ನಮ್ಮದು ವರ್ಷಕ್ಕೆ 2 ಸಾವಿರ ಕೋಟಿ ವಹಿವಾಟು: ವಿದೇಶದಲ್ಲಿ ಹೂಡಿಕೆಗೆ ಪ್ಲ್ಯಾನ್ ಇತ್ತು ಎಂದ ಸಚಿವ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ ಸಾಮ್ರಾಜ್ಯದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ವಿಚಾರ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ನಮ್ಮ ವಾರ್ಷಿಕ ವಹಿವಾಟೇ 2 ಸಾವಿರ ಕೋಟಿ ಇದೆ. ಮಕ್ಕಳ ಹೆಸರಿನಲ್ಲಿ ಆಫ್ರಿಕಾದಲ್ಲಿ ಕಂಪನಿ ಇರೋದು ನಿಜ, ಅದನ್ನ ಐಟಿಗೆ ಈಗಾಗಲೇ ತೋರಿಸಿದ್ದೇವೆ ಎಂದಿದ್ದಾರೆ.

ನಮ್ಮದು ವರ್ಷಕ್ಕೆ 2 ಸಾವಿರ ಕೋಟಿ ವಹಿವಾಟು: ವಿದೇಶದಲ್ಲಿ ಹೂಡಿಕೆಗೆ ಪ್ಲ್ಯಾನ್ ಇತ್ತು ಎಂದ ಸಚಿವ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ
Image Credit source: tv9 kannada
Edited By:

Updated on: Sep 11, 2026 | 5:38 PM

ಬೆಂಗಳೂರು, ಸೆಪ್ಟೆಂಬರ್​ 11: ಸಚಿವ ಸತೀಶ್ ಜಾರಕಿಹೊಳಿಗೆ ಸೇರಿದ್ದ ಬೆಂಗಳೂರು, ಬೆಳಗಾವಿ ಸೇರಿ ಬರೋಬ್ಬರಿ 18 ಕಡೆ ಸತತ 36 ಗಂಟೆಗಳ ಕಾಲ ನಡೆದಿದ್ದ ಇಡಿ ಅಧಿಕಾರಿಗಳ ತಲಾಶ್ ನಿನ್ನೆ ಅಂತ್ಯವಾಗಿದೆ. ಇಂಚಿಂಚೂ ಜಾಲಾಡಿರುವ ಅಧಿಕಾರಿಗಳಿಗೆ 2 ಕೋಟಿ ರೂ. ನಗದು, ಅನಾಮಧೇಯ ಆಸ್ತಿ ಪತ್ರಗಳು ಹಾಗೂ ವಿದೇಶಿ ಹೂಡಿಕೆಯ ಸ್ಫೋಟಕ ದಾಖಲೆಗಳು ಲಭ್ಯವಾಗಿವೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ‘ವಿದೇಶದಲ್ಲಿ ಗಣಿಗಾರಿಕೆ ನಡೆಸುವ ಮತ್ತು ಹೂಡಿಕೆ ಮಾಡುವ ಚಿಂತನೆ ಇತ್ತೇ ವಿನಃ ಇನ್ನೂ ಎಲ್ಲಿಯೂ ಹೂಡಿಕೆ ಮಾಡಿಲ್ಲ’ ಎಂದಿದ್ದಾರೆ.

ಗಣಿಗಾರಿಕೆಯಲ್ಲಿ ಹೂಡಿಕೆ ಮಾಡಲು ಹುಡುಕುತ್ತಿದ್ದೆ: ಸಚಿವ ಸತೀಶ್ ಜಾರಕಿಹೊಳಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಿದೇಶಗಳಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಮಾಡುವ ಯೋಚನೆಯಿದ್ದು, ಹೂಡಿಕೆಗಾಗಿ ಬೇರೆ ಬೇರೆ ದೇಶಗಳಲ್ಲಿ ಹುಡುಕಾಟ ನಡೆಸುತ್ತಿದ್ದೆ, ಆದರೆ ಇನ್ನೂ ಯಾವುದೇ ಇನ್ವೆಸ್ಟ್‌ಮೆಂಟ್ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸಿಕ್ಕ ಹಣ ನಮ್ಮದೇ: 37 ಗಂಟೆಗಳ ಕಾಲ ಇಡಿ ದಾಳಿಯ ಮಾಹಿತಿ ಹಂಚಿಕೊಂಡ ಸತೀಶ್ ಜಾರಕಿಹೊಳಿ

‘ಇನ್ನು ದಾಳಿ ವೇಳೆ ಸಿಕ್ಕಿರುವ ಎರಡು ಕೋಟಿ ರೂ ಹಣದ ಮೂಲ ನಮ್ಮದೇ, ಅದು ಬೇರೆಯವರದ್ದಲ್ಲ. ನಮ್ಮ ಸಂಸ್ಥೆಯಲ್ಲಿ ವರ್ಷಕ್ಕೆ 2 ಸಾವಿರ ಕೋಟಿ ರೂ ವಹಿವಾಟು ನಡೆಯುತ್ತದೆ. ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಸಂಬಳ ಒಂದು ಲಕ್ಷ ರೂ ಇದೆ. ಮಾರುಕಟ್ಟೆಗೆ ಹೋದರೆ ಒಂದು ಲಕ್ಷ ರೂ ಖರ್ಚು ಮಾಡುತ್ತಾರೆ’ ಎಂದು ಮಾಹಿತಿ ನೀಡಿದರು.

ಮಗಳು ಮತ್ತು ಮಗನ ಹೆಸರಿನಲ್ಲಿ ಆಫ್ರಿಕಾದಲ್ಲಿ ಕಂಪನಿ

‘ತಮ್ಮ ಮಗಳು ಮತ್ತು ಮಗನ ಹೆಸರಿನಲ್ಲಿ ಆಫ್ರಿಕಾದಲ್ಲಿ ಕಂಪನಿ ಇರುವುದು ನಿಜ’ ಎಂದಿರುವ ಸಚಿವರು, ‘ಆ ಕಂಪನಿಯು ಕೇವಲ ಅಸ್ತಿತ್ವದಲ್ಲಿದೆ ಅಷ್ಟೇ, ಸದ್ಯಕ್ಕೆ ಯಾವುದೇ ವಹಿವಾಟು ನಡೆಯುತ್ತಿಲ್ಲ. ಕಂಪನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿದೆ. ಜಾರಿ ನಿರ್ದೇಶನಾಲಯಕ್ಕೆ ಈ ದಾಖಲೆಗಳನ್ನು ನೀಡುವ ಅಗತ್ಯವಿರಲಿಲ್ಲ, ಆದರೂ ಈಗ ಇ.ಡಿಯವರು ಕೇಳಿದರೆ ಎಲ್ಲ ದಾಖಲೆಗಳನ್ನು ಒದಗಿಸಲು ಸಿದ್ಧ’ ಎಂದಿದ್ದಾರೆ.

ಕಾಂಗ್ರೆಸ್ ಟಾರ್ಗೆಟ್; ರಾಜಕೀಯ ಪ್ರೇರಿತ ದಾಳಿ: ಡಿಕೆ ಶಿವಕುಮಾರ್

ಇನ್ನು ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ‘ಸತೀಶ್ ಜಾರಕಿಹೊಳಿ ಅವರು ಯಾವುದೇ ತಪ್ಪು ಮಾಡಿಲ್ಲ, ಕಾನೂನಿನ ಚೌಕಟ್ಟಿನಲ್ಲೇ ವ್ಯವಹಾರ ನಡೆಸಿದ್ದಾರೆ. ಇನ್ನು ಮೂರ್ನಾಲ್ಕು ಜನರ ಮೇಲೆ ದಾಳಿ ಆಗುತ್ತೆ. ಕೆಲವರನ್ನ ಟ್ರ್ಯಾಪ್ ಮಾಡುತ್ತಿದ್ದಾರೆ ಎಂದು ಮಾಹಿತಿ ಬಂದಿದೆ. ಇಡೀ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡಿದ್ದಾರೆ. ಏಕೆ ವಿರೋಧ ಪಕ್ಷದವರ ಮೇಲೆ ದಾಳಿ ಆಗುತ್ತಿಲ್ಲ? ಇದೆಲ್ಲಾ ರಾಜಕೀಯ ಪ್ರೇರಿತ ದಾಳಿ ಆಗಿದೆ. ನಾವೆಲ್ಲಾ ಇದಕ್ಕೆ ಹೆದರಲ್ಲ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Satish Jarkiholi on ED Raid: ವಿದೇಶದಲ್ಲಿ ಇನ್ನೂ ಹೂಡಿಕೆ ಮಾಡಿಲ್ಲ ಮಾಡ್ಬೇಕು ಅಂತ ಪ್ಲಾನ್ ಇತ್ತು |#TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us