Hanuru Firing Case: ಶೂಟೌಟ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಅರಣ್ಯ ಇಲಾಖೆ ನಡೆಗೆ ವ್ಯಕ್ತವಾಯ್ತು ಭಾರಿ ಅನುಮಾನ!
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಮೂವರ ಎನ್ಕೌಂಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶನಿವಾರ (ಆ.15) ನಡೆದ ಶೂಟೌಟ್ ಬಳಿಕವೂ ದುಷ್ಕರ್ಮಿಗಳು ಹೊಳೆ ಮುರುದಟ್ಟಿ ಕಳ್ಳಬೇಟೆ ತಡೆ ಶಿಬಿರದಲ್ಲಿ ಜಿಲೆಟಿನ್ ಸ್ಪೋಟಿಸಿದ್ದ ಮಾಹಿತಿಯನ್ನು ಗೌಪ್ಯವಾಗಿಡಲಾಗಿತ್ತು ಎಂಬುದು ಈಗ ಬೆಳಕಿಗೆ ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಖ್ಯಾಂಶಗಳು
- ಹನೂರಿನ ಎನ್ಕೌಂಟರ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು ಗೊಂದಲ ಮೂಡಿಸಿದೆ.
- ಹೊಳೆ ಮುರುದಟ್ಟಿ ಕಳ್ಳಬೇಟೆ ಶಿಬಿರವನ್ನು ಸ್ಪೋಟಿಸಿದ ದುಷ್ಕರ್ಮಿಗಳು ಮಾಹಿತಿ ಮುಚ್ಚಿಟ್ಟ ಸಿಬ್ಬಂದಿ.
- ನಾಲ್ಕನೇ ಆರೋಪಿ ಮಹಿಮ್ ದಾಸ್ ನಾಪತ್ತೆಯಾಗಿದ್ದು ಅರಣ್ಯ ಇಲಾಖೆ ನಡೆಗೆ ಅನುಮಾನ.
ಚಾಮರಾಜನಗರ, ಆಗಸ್ಟ್ 19: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಮೂವರ ಎನ್ಕೌಂಟರ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಸಂಪೂರ್ಣ ಘಟನೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಶೂಟೌಟ್ ನಡೆದ ನಂತರ ಆ್ಯಂಟಿ ಪೋಚಿಂಗ್ ಕ್ಯಾಂಪ್ಗಳಿಗೆ ನುಗ್ಗಿ ದುಷ್ಕರ್ಮಿಗಳು ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಕಟ್ಟಡವನ್ನು ಸ್ಪೋಟಿಸಿದ್ದು, ಇದರ ಸುಳಿವು ಬಿಟ್ಟುಕೊಡದ ಅರಣ್ಯ ಸಿಬ್ಬಂದಿಯ ನಡೆ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕಳ್ಳ ಬೇಟೆ ಶಿಬಿರ ಸ್ಪೋಟ: ಮುಚ್ಚಿಡಲಾಯಿತೇ ಮಾಹಿತಿ?
ಆಗಸ್ಟ್ 15ರಂದು ಶೂಟೌಟ್ ಪ್ರಕರಣ ಬೆಳಕಿಗೆ ಬಂದ ನಂತರ ದಟ್ಟ ಕಾನನದ ಒಳಗಿರುವ ಹೊಳೆ ಮುರುದಟ್ಟಿ ಕಳ್ಳ ಬೇಟೆ ತಡೆ (APC) ಕ್ಯಾಂಪ್ಗೆ ಆಗಸ್ಟ್ 17 ರಂದು ದುಷ್ಕರ್ಮಿಗಳು ನುಗ್ಗಿ, ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಕಟ್ಟಡವನ್ನು ಸ್ಪೋಟಿಸಿದ್ದಾರೆ. ಕಾಡಿನೊಳಗೆ ರಾಜಾರೋಷವಾಗಿ ತೆರಳಿ ಅರಣ್ಯ ಇಲಾಖೆಯ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿದ್ದು ಯಾರು? ಎನ್ಕೌಂಟರ್ಗೆ ಪ್ರತಿಯಾಗಿ ಉದ್ರಿಕ್ತರು ಕೌಂಟರ್ ಅಟ್ಯಾಕ್ ಮಾಡಿದರೇ ಅಥವಾ ಇಷ್ಟೊಂದು ಜಿಲೆಟಿನ್ ಸ್ಪೋಟಕಗಳು ಅವರ ಕೈಗೆ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗಳು ಕಾಡುತ್ತಿವೆ. ಇಷ್ಟೆಲ್ಲಾ ದೊಡ್ಡ ಘಟನೆ ನಡೆದರೂ ಅರಣ್ಯ ಸಿಬ್ಬಂದಿ ಈ ಮಾಹಿತಿಯನ್ನು ಮುಚ್ಚಿಟ್ಟಿರುವುದು ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ.
4 ಆ್ಯಂಟಿ ಪೋಚಿಂಗ್ ಕ್ಯಾಂಪ್ಗಳ ಬ್ಲಾಸ್ಟ್
ಅರಣ್ಯ ಇಲಾಖೆಯ ನಾಲ್ಕು ಆ್ಯಂಟಿ ಪೋಚಿಂಗ್ ಕ್ಯಾಂಪ್ಗಳನ್ನು (APC) ಜಿಲೆಟಿನ್ ಬಳಸಿ ಕಿಡಿಗೇಡಿಗಳು ಬ್ಲಾಸ್ಟ್ ಮಾಡಿದ್ದಾರೆ. ವನ್ಯಧಾಮದ ಒಳ್ಳಮರದ ಹಟ್ಟಿ, ಮತ್ತಿಪುರ, ಬೂದಿಕೆರೆ ಹಾಗೂ ಕಳ್ಳಿದೊಡ್ಡಿ ಕ್ಯಾಂಪ್ಗಳು ಸಂಪೂರ್ಣ ದ್ವಂಸಗೊಂಡಿದ್ದು, ಅರಣ್ಯ ರಕ್ಷಣಾ ವ್ಯವಸ್ಥೆಯನ್ನೇ ಧ್ವಂಸಗೊಳಿಸುವ ಹಂತಕ್ಕೆ ದುಷ್ಕರ್ಮಿಗಳು ತಲುಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ ಹನೂರು ಪ್ರಕರಣ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ
4ನೇ ಆರೋಪಿ ನಾಪತ್ತೆ ಮತ್ತು ಆಸ್ಪತ್ರೆಯ ಡ್ರಾಮಾ
ಇನ್ನೊಂದೆಡೆ, ಪ್ರಕರಣದ ನಾಲ್ಕನೇ ಆರೋಪಿ ಮಹಿಮ್ ದಾಸ್ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ದಿಢೀರ್ ನಾಪತ್ತೆಯಾಗಿದ್ದಾನೆ. ಆಸ್ಪತ್ರೆಯಲ್ಲಿದ್ದಾಗ ಆತನನ್ನು ವಶಕ್ಕೆ ಪಡೆಯಲು ಅರಣ್ಯ ಸಿಬ್ಬಂದಿ ಯಾಕೆ ಮುಂದಾಗಲಿಲ್ಲ? ಪ್ರಸ್ತುತ ಅಜ್ಞಾತ ಸ್ಥಳದಲ್ಲಿ ಕುಳಿತು ವಿಡಿಯೋಗಳನ್ನು ಹರಿಬಿಡುತ್ತಿರುವ ಮಹಿಮ್ ದಾಸ್ ನಡೆ ಅರಣ್ಯ ಇಲಾಖೆಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಅರಣ್ಯ ಇಲಾಖೆಯಿಂದಲೂ ತನಿಖೆ ಆರಂಭ
ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತನಿಖೆ ಚುರುಕುಗೊಳಿಸಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಆಗಮಿಸಿದ ಹಿರಿಯ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಸಿಬ್ಬಂದಿ ನಾಪತ್ತೆಯಾಗಿರಲಿಲ್ಲ, ನಮ್ಮ ಸಂಪರ್ಕದಲ್ಲೇ ಇದ್ದರು ಎಂದು ಎಸಿಎಫ್ ಮರಿಸ್ವಾಮಿ ಸ್ಪಷ್ಟನೆ ನೀಡಿದ್ದು, ಅಧಿಕಾರಿಗಳು ಘಟನೆಯ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 am, Wed, 19 August 26



