಹಿರಿಯ ಸಚಿವರ ಪೈಕಿ ಕೆಲವರನ್ನು ಮನವೊಲಿಸಲಾಗಿದೆಯಾದರೂ ಸಂಪೂರ್ಣವಾಗಿ ಇದಿನ್ನೂ ಬಗೆಹರಿದಿಲ್ಲ. ಮತ್ತೊಂದೆಡೆ ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಕುತೂಹಲವೂ ಹೆಚ್ಚಿದ್ದು ಮತ್ರಿಗಿರಿ ಯಾರಿಗೆಲ್ಲ ಎಂಬ ಬಗ್ಗೆಯೂ ಯಾವುದೇ ಉತ್ತರ ಇನ್ನೂ ಸಿಕ್ಕಿಲ್ಲ.
ಖಾತೆ ಬಗ್ಗೆ ಅಸಮಾಧಾನ
ತಮಗೆ ನೀಡಲಾಗಿರುವ ಖಾತೆಗಳ ಬಗ್ಗೆ ಕೆಲ ಹಿರಿಯ ಸಚಿವರೇ ಮುನಿಸಿಕೊಂಡಿರೋದೀಗ ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಬಿಡಿಎ ಮತ್ತು ಬಿಎಂಆರ್ಡಿಎ ಒಳಗೊಂಡ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿರುವ ಕೃಷ್ಣಭೈರೇಗೌಡರು, ಖಾತೆ ಹಂಚಿಕೆ ಆಗಿ 10 ದಿನಗಳು ಕಳೆದರೂ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಇದೇ ವಿಷಯವಾಗಿ ದೆಹಲಿಯ ಹೈಕಮಾಂಡ್ ನಾಯಕರ ಜೊತೆ ಸರಣಿ ಸಭೆ ನಡೆಸಿ ಮನವಿ ಮಾಡಿರುವ ಅವರು ಸಿಎಂ ಡಿಕೆ ಶಿವಕುಮಾರ್ ಜೊತೆಗೂ ಒಂದೆರಡು ಸುತ್ತು ಚರ್ಚೆ ನಡೆಸಿದ್ದಾರೆ. ಹೀಗಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ; ಅಡ್ಡ ಮತದಾನದ ಭೀತಿಯಲ್ಲಿ ಜೆಡಿಎಸ್, ಕಾಂಗ್ರೆಸ್
ಮಂತ್ರಿಗಿರಿ ಪಡೆಯಲು ಪೈಪೋಟಿ
ಖಾತೆ ಕ್ಯಾತೆ ನಡುವೆ ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿಯೂ ಕಾಂಗ್ರೆಸ್ನಲ್ಲಿ ಜೋರಾಗಿಯೇ ನಡೆಯತೊಡಗಿದೆ. ಹೈಕಮಾಂಡ್ನಿಂದ ಪ್ರಕಟವಾಗಲಿರುವ ಎರಡನೇ ಪಟ್ಟಿಯಲ್ಲಿ ಹೇಗಾದರೂ ಸ್ಥಾನಗಿಟ್ಟಿಸಬೇಕೆಂ ನಿಟ್ಟಿನಲ್ಲಿ ಆಕಾಂಕ್ಷಿ ಶಾಸಕರು ಸರ್ಕಸ್ ಆರಂಭಿಸಿದ್ದಾರೆ. ಅದರಲ್ಲೂಸಚಿವ ಸಂಪುಟ ಸೇರ್ಪಡೆಯಾಗಲು ಜಮೀರ್ ಅಹ್ಮದ್ ಭಾರಿ ಕಸರತ್ತು ನಡೆಸುತ್ತಿದ್ದು, ರಾಜ್ಯ ನಾಯಕರ ಮನೆ ಸುತ್ತುತ್ತಿದ್ದಾರೆ. ಈ ಸಂಬಂಧ ಸಿಎಂ ಡಿಕೆಶಿ ಭೇಟಿಯಾಗಿ ಮಾತುಕತೆ ನಡೆಸಿರುವ ಅವರು, ಎರಡು ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೂ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:51 am, Sun, 14 June 26




